ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಜಾರಿಗೆ ಬಂದು 18 ವರ್ಷ ಕಳೆಯುತ್ತಿದ್ದು, ಹಲವಾರು ಸಮಸ್ಯೆಗಳಿವೆ. ಮಂಡಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರದಿಂದಾಗಿ ಹಾಳಾಗುತ್ತಿವೆ. ಕೆಲವು ನೈಜಕಟ್ಟಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ. ಅಲ್ಲದೇ ಕಟ್ಟಡ, ಮೆಕಾನಿಕ್ ಕಾರ್ಮಿಕರ ಹಲವು ಸಮಸ್ಯೆಗಳಿದ್ದು, ಕಟ್ಟಡ ಮತ್ತು ಮೆಕಾನಿಕ್ ಕಾರ್ಮಿಕರ ಕಲ್ಯಾಣ ಮಂಡಳಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಶ್ರಮಿಕ ಶಕ್ತಿ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ದಾವಣಗೆರೆ ಜಿಲ್ಲಾಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ನೀಡಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಕಲ್ಯಾಣ ಮಂಡಳಿಯಲ್ಲಿ ಹಲವಾರು ತರದ ಕಿಟ್ಗಳನ್ನು ವಿತರಣೆ ಮಾಡುತ್ತಿರುವುದು ಮಂಡಳಿಯ ಹಣವು ಪೋಲಾಗುತ್ತದೆಯೇ ವಿನಹ, ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗವಾಗಿಲ್ಲ ಎಂಬುದು ತಿಳಿದ ವಿಷಯ. ಈ ಹಿಂದೆಯೇ ಕಾರ್ಮಿಕ ಸಚಿವರು ದಾವಣಗೆರೆ ಭೇಟಿ ಸಂದರ್ಭದಲ್ಲಿ ಹಲವಾರು ವಿಷಯಗಳ ಕುರಿತು ಮನವಿ ಪತ್ರವನ್ನು ನೀಡಲಾಗಿತ್ತು. ಆದರೆ ಯಾವ ವಿಚಾರಗಳಿಗೂ ಸಹ ಕ್ರಮ ಕೈಗೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಕಾರ್ಮಿಕರು ವೈದ್ಯಕೀಯ ವೆಚ್ಚಕ್ಕಾಗಿ ಲಕ್ಷಾಂತರ ರೂ ಖರ್ಚು ಮಾಡಿದರೂ, ಮಂಡಳಿಯಿಂದ ವೈದ್ಯಕೀಯ ಸಹಾಯಧನ ಕೇವಲ ಶೇ 20 ರಿಂದ 30 ಮಾತ್ರ ಬರಲಿದೆ. ಮಂಡಳಿಯ ಹಣದಿಂದಲೇ ಕಟ್ಟಡ ಕಾರ್ಮಿಕರಿಗೆ ಇ ಎಸ್ ಐ ಸೌಲಭ್ಯ ಜಾರಿ ಮಾಡಿದರೆ ಕಲ್ಯಾಣ ಮಂಡಳಿಯ ಹಣವು ಹೆಚ್ಚು ಉಳಿಯಲಿದ್ದು, ಇ ಎಸ್ ಐ ಆಸ್ಪತ್ರೆಗಳು ಸಧೃಡವಾಗಲಿದ್ದು ಮತ್ತು ಕಾರ್ಮಿಕರ ಇಡೀ ಕುಟುಂಬಕ್ಕೆ ಆರೋಗ್ಯದ ಸುರಕ್ಷೆ ಸಿಗಲಿದೆ. ಮೊಬೈಲ್ ಕ್ಲಿನಿಕ್ ಗಳಿಂದ ಇದುವರೆಗೂ ಯಾವುದೇ ಕಟ್ಟಡ ಕಾರ್ಮಿಕರ ಆರೋಗ್ಯವು ಸುಧಾರಿಸಿಲ್ಲ. ಈ ಯೋಜನೆಯಿಂದ ಕಲ್ಯಾಣ ಮಂಡಳಿಯ ಹಣ ಪೋಲಾಗುವುದೇ ಹೆಚ್ಚಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನವನ್ನು ಮಾಡುವ ಸಂದರ್ಭದಲ್ಲಿ ನೈಜ ಕಟ್ಟಡ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ, ಮಂಡಳಿಯ ಆಶಯವನ್ನು ಉಳಿಸಬೇಕು. ಮತ್ತು ಕರ್ನಾಟಕ ಕಟ್ಟಡ ಕಲ್ಯಾಣ ಮಂಡಳಿ ಇತರೇ ಅಸಂಘಟಿತ ವಲಯದ ಕಾರ್ಮಿಕರಿಗೆ ಮಾದರಿ ಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.
“ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅರ್ಜಿಯನ್ನು ಎಸ್.ಎಸ್.ಪಿ ಪೋರ್ಟಲ್ ನಲ್ಲಿ ರದ್ದುಪಡಿಸಿ ಕಲ್ಯಾಣ ಮಂಡಳಿಯ ವೆಬ್ಸೈಟ್ ನಲ್ಲಿ ಅರ್ಜಿಗಳನ್ನು ಹಾಕಲು ಅವಕಾಶ ನೀಡಬೇಕು, ಸಹಾಯಧನದ ಮೊತ್ತವನ್ನು ಏರಿಕೆ ಮಾಡಬೇಕು. ಇ.ಎಸ್.ಐ ಸೌಲಭ್ಯ ಜಾರಿಮಾಡಬೇಕು. ಕುಟುಂಬದವರಿಗೂ ಪಿಂಚಣಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ವಿಳಂಬ ಮಾಡದೇ 3 ತಿಂಗಳ ಒಳಗೆ ಸಹಾಯಧನ ಹಣ ಸಂದಾಯವಾಗುವಂತೆ ಎಲ್ಲಾ ಕಾರ್ಮಿಕ ಅಧಿಕಾರಿಗಳಿಗೂ ನಿರ್ದೇಶನ ನೀಡಬೇಕು. ಮನೆ ನಿರ್ಮಾಣಕ್ಕಾಗಿ ಮಂಡಳಿಯಿಂದಲೇ 5ಲಕ್ಷ ರೂಪಾಯಿ ಸಹಾಯಧನ ನೀಡಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
“ಅಲ್ಲದೇ ಕರ್ನಾಟಕ ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಯೋಜನೆಗಳಲ್ಲಿ ಹಲವಾರು ಸಮಸ್ಯೆಗಳಿದ್ದು ಕಳೆದ 2 ತಿಂಗಳಿಂದ ಹೊಸ ನೋಂದಣಿಗೆ ವೆಬ್ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಮಂಡಳಿಯ ವೆಬ್ಸೈಟ್ ನಲ್ಲಿ ಅರ್ಜಿ ಹಾಕುವಂತೆ ಮಾರ್ಪಾಟು ಮಾಡಬೇಕು. ಮತ್ತು ಸ್ಮಾರ್ಟ್ ಕಾರ್ಡ್ ಬದಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಇ-ಕಾರ್ಡ್ ಅನ್ನು ಜಾರಿಮಾಡಿದರೆ ಮಂಡಳಿಯ ಹಣ ಮತ್ತು ಶ್ರಮವು ಉಳಿತಾಯವಾಗಲಿದೆ” ಅಭಿಪ್ರಾಯಪಟ್ಟರು.
“60 ವರ್ಷ ತುಂಬಿದ ಮೆಕಾನಿಕ್ ಕಾರ್ಮಿಕರಿಗೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ, ಮರಣದ ಸಹಾಯಧನ 1 ಲಕ್ಷ ರೂಪಾಯಿಗೆ ಏರಿಕೆ, ವೈದ್ಯಕೀಯ ವೆಚ್ಚ ಸಹಾಯಧನ ಇತರ ಅನಾರೋಗ್ಯ ಮತ್ತು ಆಪರೇಷನ್ಗೆ ವಿಸ್ತರಣೆ, ಮಕ್ಕಳಿಗೆ ಒಂದನೇ ತರಗತಿಯಿಂದ ಶೈಕ್ಷಣಿಕ ಸಹಾಯಧನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸುಪ್ರೀಂ ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಯತ್ನ: ಯುವ ಕಾಂಗ್ರೆಸ್ ಘಟಕ ಖಂಡನೆ
ಪ್ರತಿಭಟನೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್, ಆದಿಲ್ ಖಾನ್, ಪವಿತ್ರ, ಸೈಯದ್ ಅಶ್ಫಾಕ್, ಚಂದ್ರಶೇಖರ್, ಜಾಫರ್ ಷರೀಫ್, ಶಿಡ್ಲಪ್ಪ, ಆಫ್ರೊಜ್, ಬಾಷಾ, ಸಮೀರ್, ರೋಶನ್, ಫಾರೂಖ್, ಹನುಮಂತ, ನಾಗರಾಜ್, ಮಹಾಂತೇಶ್ ರಮೇಶ್, ಸಂತೋಷ್ ಸೇರಿದಂತೆ ಇನ್ನೂ ಹಲವು ಕಾರ್ಮಿಕರು ಭಾಗಿಯಾಗಿದ್ದರು.





