“ಕಾರ್ಮಿಕರು ಮತ್ತು ಯಾವುದೇ ಕಾರ್ಮಿಕ ಗುಂಪುಗಳ ಜೊತೆ ಮಾತುಕತೆ ನಡೆಸದೆ ಪ್ರಸ್ತಾವಿತ ವಿಕಸಿತ ಭಾರತ – ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB G RAM G) 2025 ಮಸೂದೆಯನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಖಂಡಿಸುತ್ತದೆ. ಈ ಮಸೂದೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNREGA)2005 ನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಸಂಚಾಗಿದೆ. ಲೋಕಸಭೆಯಲ್ಲಿ ವಿಬಿ ರಾಮ್ ಜಿ ಮಸೂದೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಸಂಸದರ ಕಚೇರಿ ಮುಂದೆ ಧರಣಿ ನಡೆಸಲಾಗುವುದು” ಎಂದು ದಾವಣಗೆರೆ ಜಿಲ್ಲಾ ಗ್ರಾಮೀಣ ಕೂಲಿಕಾರರ ಸಂಘಟನೆ ಸಂಚಾಲಕಿ ಸುಧಾ ಪಲ್ಲಾಗಟ್ಟೆ ತಿಳಿಸಿದರು.
ಮಸೂದೆಯನ್ನು ವಿರೋಧಿಸಿ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
“ಉದ್ಯೋಗ ಖಾತ್ರಿಯನ್ನು ಕೇಂದ್ರ ಸರಕಾರದ ಬಿಗಿ ಮುಷ್ಟಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ, ಬಜೆಟನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. ಇದು ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಯ ಮೂಲ ಆಶಯಕ್ಕೆ ಧಕ್ಕೆ ತರುವ ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಹಾಗೂ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಮತ್ತು ಗ್ರಾಮ ಪಂಚಾಯತ್ಗಳನ್ನು ದುರ್ಬಲಗೊಳಿಸುವ ಈ ಮಸೂದೆಯನ್ನು ಸಂಸದರು ಸಂಸತ್ತಿನಲ್ಲಿ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 22, 2025 ರಂದು ರಾಜ್ಯದ ಎಲ್ಲಾ ಸಂಸದರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ನರೇಗಾ ಇನ್ನು ಮುಂದೆ ಕಾರ್ಮಿಕರ ‘ಬೇಡಿಕೆ ಆಧಾರಿತ “ಹಕ್ಕು’ ಆಗಿ ಉಳಿಯದೆ, ಕೇಂದ್ರದ ‘ಪೂರೈಕೆ ಆಧಾರಿತ ಯೋಜನೆ’ಯಾಗಿ ಬದಲಾಗುತ್ತಿದೆ. ಇದರಿಂದ ಉದ್ಯೋಗದ ಮೇಲಿನ ಜನರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಈ ಮೊದಲು ಮಹಾತ್ಮ ಗಾಂಧಿ ನರೇಗಾದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಇದ್ದ 90:10 ರ ಬಜೆಟ್ ಹಂಚಿಕೆ ಅನುಪಾತವನ್ನು ಈಗ 60:40 ಕ್ಕೆ ಇಳಿಸಲಾಗಿದೆ. ಹೆಚ್ಚುವರಿ ವೆಚ್ಚವನ್ನು ರಾಜ್ಯಗಳೇ ಭರಿಸಬೇಕಿರುವುದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ. ಇದು ಯೋಜನೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು.
“ಈಗಾಗಲೇ 50 ದಿನಗಳ ಕೆಲಸ ಒದಗಿಸಲು ವಿಫಲವಾಗಿರುವ ಕೇಂದ್ರ ಸರ್ಕಾರವು ಬಜೆಟ್ ಹಂಚಿಕೆಯಲ್ಲಿ ಮಿತಿ ಹೇರುತ್ತಿರುವುದರಿಂದ, ವರ್ಷಕ್ಕೆ 125 ದಿನಗಳ ಕೆಲಸ ನೀಡುವುದು ಕೇವಲ ಹುಸಿ ಭರವಸೆಯಾಗಲಿದೆ. ಅಲ್ಲದೆ, ಕೃಷಿ ಚಟುವಟಿಕೆಯ ಹೆಸರಲ್ಲಿ ವರ್ಷದ ಎರಡು ತಿಂಗಳು (60 ದಿನ) ಕೆಲಸ ಸ್ಥಗಿತಗೊಳಿಸುವುದರಿಂದ ಮಹಿಳೆಯರು ಮತ್ತು ಭೂಹೀನ ಕಾರ್ಮಿಕರಿಗೆ ತೊಂದರೆಯಾಗಲಿದೆ” ಎಂದು ತಿಳಿಸಿದರು
“ಭ್ರಷ್ಟಾಚಾರದ ಸಬೂಬು ಹೇಳಿರುವ ಕೇಂದ್ರ ಸರ್ಕಾರವೇ ಕಾಮಗಾರಿಗಳನ್ನು ನಿರ್ಧರಿಸುವ ಮೂಲಕ 73ನೇ ತಿದ್ದುಪಡಿಯ ವಿಕೇಂದ್ರೀಕೃತ ಆಡಳಿತ ಮತ್ತು ಗ್ರಾಮಸಭೆಗಳ ಅಧಿಕಾರವನ್ನು ದುರ್ಬಲಗೊಳಿಸಲಾಗುತ್ತಿದೆ. ವಾಸ್ತವವಾಗಿ ಕಾರ್ಯನಿರ್ವಹಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಿಸಬಹುದು. ಡಿಜಿಟಲ್ ಹಾಜರಾತಿ (NMMS) ಮತ್ತು ಆಧಾರ್ ಆಧಾರಿತ ಪಾವತಿ (ABPS) ಕಡ್ಡಾಯಗೊಳಿಸಿರುವುದರಿಂದ ತಾಂತ್ರಿಕ ಕಾರಣಗಳಿಗಾಗಿ ಸಾವಿರಾರು ಬಡ ಕಾರ್ಮಿಕರು ಕೆಲಸ ಮತ್ತು ಕೂಲಿಯಿಂದ ವಂಚಿತರಾಗುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ವಿರೋಧಿ ಶ್ರಮನೀತಿ-25 ರದ್ದಾಗಲಿ: ಕಾರ್ಮಿಕರ ಹಕ್ಕುಗಳ ದಿನವಾಗಿ ಶ್ರಮಿಕ ಶಕ್ತಿ ಪ್ರತಿಭಟನೆ
“ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತಗಳನ್ನು ದುರ್ಬಲ ಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೆ ಅಣಕಿಸುವ ಈ ಮಸೂದೆಯನ್ನು ನಾವು ತಿರಸ್ಕರಿಸುತ್ತೇವೆ ಹಾಗೆ ಸಂಸದರನ್ನು ಈ ಮಸೂದೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಅವರ ಕಚೇರಿ ಮುಂದೆ ದಿನಾಂಕ 22/12/2025 ರಂದು ರಾಜ್ಯದ ಎಲ್ಲಾ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ” ಎಂದು ತಿಳಿಸಿದರು.





