ಸರ್ವೋಚ್ಚ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ 2025, ಜುಲೈ 12 ರಂದು ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಆದಾಲತ್ನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 9360 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು 14,04,66,571/- ಹಣದ ಪರಿಹಾರ ಮತ್ತು 2,62,712 ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 72,62,10,788/- ಹಣ ಸರ್ಕಾರಿ ವಸೂಲಾತಿ ಮತ್ತು ಪರಿಹಾರ ರಾಜೀ ಮೂಲಕ ಮುಕ್ತಾಯಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 23 ವೈವಾಹಿಕ ಪ್ರಕರಣಗಳ ರಾಜಿಯಾಗಿದೆ. ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 20 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ. ಅದರಂತೆ ಹರಿಹರ ತಾಲ್ಲೂಕು ನ್ಯಾಯಾಲಯಗಳಲ್ಲಿ 01, ಚನ್ನಗಿರಿ ತಾಲ್ಲೂಕು ನ್ಯಾಯಾಲಯಗಳಲ್ಲಿ 01, ಹೊನ್ನಾಳಿ ನ್ಯಾಯಾಲಯಗಳಲ್ಲಿ 01 ಪ್ರಕರಣದಲ್ಲಿ ವಿವಾಹ ವಿಚ್ಚೇದನ ಮತ್ತು ಜೀವನಾಂಶಕ್ಕಾಗಿ ದಾಖಲಿಸಿದ್ದ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಒಟ್ಟಾರೆ 23 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ. ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಇತರೆ ನ್ಯಾಯಾಧೀಶರು ಅಭಿನಂದನೆ ಸಲ್ಲಿಸಿ ಒಂದಾದ ಜೋಡಿಗಳ ಮುಂಬರುವ ಜೀವನ ಸುಖಕರವಾಗಲಿ ಎಂದು ಸಿಹಿ ಹಂಚಿ ಹಾರೈಸಿದರು.

77 ಅಪರಾಧಿಕ ಪ್ರಕರಣಗಳು, 195 ಚೆಕ್ ಅಮಾನ್ಯ ಪ್ರಕರಣಗಳು, 43 ಬ್ಯಾಂಕ್ ವಸೂಲಾತಿ ಕೇಸ್ಗಳು, 14 ಇತರೆ ಹಣ ವಸೂಲಾತಿ, 74 ಅಪಘಾತ ಪರಿಹಾರ ಪ್ರಕರಣಗಳು, 144 ವಿದ್ಯುತ್ ಕಳ್ಳತನದ ಪ್ರಕರಣಗಳು, 02 ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳು, 51 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 26 ಭೂ ಸ್ವಾಧೀನ ಪರಿಹಾರ ಜಾರಿ ಅರ್ಜಿಗಳು, 132 ಇತರೆ ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 88 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 50 ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 9,350 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ.
ಜಿಲ್ಲೆಯಾದ್ಯಂತ ಸುಮಾರು 1,747 ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು.

ಇದರಂತೆ ಇತರೆ ವ್ಯಾಜ್ಯಾ ಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಾಸೂಲಾತಿ, ಕಾರ್ಮಿಕ ವ್ಯಾಜ್ಯಾಗಳು, ನೀರಿನ ಬಾಕಿ ವಸೂಲಾತಿ, ಕಂದಾಯ ಪ್ರಕರಣಗಳು, ಟ್ರಾಫಿಕ್ ಪ್ರಕರಣಗಳು ಇತ್ಯಾದಿ ಸೇರಿದಂತೆ ಒಟ್ಟಾರೆಯಾಗಿ 2,62,712 ಪ್ರಕರಣಗಳು ಇತ್ಯರ್ಥಗೊಂಡು ಮೇಲ್ಕಾಣಿಸಿದ ಎಲ್ಲಾ ಪ್ರಕರಣಗಳಿಂದಾಗಿ 72,62,10,788/-ವಸೂಲಾತಿಯಾಗಿರುತ್ತದೆ ಎಂದು ಕಾನೂನು ಮತ್ತು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಕರೆಣ್ಣನವರ್ ಮಾಹಿತಿ ನೀಡಿದ್ದಾರೆ.
ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ, ಹೆಚ್ಚು ಪ್ರಕರಣಗಳು ರಾಜೀಯಾಗಲು ಮತ್ತು ಪಕ್ಷಗಾರರಿಗೆ ಯೋಗ್ಯ ಮಾಹಿತಿ, ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಿದ ಜಿಲ್ಲೆಯ ಎಲ್ಲಾ ಗೌ॥ ನ್ಯಾಯಾಧೀಶರಿಗೂ, ಸಂಧಾನಕಾರರಿಗೂ, ವಕೀಲರಿಗೂ ಹಾಗೂ ವಿಷಯವನ್ನು ಹೆಚ್ಚು ಪ್ರಚಾರ ಮಾಡಿದ ವಾರ್ತಾ ಮತ್ತು ಪ್ರಚಾರ ಇಲಾಖೆ, ಪತ್ರಿಕಾ ಮತ್ತು ಟಿ.ವಿ ಮಾಧ್ಯಮದವರಿಗೂ ಧನ್ಯವಾದಗಳನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಾಲ್ಯವಿವಾಹ ಮಕ್ಕಳ ಮತ್ತು ಮಾನವೀಯ ಮೌಲ್ಯಗಳ ಮೇಲಿನ ದೌರ್ಜನ್ಯ; ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ
ಲೋಕ ಅದಾಲತ್ ಯಶಸ್ವಿಗೊಳಿಸಲು ಸಹಕಾರಿಯಾದ ನ್ಯಾಯಾಂಗ ಇಲಾಖೆ, ವಕೀಲರ ಸಂಘಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಬಿ.ಎಸ್.ಎನ್.ಎಲ್, ಸಾರಿಗೆ ಇಲಾಖೆ, ಹಾಗೂ ಇನ್ನಿತರೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಮತ್ತು ಸಿಬ್ಬಂಧಿಯವರಿಗೂ ಧನ್ಯವಾದಗಳನ್ನು ತಿಳಿಸಿದರು.





