ರಾಜ್ಯ ಸರ್ಕಾರ ಕೈಗೊಂಡಿರುವ ಸರ್ಕಾರಿ ಶಾಲೆಗಳ ವಿಲೀನ ಮತ್ತು ಮುಚ್ಚುವ ಪ್ರಕ್ರಿಯೆಯನ್ನು, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಜ್ಞರ ಜೊತೆ ಸಮಾಲೋಚಿಸಿ ರಾಜ್ಯ ಶಿಕ್ಷಣ ನೀತಿ ರೂಪಿಸಿದ್ದರೂ, ಅದನ್ನು ಬದಿಗಿಟ್ಟು ರಾಜ್ಯ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯಲ್ಲಿ ಯಾವುದೇ ಸಮಾಲೋಚನೆ ಮಾಡದೇ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಗೆ ಮಾರಕವಾಗುವ ನಿರ್ಧಾರಗಳನ್ನು ಸರ್ಕಾರ ಯಾವುದೇ ಸಮಾಲೋಚನೆ ಇಲ್ಲದೆ ನಿರ್ಣಯ ಕೈಗೊಳ್ಳುತ್ತಿರುವುದು ಸಂವಿಧಾನ ಹಾಗೂ ಶಿಕ್ಷಣ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಮತ್ತು ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ದಾವಣಗೆರೆ ಜಿಲ್ಲೆ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖಂಡರು “ಸಮಿತಿಯಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಕೆಲ ಪ್ರಮುಖ ಹಕ್ಕೊತ್ತಾಯಗಳನ್ನು ಸಲ್ಲಿಸುತ್ತಿದ್ದೇವೆ. 2016–17 ರ ಶಾಲಾ ಸಬಲೀಕರಣ ವರದಿ ಜಾರಿಗೆ ತರಬೇಕು, ಮ್ಯಾಗ್ನೆಟ್ ಶಾಲೆ ಅಡಿ ವಿಲೀನಗೊಳಿಸುವ, 25,683 ಶಾಲೆಗಳ ಮುಚ್ಚುವ ಯೋಜನೆ ತಕ್ಷಣ ನಿಲ್ಲಿಸಬೇಕು, ರಾಜ್ಯ ಶಿಕ್ಷಣ ನೀತಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
“ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲು ಕ್ರಿಯಾ ಯೋಜನೆ ರೂಪಿಸಿ ಅಗತ್ಯ ಹಣಕಾಸು ಒದಗಿಸಬೇಕು, ನುರಿತ ಆಂಗ್ಲ ಶಿಕ್ಷಕರನ್ನು ನೇಮಿಸಬೇಕು, ತ್ರಿಭಾಷಾ ಸೂತ್ರ ಬದಲು ದ್ವಿಭಾಷಾ ಸೂತ್ರ ಜಾರಿಗೊಳಿಸಬೇಕು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಮತ್ತು ವೃತ್ತಿಪರ ಕೋರ್ಸ್ಗಳಲ್ಲಿ ಮೀಸಲಾತಿ ನೀಡುವಂತೆ ಸಮಿತಿ ಸೂಚಿಸಿದೆ” ಎಂದರು.
“ಖಾಲಿ ಶಿಕ್ಷಕರ ಹುದ್ದೆಗಳು ತಕ್ಷಣ ತುಂಬಲು, ಎಸ್.ಡಿ.ಎಂ.ಸಿ. ಬಲವರ್ಧನೆ, ತರಬೇತಿಯನ್ನು ಪರಿಷ್ಕರಿಸಲು, ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯಗೊಳಿಸಲು ಕಾನೂನು ರೂಪಿಸಲು ಸಮಿತಿ ಆಗ್ರಹಿಸುತ್ತದೆ. ಸರ್ಕಾರಿ ಶಾಲಾ ಮ್ಯಾಪಿಂಗ್ ಪ್ರಕಾರ ಖಾಸಗಿ ಶಾಲೆಗಳಿಗೆ ಅನಧಿಕೃತ ಅನುಮತಿ ನಿಲ್ಲಿಸಬೇಕು ಮತ್ತು ಸರ್ಕಾರಿ ಶಾಲೆಗಳ ಮಾಹಿತಿಯನ್ನು ಪೋಷಕರಿಗೂ ಎಸ್.ಡಿ.ಎಂ.ಸಿ.ಗೂ ಸುಲಭವಾಗಿ ಲಭ್ಯವಾಗುವಂತೆ ಆಪ್ ರೂಪಿಸಬೇಕು ಎಂದು ಬೇಡಿಕೆಯಲ್ಲಿ ತಿಳಿಸಲಾಗಿದೆ” ಎಂದು ತಿಳಿಸಿದರು.
“ಸಮನ್ವಯ ವೇದಿಕೆ, ಸಾರ್ವಜನಿಕ ಶಿಕ್ಷಣ ಕುರಿತಂತೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವರನ್ನು ಬದಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ಸಂವಿಧಾನ ಮತ್ತು ಶಿಕ್ಷಣ ಹಕ್ಕಿನ ಕಾಯ್ದೆಗೆ ವಿರುದ್ಧವಾಗಿದ್ದು, ಇದಕ್ಕೆ ಸಾಮಾಜಿಕ ನ್ಯಾಯಕ್ಕೆ ಹೆಸರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು” ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಸ್ಐಆರ್ ಎಂದರೆ ಎನ್ಆರ್ಸಿ, ಮತದಾನ ಹಕ್ಕುಗಳ ಪೌರತ್ವ ನಿರಾಕರಣೆ: ಚಿಂತಕ ಶಿವಸುಂದರ್
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಚಾಲಕ ಹರಿಹರ ಮಲ್ಲೇಶ್, ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, ಎಚ್ ಸಿ ಗುಡ್ಡಪ್ಪ, ಜನಶಕ್ತಿಯ ಸತೀಶ್ ಅರವಿಂದ್, ಆದಿಲ್ ಖಾನ್, ಸರ್ಕಾರಿ ಶಾಲೆ ಉಳಿಸಿ ಸಮಿತಿಯ ಲಿಂಗರಾಜು ಗಾಂಧಿನಗರ, ರಾಕೇಶ್ ಕಕ್ಕರಗೊಳ್ಳ, ಪ್ರವೀಣ್ ಕಕ್ಕರಗೊಳ್ಳ ಸೇರಿದಂತೆ ಇತರರು ಹಾಜರಿದ್ದರು.





