ದಾವಣಗೆರೆ ಜಿಲ್ಲಾ ವೃತ್ತಿ ರಂಗಭೂಮಿ ರಂಗಾಯಣದ ಕಲಾವಿದರು ದಾವಣಗೆರೆ ದೃಶ್ಯ ಕಲಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಡಾ. ರಹಮತ್ ತರೀಕೆರೆ ಅವರ ‘ಅಮೀರಬಾಯಿ ಕರ್ನಾಟಕಿ’ ಕೃತಿ ಪ್ರೇರಿತ ಡಾ. ರಾಜಪ್ಪ ದಳವಾಯಿ ರಚಿಸಿರುವ, ಮಾಲತೇಶ ಬಡಿಗೇರ ವಿನ್ಯಾಸ, ನಿರ್ದೇಶನದ ಪ್ರತಿಗಂಧರ್ವ ನಾಟಕವನ್ನು ಪ್ರಸ್ತುತ ಪಡಿಸಿದರು.
ನಾಟಕವು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ, ರಂಜಿಸುವಲ್ಲಿ ಯಶಸ್ಸು ಕಂಡಿದ್ದಲ್ಲದೇ ಸಾಮಾಜಿಕ ಸಂದೇಶ ನೀಡುವ ದೃಷ್ಟಿಯಿಂದ ಮಹತ್ವದ್ದೆನಿಸಿತು. ಶತಮಾನದ ಹಿಂದೆ ಇದ್ದ ಕಟು ಸಂಪ್ರದಾಯವಾದಿಗಳ ನಡುವೆಯೂ ಹಿಂದೂ ಮುಸ್ಲಿಂ ನಿಸ್ವಾರ್ಥ ಪ್ರೀತಿ, ಕಲಾವಿದರಿಗೆ ಜಾತಿ, ಧರ್ಮ, ಭಾಷೆ, ದೇಶ, ಪ್ರಾಂತ, ರಾಜ್ಯಗಳ ಹಂಗಿಲ್ಲ. ಈ ಎಲ್ಲಾ ಗಡಿಗಳನ್ನು ಮೀರಿದ ಪರಿಶುದ್ಧ, ಶುಭ್ರವಾದುದು ರಂಗಭೂಮಿ ಕಲೆ ಎಂದು ಕೋಮುದ್ವೇಷ, ಭಾಷಾದ್ವೇಷವನ್ನು ಎದುರಿಸಿ ನಿಂತ ಮಹಾಕಲಾವಿದರ ಬದುಕಿನ ಕಥೆಯನ್ನು ದೃಶ್ಯ ರೂಪದಲ್ಲಿ ಪ್ರೇಕ್ಷಕರೆದುರು ಸಾಕಾರಗೊಳಿಸುವಲ್ಲಿ ಇಡೀ ತಂಡ ಯಶಸ್ವಿಯಾಯಿತು. ಇದಕ್ಕೆ ಅಂತಿಮ ದೃಶ್ಯದ ನಂತರವೂ ಕಿಕ್ಕಿರಿದು ತುಂಬಿದ್ದ ಬಯಲು ರಂಗಮಂದಿರ ಸಾಕ್ಷಿಯಾಯಿತು.

