ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವನಿತಾ ಸಾಹಿತ್ಯ ವೇದಿಕೆಯ ಜಂಟಿ ಸಹಯೋಗದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ, ಹಿರಿಯ ಸಾಹಿತಿ ಅರುಂಧತಿ ರಮೇಶ್ ಅವರ ಗೌರವಾರ್ಥ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಮಾತನಾಡಿ “ಅರುಂಧತಿ ರಮೇಶ್ ಅವರು ಶಿಕ್ಷಕಿಯಾಗಿ, ಸಾಹಿತಿಯಾಗಿ, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆಯಾಗಿ ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರೂ ದಾವಣಗೆರೆ ಜಿಲ್ಲೆಯ ಸಾಹಿತ್ಯ ಲೋಕದೊಂದಿಗೆ ನಿಕಟವಾದ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರ ನೆನಪಿನಲ್ಲಿ ಒಂದು ಸಂಸ್ಮರಣಾ ಗೃಂಥವನ್ನು ಹೊರತರುವುದರ ಮೂಲಕ ಅವರ ಬದುಕು, ಬರಹ, ನಾಡು ನುಡಿಯ ಸೇವೆಯ ಕುರಿತು ಬೆಳಕು ಚೆಲ್ಲುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು
ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಹಾಗೂ ಅರುಂಧತಿಯವರ ನಿಕಟ ಒಡನಾಡಿಯಾದ ಎಸ್.ಎಮ್.ಮಲ್ಲಮ್ಮ ಮಾತನಾಡಿ “ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಐದು ದಶಕಗಳಿಗೂ ಹೆಚ್ಚಿನ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ವಿಶೇಷವಾಗಿ ವನಿತಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಅನೇಕ ಮಹಿಳೆಯರನ್ನು ಸಾಹಿತ್ಯ ರಚನೆಯತ್ತ ಆಸಕ್ತಿ ಬರುವಂತೆ ಮಾಡುವುದರ ಮೂಲಕ ಅನೇಕ ಮಹಿಳೆಯನ್ನು ಸಾಹಿತಿಗಳನ್ನಾಗಿಸಿದ ಕೀರ್ತಿ ಅವರಿಗಿದೆ” ಎಂದು ನೆನಪಿಸಿಕೊಂಡರು.
“ಅವರು ರಚಿಸಲ್ಪಟ್ಟ ಕೃತಿಗಳಾದ ಚಿತ್ತ ಚಾತಕ, ಮಡಿಲು, ಪರಿಸರ ಕಾವ್ಯ, ಪರಾಗಸ್ಪರ್ಶಕ್ಕೆ ಕಾದ ಕವನ ಮೊದಲಾದವುಗಳು ಸಾಹಿತ್ಯಪ್ರಿಯರ ಮೆಚ್ಚುಗೆಗೆ ಪಾತ್ರವಾಗಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಾಗೆಯೇ ಪ್ರಬುದ್ಧ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದರು” ಎಂದು ಹೇಳಿದರು. ಅರುಂಧತಿ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡು ನುಡಿ ನಮನವನ್ನು ಸಲ್ಲಿಸಿದರು.
ಅರುಂಧತಿ ರಮೇಶ್ ಅವರ ಸಂಸ್ಮರಣಾ ಗ್ರಂಥವನ್ನು ಹೊರತರುವ ಜವಾಬ್ದಾರಿಯನ್ನು ಹಿರಿಯ ಸಾಹಿತಿ ಹಾಗೂ ಸಂಘಟಕಿ ಟಿ.ಎಸ್.ಶೈಲಜಾ ಅವರಿಗೆ ವಹಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ನುಡಿನಮನವನ್ನು ಸಲ್ಲಿಸುವುದರ ಜೊತೆಗೆ ಹಿರಿಯ ಸಾಹಿತಿ ಜಿ.ಎಸ್.ಸುಶೀಲಾದೇವಿ ರಾವ್ ಅವರು ಅರುಂಧತಿ ಅವರ ಕುರಿತು ರಚಿಸಿದ ಕವನವನ್ನು ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ಷರದವ್ವ ಸಾವಿತ್ರಿ ಭಾಪುಲೆ ಹಾಗೂ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನಾಚರಣೆ
ಸಾಹಿತಿಗಳಾದ ಆರ್.ವಾಗ್ದೇವಿ, ಸಂಧ್ಯಾ ಸುರೇಶ್, ಓಂಕಾರಮ್ಮ ರುದ್ರಮುನಿ, ಟಿ.ಎಸ್.ಶೈಲಜಾ, ಡಾ.ಅನುರಾಧಾ ಬಕ್ಕಪ್ಪ, ಸತ್ಯಭಾಮ, ನಾಗವೇಣಿ, ರುದ್ರಮುನಿ ಹಿರೇಮಠ, ಉಮಾದೇವಿ, ಕುಸುಮಾ ಲೋಕೇಶ್ ಮೊದಲಾದವರು ನುಡಿನಮನವನ್ನು ಸಲ್ಲಿಸಿದರು. ನುಡಿನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ನಾಗವೇಣಿ ಎ.ಎಲ್. ಕೆ.ಶಿವಶಂಕರ್, ಆನೆಕೊಂಡ ಲಿಂಗರಾಜ್, ಪನ್ನಾಲಾಲ್, ಕೆ.ಹಾಲಪ್ಪ, ಆರ್.ಸಿದ್ದೇಶಪ್ಪ, ಎಂ.ಷಡಾಕ್ಷರಪ್ಪ, ಗುರುಮೂರ್ತಿ, ಹೆಚ್.ಎಲ್.ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.





