ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಭದ್ರಾಮೇಲ್ದಂಡೆ ನೀರಾವರಿ ಯೋಜನೆಗೆ ಅನುದಾನ ಮೀಸಲಿಟ್ಟು, ಶೀಘ್ರ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು. ಹಾಗೂ ವೈಜ್ಞಾನಿಕ ತಳಹದಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ಭದ್ರಾಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ರಾಜ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು “ಬಯಲು ಸೀಮೆಯ ಜನರಿಗೆ ಕುಡಿಯುವ ನೀರಿನ ಮೂಲಸೌಕರ್ಯಕ್ಕೆ, ಕೆರೆ ತುಂಬಿಸುವ ಯೋಜನೆಗಳಿಗೆ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭವಾಗಿ ದಶಕಗಳೇ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕಾಮಗಾರಿ ಕುಂಟುತ್ತಾ ವಿಳಂಬವಾಗಿದೆ. ಸತತ ಬರ ಅನುಭವಿಸುತ್ತಿರುವ ಬಯಲು ಸೀಮೆಯ ಜನ ನೀರಿಗಾಗಿ ಪರದಾಡುವಂತಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನರಿಗೆ ನೀರಿನ ಬವಣೆ ಕಳೆಯಬೇಕು” ಎಂದು ಆಗ್ರಹಿಸಿದರು.
ಉ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ಈ ಸಂದರ್ಭದಲ್ಲಿ ಭದ್ರಾಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್ ಒಬಳೇಶ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೆನಹಳ್ಳಿ ಬಸವರಾಜ್, ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆ .ಎಚ್ ಎಂ ಹೊಳೆ, ಡಿ ಎಸ್ ಎಸ್ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್, ಪತ್ರಕರ್ತ ಹೋರಾಟಗಾರ ಎಚ್ ಎಂ ಹೊಳೆ ಧನ್ಯಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ ಮೇಟಿ ಬಣದ ಭರಮಸಮುದ್ರ ಕುಮಾರ್,
.ಎ ಐ ವೈ ಎಪ್ ರಾಜ್ಯ ಮುಖಂಡ ಮಾದಿಹಳ್ಳಿ ಮಂಜಪ್ಪ, ಡಾ.ಬಿ ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಪೂಜಾರಿ ಸಿದ್ದಪ್ಪ, ರಸ್ತೆ ಅಗಲೀಕರಣ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಗೌರಿಪುರ ಸತ್ಯಮೂರ್ತಿ, ನಮ್ಮ ಕರ್ನಾಟಕ ಸೇನೆ ಸುಜಾತಮ್ಮ, ಕರುನಾಡ ರಕ್ಷಣಾ ಪಡೆಯ ಇಂದಿರಾ ಗುರುಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಾಂತೇಶ್, ಜನಪರ ವೇದಿಕೆಯ ಮಹಾಂತೇಶ್, ಹಿರಿಯರಾದ ಸಿದ್ದಿಹಳ್ಳಿ ಪ್ರಕಾಶ್ ರೆಡ್ಡಿ, ವೀರಸ್ವಾಮಿ, ಜಮ್ಮಾಪುರ ರಂಗಪ್ಪ, ರೈತ ಸೇನೆಯ ದೊಣ್ಣೆಹಳ್ಳಿ ಚೌಡಮ್ಮ, ಹನುಮಂತಾಪುರ ಕೃಷ್ಣಪ್ಪ ಸೇರಿದಂತೆ ರೈತ, ಕಾರ್ಮಿಕ, ದಲಿತ,ಕನ್ನಡಪರ ಹಾಗೂ ವಿದ್ಯಾರ್ಥಿ ಯುವಜನ ಸಂಘಟನೆಯ ಮುಖಂಡರು ಹಾಗೂ ತಾಲೂಕಿನ ವಿವಿದ ಗ್ರಾಮಗಳ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.