ನಾಟಕದ ಕಥಾಹಂದರದಲ್ಲಿ ;
ಮರಾಠಿಗಳ ಬಾಯಲ್ಲಿ ಅಂದಿನ ಕರ್ನಾಟಕಕ್ಕೆ ಕಾನಡಿ ಎಂದೇ ಕರೆಯಲ್ಪಡುವ ಕಾನಡಿಯ ಉತ್ತರದ ಬೀಳಗಿಯಿಂದ ಬಾಂಬೆಗೆ ಹೋಗಿ ಬದುಕು ಕಟ್ಟಿಕೊಳ್ಳಲು ಹೋದ ಮುಸ್ಲಿಂ ಹೆಣ್ಮಕ್ಕಳು ಅನುಭವಿಸುವ ಸ್ಥಿತ್ಯಂತರಗಳು. ಅಮೀರಾ ಮತ್ತು ಗೋಹರ್ ಬಾಯಿ, ತಮ್ಮ ಸಂಗೀತ ಮತ್ತು ನಟನೆ ಮೂಲಕ ಬೆಸೆದ ಮರಾಠಿ ಕನ್ನಡದ ಭಾಷಾ ಬೆಸುಗೆ. ಬ್ರಾಹ್ಮಣರಾಗಿ ಹುಟ್ಟಿ ತಮ್ಮ ಹಾಡುಗಾರಿಕೆ, ನಟನಾ ಕೌಶಲ್ಯದ ಮೂಲಕ ಬಾಲಗಂಗಾಧರ ತಿಲಕರಿಂದ “ಬಾಲಗಂಧರ್ವ” ಎಂದು ಬಿರುದಾಂಕಿತ ನಾರಾಯಣರಾವ್ ರಾಜಹಂಸ. ವೈರುಧ್ಯ ದಿಕ್ಕಿನಲ್ಲಿದ್ದ ಗೋಹರ್ ಬಾಯಿ ಮತ್ತು ಬಾಲಗಂಧರ್ವರು ಬದಲಾದ ಪರಿಸ್ಥಿತಿಯಲ್ಲಿ ಒಂದಾದ ಬ್ರಾಹ್ಮಣ-ಮುಸ್ಲಿಂ ಪ್ರೀತಿಯೊಂದಿಗೆ ಪ್ರೇಕ್ಷಕನನ್ನು ಹಿಡಿದಿಡುತ್ತದೆ.

“ಜೀವನ ಇಲ್ಲದೇ ನಾಟಕವೂ ಇಲ್ಲ”, ನಾಟಕದ ಪ್ರಮುಖ ಪಾತ್ರ ಬಾಲಗಂಧರ್ವರ ಮಾತು ಆಗಾಗ್ಗೆ ಪ್ರೇಕ್ಷಕರ ಕಿವಿಗಪ್ಪಳಿಸಿ ಮಾರ್ದನಿಸುತ್ತದೆ. ಹಿಂದೂ ಮುಸ್ಲಿಂ ಗಲಭೆ ತಂದಿಟ್ಟ ಪ್ರೇಕ್ಷಕರ ಕೊರತೆಯಿಂದ ನಷ್ಟಕ್ಕೆ ಗುರಿಯಾದ ನಾಟಕ ಕಂಪನಿಗಳು, ಇದರಿಂದಾಗಿ ಮಾಲೀಕರ ಆರ್ಥಿಕ ಸಂಕಷ್ಟ, ಬೀದಿಗೆ ಬಿದ್ದ ಕಲಾವಿದರ ಕುಟುಂಬ. ಮುಸ್ಲಿಂ, ಬ್ರಾಹ್ಮಣ ಕಲಾವಿದರ ಪ್ರೀತಿಗೆ ಗಲಭೆ ತಂದಿಟ್ಟ ಸಂಪ್ರದಾಯವಾದಿಗಳ ವಿರೋಧ. ಇದು ಮುಂದುವರೆದು ಬಾಲಗಂಧರ್ವ ಮತ್ತು ಗೋಹರ್ ಬಾಯಿ ನಾಟಕಕ್ಕೆ ತೋರುವ ವಿರೋಧ. ಭಾಷಾ ಪ್ರಾಂತ್ಯಗಳ ನಡುವಿನ ಭಾಷಾ ದ್ವೇಷದಿಂದಲೂ ಎದುರಿಸುವ ತಾತ್ಸಾರ, ಭಾಷಾ ಮತ್ಸರ, ಕಲೆಯನ್ನೇ ಆರಾಧಿಸಿ ಬದುಕು ಕಟ್ಟಿಕೊಳ್ಳುವ ಕಲಾವಿದರ ಅಂತ್ಯದ ಬದುಕಿನ ಕೆಟ್ಟ ದಿನಗಳನ್ನು ನಾಟಕ ತೆರೆದಿಡುತ್ತದೆ.
ಅಂತಿಮವಾಗಿ ಕಲಾವಿದರಿಗೆ ಜಾತಿ, ಧರ್ಮ, ಭಾಷೆ, ದೇಶಗಳ ಸೀಮಾರೇಖೆ ಇಲ್ಲ, ಇರಬಾರದು
ಎನ್ನುವುದು ಪ್ರೇಕ್ಷಕರಿಗೆ ನೀಡುವ ಸಂದೇಶ. ಅಷ್ಟೇ ಅಲ್ಲ ಜನಸಾಮಾನ್ಯರಿಗೂ ಕೂಡ ಎನ್ನುವುದು ತಾತ್ಪರ್ಯ.

