ದಾವಣಗೆರೆ ಜಿಲ್ಲೆ ಜಗಳೂರು ನಗರದ ಹೊಸ ವಾಲ್ಮೀಕಿ ಭವನದಲ್ಲಿ “ನೊಂದವರಿಗೆ ನೆರವು” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಪ್ರಾರಂಭಿಸಿದ್ದು, ವರ್ಷಾರಂಭದ ಮೊದಲ ದಿನವೇ ತಟ್ಟೆ ಹಿಡಿದು ಭಿಕ್ಷಾಟನೆ ಮೂಲಕ ಸಮಾಜದ ಅಶಕ್ತರು, ವಿಶೇಷ ಚೇತನರು, ರೋಗಿಗಳು , ಅಶಕ್ತ ವಿದ್ಯಾರ್ಥಿಗಳಿಗೆ ನೆರವು ನೀಡುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೊಂದವರಿಗೆ ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ದೇವೇಂದ್ರಪ್ಪ “ಇದು ಸಮಾಜಕ್ಕೆ ಅಗತ್ಯ ಇರುವ ಉತ್ತಮ ಕಾರ್ಯಕ್ರಮ. ವೈಯಕ್ತಿಕವಾಗಿ ಇಂದು ಒಂದು ಲಕ್ಷ ನೀಡಿದ್ದೇನೆ. ಪ್ರತಿ ತಿಂಗಳು ವೇತನದಲ್ಲಿ ಒಂದು ಲಕ್ಷ ಇದಕ್ಕಾಗಿ ಮೀಸಲಿಟ್ಟು ನೆರವು ನೀಡುತ್ತೇನೆ. ಈ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸಿನ ನೆರವಿಗೆ, ನೊಂದವರ ನೆರವಿಗೆ ಒಂದು ಕೋಟಿ ರೂಪಾಯಿ ಭಿಕ್ಷಾಟನೆ ಮಾಡಿ ಸಹಾಯ ಮಾಡುತ್ತೇನೆ” ಎಂದು ಭರವಸೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷರಾದ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ನೇರಲಗುಂಟೆ ತಿಪ್ಪೇಸ್ವಾಮಿ, ಜೈ ಭಾರತ್ ಟ್ರಸ್ಟಿನ ಬರ್ಕತ್ ಆಲಿ , ಕ್ಷೇತ್ರದ ಸಮಸ್ತ ಮುಖಂಡರು, ನಾಗರೀಕರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರವೀಂದ್ರನಾಥ ಬಡಾವಣೆ ನಿರಾಶ್ರಿತರನ್ನು ಗಂಜಿಕೇಂದ್ರದಿಂದ ಹೊರದೂಡಿದ ಕ್ರಮಕ್ಕೆ ಕರವೇ ಆಕ್ರೋಶ





