“ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಊಟ ತಯಾರಿಸುವ ಬಿಸಿಯೂಟ ತಯಾರಕರಿಗೆ ಮುಂದಿನ 2026-27ಬಜೆಟ್ ನಲ್ಲಿ ವೇತನ ಹೆಚ್ಚಿಸಬೇಕು” ಬಿಸಿಯೂಟ ತಯಾರಕರ ಫೆಡರೇಶನ್ ನ ರಾಜ್ಯ ಅಧ್ಯಕ್ಷ, ದಾವಣಗೆರೆ ಸಿಪಿಐ ಮುಖಂಡ ಆವರಗೆರೆ ಚಂದ್ರು ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ನಗರದ ಸ್ಟೇಡಿಯಂನಲ್ಲಿ ನಡೆದ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು “ಮುಂದಿನ ಬಜೆಟ್ನಲ್ಲಿ ವೇತನ ಹೆಚ್ಚಿಸುವುದು ಸೇರಿದಂತೆ ನಿವೃತ್ತ ಬಿಸಿಯೂಟ ತಯಾರಕರಿಗೆ 2 ಲಕ್ಷ ರೂಪಾಯಿ ಇಡುಗಂಟು ಹಣ ಜಾರಿಗೆ ತರಬೇಕು. ಮರಣ ಪರಿಹಾರವಾಗಿ 10 ಲಕ್ಷ ರೂಪಾಯಿ ಜಾರಿಗೆ ತರಬೇಕು, ನೂರು ಜನ ವಿದ್ಯಾರ್ಥಿಗಳಿಗೆ ಮೂರು ಜನ ಅಡುಗೆಯವರನ್ನು ನೇಮಿಸಿಕೊಳ್ಳಬೇಕು, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಒಬ್ಬ ಅಡುಗೆಯವರನ್ನು ಕೆಲಸದಿಂದ ಬಿಡಿಸಿದಲ್ಲಿ ಅಂತಹ ಬಿಸಿಊಟ ತಯಾರಕರಿಗೆ ಇಡುಗಂಟು ಹಣ ಕೊಡಬೇಕು” ಎಂದು ಒತ್ತಾಯಿಸಿದರು.
“ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ ಒಂದು ರೂಪಾಯಿಗೆ ಏರಿಸಬೇಕು ಮತ್ತು ಬಿಸಿಯೂಟ ತಯಾರಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಯೊಂದನ್ನು ರಚನೆ ಮಾಡಿ ಆ ಮೂಲಕ ಸರ್ಕಾರ ಅವರಿಗೆ ಸವಲತ್ತುಗಳನ್ನು ಕೊಡಬೇಕು” ಎಂದು ಸಭೆ ಮೂಲಕ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಟ್ ವೀಲರ್ ನಾಯಿಗಳ ದಾಳಿಯಿಂದ ಮಹಿಳೆ ಸಾವು: ಮಾಲೀಕನ ಬಂಧನ
ಚನ್ನಗಿರಿ ತಾಲೂಕು ಕಾರ್ಯದರ್ಶಿ ಕಂಚುಗಾರನಹಳ್ಳಿ ರೇಣುಕಾ, ಖಜಾಂಚಿ ಆಸ್ಮಾ ಬಾನು, ಉಪಾಧ್ಯಕ್ಷೆ ಕಣಿವೆಬಿಳಚಿ ಝಾನ್ಸಿ, ಸಹಕಾರ್ಯದರ್ಶಿ ಕರೆಕಟ್ಟೆ ಲಲಿತಬಾಯಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸರೋಜಾ, ರುದ್ರಮ್ಮ ಮಂಜುಳಾ ಎಐಟಿಯುಸಿ ಮುಖಂಡರುಗಳಾದ ಜೈನುಲ್ಲಾ ಖಾನ್, ಪುರಸಭೆ ಸದಸ್ಯ ಗೌಸ್ ಪೀರ್, ಕಲಿಗಾರ ರಫಿಉಲ್ಲಾ, ಏ ತಿಪ್ಪೇಶ್ ಮತ್ತಿತರರು ಭಾಗವಹಿಸಿದ್ದರು.





