ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಸದಾ ನ್ಯಾಯಾಲಯಕ್ಕೆ ಬರುತ್ತಿದ್ದ ಜನರಿಗೆ ಆಶ್ಚರ್ಯದ ಜೊತೆಗೆ ಸಾಮೂಹಿಕ ವಿವಾಹದ ಖುಷಿ, ಸಂತಸ ಮನೆ ಮಾಡಿದ್ದು, ಹತ್ತಾರು ವರ್ಷಗಳಿಂದ ಕಿತ್ತಾಡುತ್ತ ದೂರವಿದ್ದವರನ್ನು ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಪುನಃ ಒಂದು ಮಾಡಿದೆ. ಅಲ್ಲಿ ನೆರೆದಿದ್ದವರು ಶುಭ ಹಾರೈಸಿದ್ದಾರೆ.
ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 13 ದಂಪತಿಗಳು ವೈಮನಸ್ಸು ತೊರೆದು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಂದಾಗಿದ್ದಾರೆ. 9 ಜೋಡಿ ಹಾಗೂ ಹಲವು ತಾಲೂಕುಗಳ ನ್ಯಾಯಾಲಯದ 4 ದಂಪತಿಗಳು ಜೊತೆಗೂಡಿದರು. ಹಲವು ನ್ಯಾಯಾಧೀಶರು ಹಾಗೂ ವಕೀಲರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಈ ಕೋರ್ಟ್ ಆವರಣದಲ್ಲಿ ಅತ್ತ ಗಂಡ, ಇತ್ತ ಹೆಂಡತಿ ತಮ್ಮ ಮಕ್ಕಳನ್ನು ಕರೆದುಕೊಂಡು ಸುತ್ತಾಡುತ್ತಿದ್ದರು. ಲಾಯರ್ಗಳು ಇವರಿಗೆ ತಿಳಿ ಹೇಳುತ್ತಿದ್ದರು. ಇವರು ಸುತ್ತಾಡುವುದನ್ನು ನೋಡಿದ ಮನಸ್ಸುಗಳು, ಮಮ್ಮಲ ಮರುಗುತ್ತಿದ್ದವು. ಇನ್ನು ಮಕ್ಕಳು ಚಿಕ್ಕವು, ಗಂಡ ಜತೆಗಿಲ್ಲ, ಜೀವನ ಹೇಗೆ ಮಾಡಬೇಕೆಂಬ ಗುನುಗುವ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಇವೆಲ್ಲಕ್ಕೂ ಉತ್ತರ ಎನ್ನುವಂತೆ ಒಂದು ರೀತಿಯಲ್ಲಿ ಸಾಮೂಹಿಕ ವಿವಾಹದ ಕಲ್ಯಾಣ ಮಂಟಪವಾಗಿತ್ತು. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿ ರಾಜೇಶ್ವರಿ ಎನ್ ಹೆಗಡೆ ಅವರೇ ಒಂದು ರೀತಿಯಲ್ಲಿ ಪ್ರಧಾನ ಪುರೋಹಿತರಾಗಿ ವಧು-ವರರಿಗೆ ಶುಭ ಹಾರೈಸುತ್ತಿದ್ದರು. ಈ ನಡುವೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಎಚ್ ಅರುಣ್ಕುಮಾರ್ ಒಂದಾದ ದಂಪತಿಗೆ ಸಿಹಿ ತಿನಿಸಿ ಶುಭ ಹಾರೈಸಿದರು.
ಹತ್ತಾರು ವರ್ಷಗಳಿಂದ ಪತಿ, ಪತ್ನಿ ಪ್ರತ್ಯೇಕ ಜೀವನ ಮಾಡುತ್ತಿದ್ದ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ದಂಪತಿಗಳು ವಕೀಲರ ಮೂಲಕ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತಿದ್ದರು. ಆದರೆ ಇವರೆಲ್ಲ ಇವುಗಳನ್ನು ಕೈ ಬಿಟ್ಟು ಮತ್ತೆ ಒಂದಾದರು. ನ್ಯಾಯ ವಿಲೇವಾರಿ ತ್ವರಿತಗೊಳಿಸಲು ಈ ಲೋಕ್ ಅದಾಲತ್ ಮಾಡಲಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಐದು ಸಾವಿರ ಪ್ರಕರಣಗಳಿದ್ದವು.
