ಆಭರಣ ತಯಾರಕನನ್ನು ಬೆದರಿಸಿ ಚಿನ್ನ, ಆಭರಣ ಕಸಿದು ದೋಚಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಉಪನಿರೀಕ್ಷಕರು ಸೇರಿ ನಾಲ್ವರನ್ನು ಮಂಗಳವಾರ ತಡರಾತ್ರಿ ಬಂಧಿಸಿರುವ ದಾವಣಗೆರೆ ನಗರದ ಕೆಟಿಜೆ ನಗರ ಠಾಣೆಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಮೂವರು ಸೇರಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ.
ಸ್ಥಳ ನಿರೀಕ್ಷೆಯಿಂದ ಹಾವೇರಿ ಜಿಲ್ಲೆಯಿಂದ ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿದ್ದ ಪಿಎಸ್ಐಗಳು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ವಂಚನೆಗೊಳಗಾದ ವಿಶ್ವನಾಥ್ ಅರ್ಕಸಾಲಿ ಕಾರವಾರ ಮೂಲದವರಾಗಿದ್ದು, ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣಗಳನ್ನು ತಯಾರಿಸಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಇಬ್ಬರು ಪಿಎಸ್ಐಗಳಾದ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ನವೆಂಬರ್ 24ರ ಮಧ್ಯರಾತ್ರಿ 12.30ಕ್ಕೆ ದಾವಣಗೆರೆಯ ಚಿನ್ನದ ವ್ಯಾಪಾರಿಗಳ ಬಳಿ ಗಟ್ಟಿ ಚಿನ್ನ, ಉಂಗುರ ಪಡೆದು ದಾವಣಗೆರೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಮೂಲಕ ಕಾರವಾರಕ್ಕೆ ತೆರಳುತ್ತಿದ್ದ ವಿಶ್ವನಾಥನನ್ನು ಖಚಿತ ಮಾಹಿತಿ ಮೇರೆಗೆ ವಿಶ್ವನಾಥನನ್ನು ಹಿಂಬಾಲಿಸಿ ಬಂದಿದ್ದರು ಎಂದು
ಮೂಲಗಳು ತಿಳಿಸಿವೆ.
ಮಫ್ತಿಯಲ್ಲಿ ಬಂದು ಕೊರಳಪಟ್ಟಿ ಹಿಡಿದು ಕೆಳಗಿಳಿಸಿ ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಸಿ, ಐಡಿ ತೋರಿಸಿ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್ನಲ್ಲಿ ಪಿಎಸ್ಐ ಮಾಳಪ್ಪ, ಪ್ರವೀಣಕುಮಾರ್ ಕೂರಿಸಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಕೆಟಿಜೆ ನಗರ ಠಾಣೆಯವರೆಗೂ ಪೊಲೀಸ್ ಜೀಪ್ನಲ್ಲಿ ಕರೆದೊಯ್ದಿದ್ದ ಪಿಎಸ್ಐಗಳು, ಬಳಿಕ ಅಲ್ಲಿಂದ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದು, ನಿನ್ನ ಬಳಿ ಇರುವ ಚಿನ್ನದ ಗಟ್ಟಿ, ಆಭರಣ ಕೊಡು ಬಿಡುತ್ತೇವೆ ಎಂದು ಬೆದರಿಕೆಯೊಡ್ಡಿ ವಿಶ್ವನಾಥ್ ಬಳಿಯಿದ್ದ 76 ಗ್ರಾಂ ಚಿನ್ನದ ಗಟ್ಟಿ, 2.15 ಗ್ರಾಂ ಬೇಬಿ ರಿಂಗ್ ಪಡೆದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಆರೋಪಿಗಳು ಬೆದರಿಸಿದಾಗ ತಾನು ಆಭರಣ ತಯಾರಿಸಿ ಕೊಡುವ ಕೂಲಿ ಕೆಲಸ ಮಾಡುತ್ತೇನೆ ಎಂದಿದ್ದ ವಿಶ್ವನಾಥ್, ನೀವು ಪೊಲೀಸ್ ಅಧಿಕಾರಿ ಅಂತಾ ನಾನು ಹೇಗೆ ನಂಬಲಿ ಎಂದು ಪ್ರಶ್ನಿಸಿದಾಗ ಐಡಿ ಕಾರ್ಡ್ ತೋರಿಸಿದ್ದಾರೆ. ಚಿನ್ನದ ಗಟ್ಟಿ, ಬೇಬಿ ಉಂಗುರ ಕಿತ್ತುಕೊಂಡು ಕಾರಿನಲ್ಲಿ ವಿಶ್ವನಾಥನನ್ನು ದಾವಣಗೆರೆ ಬಸ್ ನಿಲ್ದಾಣಕ್ಕೆ ಬಿಟ್ಟಿದ್ದರು ಎನ್ನಲಾಗಿದೆ .