ಕಲಾವಿದರಾಗಿ ಮುಖ್ಯ ಭೂಮಿಕೆಯಲ್ಲಿ ಡಾ.ಶೃತಿ, ಸುರೇಂದ್ರ ಗೌಡ, ಸೋಮಶೇಖರ್, ಶ್ವೇತ, ಅಮಿತ್ ಕುಮಾರ್, ಕಲ್ಪನಾ ನಾಕೊಡ್, ಮಲ್ಲೇಶ್, ಬಸವರಾಜು ಕಡ್ಲೇಬಾಳು, ಪ್ರಕೃತಿ ಜಿಎಂ, ಸುಜಾತ, ಸಂತೋಷ್, ಕರಣ್ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾದರು. ಡಾ.ರಾಜಪ್ಪ ದಳವಾಯಿ ರಚಿತ ನಾಟಕಕ್ಕೆ ರವಿ ಮುರೂರು ಸಂಗೀತ, ಛಾಯ ಭಾರ್ಗವಿ ವಸ್ತ್ರ ವಿನ್ಯಾಸ, ಉಮೇಶ್ ಬೆಂಗಳೂರು ಧ್ವನಿ ಮತ್ತು ಬೆಳಕು ನೀಡಿದ್ದರು.
ಪ್ರೇಕ್ಷಕರಿಂದ “ಗೋಹರ್, ಗಂಧರ್ವ ಸಾತ್ವಿಕ ಅಭಿನಯ ಮನಸೆಳೆಯಿತು. ಅದ್ಬುತ ಪ್ರದರ್ಶನ. ಇಂಥಹ ನಾಟಕಗಳಿಂದಾಗಿ ಈ ಬಯಲು ರಂಗಮಂದಿರ ಕಟ್ಟಿದ್ದು ಸಾರ್ಥಕ. ಸಿನಿಮಾ, ಟಿವಿ ಧಾರಾವಾಹಿಗಳು ಕಾಲ್ಪನಿಕ ಭ್ರಮೆ ಹುಟ್ಟಿಸುತ್ತವೆ. ಈ ಭ್ರಮೆಯಿಂದ ಹೊರಗೆ ಬರಲು ಇಂಥಹ ನಾಟಕಗಳು ಅವಶ್ಯಕ” ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

“ಕೇವಲ ಒಂದು ತಿಂಗಳಲ್ಲಿ ಹೊಸ ಕಲಾವಿದರು ಸೇರಿ ರಂಗತರಭೇತಿಯೊಂದಿಗೆ ನಾಟಕವನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರೊ. ರಹಮತ್ ತರೀಕೆರೆ ಗುರುತಿಸಿರುವಂತೆ ಗೋಹರ್ಜಾನ್ ಎಂಬ ಹೆಣ್ಣುಮಗಳು ಬಾಲಗಂಧರ್ವರಿಗೆ ಪ್ರತಿಯಾದ ‘ಪ್ರತಿಗಂಧರ್ವ’ ಹೆಸರಿಗೆ ಭಾಜನಳು. ಯಾಕೆಂದರೆ ಮಹಿಳೆಯರು ಗಂಧರ್ವರೆಂದು ಕರೆಸಿಕೊಂಡ ನಿದರ್ಶನಗಳೇ ಇಲ್ಲದ ದಿನಮಾನಗಳವು. ಪ್ರಾಯಶಃ ಇದನ್ನೇ ಅನುಲಕ್ಷಿಸಿ ಡಾ. ರಾಜಪ್ಪ ದಳವಾಯಿ ‘ಪ್ರತಿಗಂಧರ್ವ’ ಹೆಸರಿನ ನಾಟಕ ರಚಿಸಿದ್ದಾರೆ. ಇದು ಪ್ರಸಿದ್ಧ ನಾಟಕ ಸಂಸ್ಕೃತಿಯ ಲೋಕಸತ್ಯ ಪಾತ್ರಗಳ ಕತೆ. ಶತಮಾನದ ಹಿಂದೆ ನಾಟಕದೊಳಗೆ ನಡೆಯುವ ನಾಟಕದ ಕತೆ, ನಾಟ್ಯಸಂಗೀತದ ಹುಲುಸಾದ ದೃಶ್ಯಕಾವ್ಯ ಗಂಧರ್ವ ಜಗತ್ತಿನ ಪ್ರೀತಿ, ವಿರಹಗಳ ದುರಂತ ಕತೆ” ಎಂದು ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಭಿಪ್ರಾಯಪಟ್ಟರು.