ಇವುಗಳಲ್ಲಿ 3,600 ಪ್ರಕರಣಗಳು ಇತ್ಯರ್ಥವಾಗಿದ್ದು, ಇವುಗಳಲ್ಲಿ 13 ಜೋಡಿಗಳು ಒಂದಾಗಿರುವುದು ವಿಶೇಷ. ಈ ವೇಳೆ ಇನ್ನೂ ಕೆಲವರು ಭಾವುಕರಾಗಿ ಕಣ್ಣೀರು ಸುರಿಸಿದರು. ಗಂಡ ಸರಿಯಿಲ್ಲ ಎಂದು ಹೇಳುವ ಬದಲು ಗಂಡನನ್ನೇ ಮಗನಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಮಹಿಳೆಯೊಬ್ಬರು ಹೇಳಿ ಅಚ್ಚರಿ ಮೂಡಿಸಿದರು. ಇದೇ ರೀತಿ ಹಲವರು ಮತ್ತೆ ಹೊಸ ಜೀವನ ಆರಂಭಿಸಲು ನಿರ್ಧರಿಸಿದರು.
ಈ ಸುದ್ದಿ ಓದಿದ್ದೀರಾ? ಶೈಕ್ಷಣಿಕ ಸುಧಾರಣೆಗಳಿಗೆ ನಾಂದಿ ಹಾಡಿದ ಹೊಸ ಪರೀಕ್ಷಾ ವಿಧಾನ: ಸಿಎಂ ಸಿದ್ದರಾಮಯ್ಯ
ಕೆಎಸ್ಆರ್ಟಿಸಿ ಚಾಲಕರೊಬ್ಬರು ಸಣ್ಣ ಕಾರಣಕ್ಕೆ ಪತ್ನಿಯ ಜೊತೆ ಮುನಿಸಿಕೊಂಡು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಏಳೇ ತಿಂಗಳಲ್ಲಿ ಮತ್ತೆ ಸಹಬಾಳ್ವೆಗೆ ಸಮ್ಮತಿಸಿದರು. ನಾನು ಈಗಾಗಲೇ ತಲಾಖ್ನಿಂದ ನೊಂದಿದ್ದೆ. ವಿವಾಹ ವಿಚ್ಛೇದನ ಮಾಡಿಕೊಳ್ಳುವುದು ಬೇಡ ಎಂದು ಮತ್ತೆ ಒಂದಾಗಿದ್ದೇವೆ ಎಂದು ಮೂರು ವರ್ಷದಿಂದ ದೂರವಿದ್ದ ಮಹಿಳೆಯೊಬ್ಬರು ಹೇಳಿದರು. ಇನ್ನು ಮುಂದೆ ಯಾವುದೆ ಕಾರಣಕ್ಕೂ ನಾನು ತಲಾಖ್ ಹೇಳುವುದಿಲ್ಲ ಎಂದು ಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ತಿಳಿಸಿದರು.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ಜೋಡಿಯೊಂದು ಮಗನಿಗೋಸ್ಕರ ಮತ್ತೆ ಒಂದಾಯಿತು. ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬಾಲಕನನ್ನು ಶ್ರೀಕೃಷ್ಣನ ವೇಷದಲ್ಲಿ ನ್ಯಾಯಾಲಯಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಒಟ್ಟಾರೆ ಲೋಕ್ ಅದಾಲತ್ನಿಂದ ಜೋಡಿಗಳು ಒಂದಾಗಿದ್ದು, ಮತ್ತೆಂದೂ ಕೋರ್ಟ್ ಮೆಟ್ಟಿಲು ಏರದೇ ಸಹಬಾಳ್ವೆಯಿಂದ ಜೀವನ ಮಾಡುತ್ತೇವದು ದಂಪತಿಗಳು ನ್ಯಾಯಾಧೀಶರಿಗೆ ಮಾತು ಕೊಟ್ಟರು.