ಘಟನೆ ನಡೆದ ನಂತರ ಊರಿಗೆ ಹೋಗಿ ನಡೆದ ಘಟನೆ ವಿವರಿಸಿ ದಾವಣಗೆರೆಗೆ ಮರಳಿದ ವಿಶ್ವನಾಥ್, ದಾವಣಗೆರೆಯ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದು, ವಿಶ್ವನಾಥ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ಬಂಧಿಸಿದ್ದು, ಮಾಹಿತಿ ನೀಡಿ ಸಹಾಯ ಮಾಡಿದ ಆರೋಪದಡಿ ದಾವಣಗೆರೆ ಮೂಲದ ಇಬ್ಬರು ಆಭರಣ ತಯಾರಕರಾದ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರನನ್ನು ಬಂಧನಕ್ಕೊಳಪಡಿಸಲಾಗಿದೆ.
ತನಿಖೆ ವೇಳೆ ಕೃತ್ಯಕ್ಕೆ ಬಳಸಿದ್ದ ಕಾರು, ನಕಲಿ ಪಿಸ್ತೂಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಈ ದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದ ಪೂರ್ವವಲಯ ಐಜಿಪಿ ಡಾ. ರವಿಕಾಂತೇಗೌಡ ಅವರು “ಆರೋಪಿಗಳನ್ನು ತಡರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕೆಟಿಜೆ ನಗರ ರಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಕೇಳಲಿದ್ಧೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ತಳಕಿನಲ್ಲಿ ಸರಣಿ ಕಳ್ಳತನ: ಸಾರ್ವಜನಿಕರು ಅಂಗಡಿ ಮಾಲೀಕರಿಗೆ ಆತಂಕ
ಈ ಬಗ್ಗೆ ಈ ದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ “ಆಭರಣ ತಯಾರಕರಿಂದ ಚಿನ್ನ ದೋಚಿದ ಆರೋಪ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪಿಎಸ್ಐ ಸೇರಿದಂತೆ ನಾಲ್ವರನ್ನು ತಡರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇಂದು ಮತ್ತೆ ಮೂವರು ಸೇರಿ ಒಟ್ಟು ಏಳು ಜನರನ್ನು ಬಂಧಿಸಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಡಿವೈಎಸ್ಪಿಯವರನ್ನು ನಿಯೋಜಿಸಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಬಿಎನ್ಎಸ್) ಕಾಯ್ದೆ ಸೆಕ್ಷನ್ 309/4ರ ಅಡಿ, ಪ್ರಕರಣ ಸಂಖ್ಯೆ 0229/25 ಅಡಿ ಎಫ್ಐಆರ್ ದಾಖಲಾಗಿದೆ, ಒಟ್ಟು ಏಳು ಜನರನ್ನು ಬಂಧಿಸಲಾಗಿದೆ ಎಂದು ಕೆಟಿಜೆ ನಗರ ಠಾಣೆಯ ಮೂಲಗಳು ತಿಳಿಸಿವೆ.





