ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆಗೆ ನಿರಾಸಕ್ತಿ ತೋರುತ್ತಿರುವ ಹರಿಹರ ನಗರಸಭೆಯು ಮೂರು ದಿನಗಳ ಕಾಲ ನಗರಸಭೆ ವತಿಯಿಂದ ಆದ್ದೂರಿ ಮತ್ತು ವೈಭವಯುತವಾಗಿ ಕನ್ನಡ ನಾಡಹಬ್ಬವನ್ನು ಆಚರಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಕರ್ನಾಟಕ ರಾಜ್ಯೋತ್ಸವವನ್ನು ಆದ್ದೂರಿ ಮತ್ತು ವೈಭವದಿಂದ ಮೂರು ದಿನಗಳ ಕಾಲ ಹರಿಹರ ನಗರಸಭೆ ವತಿಯಿಂದ ಆಚರಿಸಲು ಕಳೆದ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತ್ರತ್ವದಲ್ಲಿ ಮನವಿ ನೀಡಲಾಗಿತ್ತು. ಅದರಂತೆ ಹರಿಹರ ನಗರಸಭೆಯು ಈ ವರ್ಷದ ಆಯವ್ಯಯದಲ್ಲಿ 10 ಲಕ್ಷ ರೂಪಾಯಿಗಳನ್ನು ರಾಜ್ಯೋತ್ಸವ ಆಚರಣೆಗೆ ತೆಗೆದಿರಿಸಿದೆ. ಆದರೆ ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹರಿಹರ ನಗರಸಭೆಯ ಆಡಳಿತ ವ್ಯವಸ್ಥೆಯು ನಿರಾಸಕ್ತಿ ಮತ್ತು ಉದಾಸೀನ ತೋರಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕನ್ನಡ ರಾಜ್ಯೋತ್ಸವ ಆಚರಣೆಗೆ ಸೂಕ್ತ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಿ ಮೂರು ದಿನಗಳ ಕಾಲ ಹರಿಹರ ನಗರಸಭೆ ವತಿಯಿಂದ ವೈಭವಯುತವಾಗಿ ನಾಡ ಹಬ್ಬವನ್ನು ಆಚರಿಸಲು ಕ್ರಮಕೈಗೊಳ್ಳಲು ನಿರ್ದೇಶಿಸಬೇಕು” ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಇಂದು ಸಂಜೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ರೈತರ ಭೂಮಿಯೂ ಕಬಳಿಕೆ, ಆರೋಗ್ಯವೂ ಹಾಳು
ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ತಾಲ್ಲೂಕು ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ಅಂಗಡಿ ರೇವಣಸಿದ್ದಪ್ಪ, ಜಿಗಳಿ ಪ್ರಕಾಶ್, ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಬಿ.ಬಿ.ರೇವಣನಾಯ್ಕ್, ನಾಗರಾಜ ಕೋಡಿಹಳ್ಳಿ, ಚಿದಾನಂದ ಕಂಚಿಕೇರಿ, ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ, ಹಿರಿಯ ಕ್ರೀಡಾಪಟು ಹೆಚ್ ನಿಜಗುಣ, ಪತ್ರಕರ್ತ ಶೇಖರ್ ಗೌಡ ಪಾಟೀಲ್, ಬಿ.ಮಗ್ದುಂ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ರಿಯಾಜ್ ಅಹ್ಮದ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಮಾನೆ, ನಗರ ಘಟಕದ ಅಧ್ಯಕ್ಷ ಪ್ರೀತಂ ಬಾಬು, ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಕೆ.ಟಿ.ಗೀತಾ ಕೊಂಡಜ್ಜಿ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ಸೇರಿದಂತೆ ಹಲವರು ಹಾಜರಿದ್ದರು.





