ಆಭರಣ ತಯಾರಿಕರೊಬ್ಬರಿಂದ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಗಾರದ ಗಟ್ಟೆ ಹಾಗೂ ಬಂಗಾರದ ಆಭರಣದ ಸಾಮಗ್ರಿಗಳನ್ನು ಕಿತ್ತುಕೊಂಡು ದರೋಡೆ ನಡೆಸಿದ ಕುರಿತು ದಾಖಲಾದ ಪ್ರಕರಣದಲ್ಲಿ ಉಪನಿರೀಕ್ಷಕರಿಬ್ಬರು (ಪಿಎಸ್ಐ) ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಆರೋಪ ಹೊತ್ತಿರುವ ಪೊಲೀಸರನ್ನು ವಜಾ ಮತ್ತು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ| ಬಿ.ಆರ್.ರವಿಕಾಂತೇಗೌಡ, ಐಪಿಎಸ್ ಆದೇಶಿಸಿದ್ದಾರೆ.
ಹಾವೇರಿ ಜಿಲ್ಲೆ ಹಂಸಭಾವಿ ಪೊಲೀಸ್ ಠಾಣೆಯ ಪರೀಕ್ಷಾರ್ಥ ಅವಧಿಯ ಉಪನಿರೀಕ್ಷಕ (ಪ್ರೊಬೇಷಪರಿ ಪಿಎಸ್ಐ) ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಗೆ ವರ್ಗಾವಣೆಯ ಆದೇಶದಲ್ಲಿರುವ ಉಪನಿರೀಕ್ಷಕ ಪ್ರವೀಣ್ ಕುಮಾರ್ (ಪಿಎಸ್ಐ-1) ಇವರುಗಳು ಆರೋಪಿಗಳಾಗಿದ್ದಾರೆ.
24, ನವೆಂಬರ್ 2025 ರ ಬೆಳಗಿನ ಜಾವ 03.00 ಗಂಟೆಗೆ ಅವರ ಪರಿಚಯವಿರುವ 3 ಜನರನ್ನು ಸೇರಿಸಿಕೊಂಡು, ಕಾರವಾರ ಮೂಲದ ಆಭರಣ ತಯಾರಿಕೆಗಾರ ವಿಶ್ವನಾಥ್ ಎಂ ಅರ್ಕಸಾಲಿಯವರನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೆದರಿಸಿ ಕರೆದುಕೊಂಡು ಹೋಗಿ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 78.15 ಗ್ರಾಂ ಬಂಗಾರದ ಗಟ್ಟೆ ಹಾಗೂ ಬಂಗಾರದ ಆಭರಣದ ಸಾಮಗ್ರಿಗಳನ್ನು ಕಿತ್ತುಕೊಂಡು ದರೋಡೆ ನಡೆಸಿದ ಕುರಿತು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪೊಕ್ಸೋ ಪ್ರಕರಣ ಕೋರ್ಟ್ ತೀರ್ಪು; ಮುರುಘಾ ಶರಣರಿಗೆ ಬಿಗ್ ರಿಲೀಫ್
ಪ್ರಕರಣ ಸಂಖ್ಯೆ229/2025 ಕಲಂ. 309(4), 310(2), 61(2) ಭಾರತೀಯ ದಂಡ ಸಂಹಿತೆ 2023 ಅಡಿಯಲ್ಲಿ ಆರೋಪಿಗಳು ಕ್ರಮವಾಗಿ ಎ-1 ಮತ್ತು ಎ-2 ಆಗಿ ಕೃತ್ಯವೆಸಗಿ ದಸ್ತಗಿರಿಯಾಗಿ ಪೊಲೀಸ್ ಬಂಧನದಲ್ಲಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವ ಮತ್ತು ನೊಂದವರಿಗೆ ನ್ಯಾಯಕೊಡಿಸುವಂತಹ ಬಹುಮುಖ್ಯವಾದ ಜವಾಬ್ದಾರಿಯುತ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ಹುದ್ದೆಯಲ್ಲಿದ್ದುಕೊಂಡು ಇಂತಹ ಘೋರ ಅಪರಾಧ ಕೃತ್ಯವನ್ನು ಎಸಗಿದ ಕಾರಣ ಪ್ರಕರಣದ ಎ-1 ಆರೋಪಿ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟೆ ಇನ್ನೂ ಪಿಎಸ್ಐ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿರುವುದರಿಂದ ನವೆಂಬರ್ 24, 2025 ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ ಮತ್ತು ಪ್ರಕರಣದ ಎ-2 ಆರೋಪಿತ ಪಿಎಸ್ಐ ಪ್ರವೀಣ್ಕುಮಾರ್ ರವರನ್ನು ನವೆಂಬರ್ 24, 2025 ರಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿ ಇಲಾಖೆ ಆದೇಶ ಹೊರಡಿಸಿದೆ.