ಲೇಖಕ ಪ್ರೊ. ರಹಮತ್ ತರೀಕೆರೆ ಮಾತನಾಡಿ,
“ಅಮೀರ್ಬಾಯಿ ಕರ್ನಾಟಕಿ ಅವರ ಕುರಿತು ಬರೆದ ಪುಸ್ತಕ ನಾಟಕ ರೂಪದಲ್ಲಿ ರಂಗಾಸಕ್ತರ ಮುಂದೆ ಪ್ರದರ್ಶನಗೊಳ್ಳುತ್ತಿರುವುದು ಸಂತೋಷ ತಂದಿದೆ. ಅಮೀರ್ಬಾಯಿ ಕರ್ನಾಟಕಿ ಕುರಿತ ರಚನೆಗಾಗಿ ಮಹಾರಾಷ್ಟ್ರ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದೆ. ಅಮೀರ್ಬಾಯಿ ಹಾಗೂ ಗೋಹರ್ಬಾಯಿ ಸಹೋದರಿಯರು ರಂಗಭೂಮಿ ಪ್ರವೇಶಿಸಿ ಒಂದು ಶತಮಾನ ತುಂಬಿದೆ. ಆ ಸಹೋದರಿಯರು ಧರ್ಮ, ಕಲೆ ಹಾಗೂ ಪ್ರೇಮದ ಚೌಕಟ್ಟು, ಎಲ್ಲೇ ಮೀರಿದವರು” ಲೇಖಕ ಪ್ರೊ. ರಹಮತ್ ತರೀಕೆರೆ ಹೇಳಿದರು.

ನಾಟಕ ಉದ್ಘಾಟಿಸಿದ ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಮಾತನಾಡಿ “ಲೇಖಕ ರಹಮತ್ ತರೀಕೆರೆ ಅವರದು ವಿಶಿಷ್ಟ ಬರವಣಿಗೆಯ ಅಮೀರ್ಬಾಯಿ ಕರ್ನಾಟಕಿ ಕೃತಿ ಓದಿದಾಗ, ನನಗೆ ಆತ್ಮೀಯ, ಹತ್ತಿರ ಎನಿಸಿತು. ಬಹಳ ದಿನಗಳಿಂದ ಇದರ ನಾಟಕ ಬರೆಸಬೇಕೆಂಬ ಆಸೆ ಇತ್ತು. ಸಮಾಜದಲ್ಲಿ ಹೆಣ್ಮಕ್ಕಳ ಜ್ಞಾನ, ಕಲೆ, ಪ್ರತಿಭೆ ಹತ್ತಿಕ್ಕುವ, ತುಳಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಆಕೆಯನ್ನು ಪುರುಷರಷ್ಟೇ ಸಮಾನವಾಗಿ ನೋಡುವ ಸಹೃದಯತೆ ಎಲ್ಲರಲ್ಲೂ ಬೆಳೆಯಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಭೂಮಿ,ವಸತಿ ರಹಿತರ ಬಗರ್ ಹುಕುಂ ಮಂಜೂರಾತಿಗಾಗಿ ನವೆಂಬರ್ 26ಕ್ಕೆ ಬೆಂಗಳೂರು ಚಲೋ
ವೀಕ್ಷಕರ ಮುಂಚೂಣಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಲೇಖಕ ಡಾ.ರಾಜಪ್ಪ ದಳವಾಯಿ, ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ಹಿರಿಯ ಪತ್ರಕರ್ತ ಮಂಜುನಾಥ್, ಲೇಖಕ ಬಾಮಾ ಬಸವರಾಜಯ್ಯ, ರಂಗಭೂಮಿ ಕಲಾವಿದ ಸಿದ್ದರಾಜು ಸೇರಿದಂತೆ ಸಾವಿರಾರು ಕಲಾಸಕ್ತರು ಹಾಜರಿದ್ದರು.





