ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿಯೋಜನೆಯು 500 ಕೋಟಿ ಮಹಿಳೆಯರನ್ನು ತಲುಪಿದ ಅಂಗವಾಗಿ ದಾವಣಗೆರೆ ನಗರ, ಜಗಳೂರು, ಹೊನ್ನಾಳಿ ಸೇರಿದಂತೆ ತಾಲೂಕಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣ 500 ಕೋಟಿ ತಲುಪಿದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕರಾದ ಕೆ ಎಸ್ ಬಸವಂತಪ್ಪನವರ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಬಸವಂತಪ್ಪ “ಶಕ್ತಿ ಯೋಜನೆಯಿಂದ ಸುಮಾರು 40 ರಷ್ಟು ಪ್ರಯಾಣಿಕರ ಪ್ರಮಾಣ ಹೆಚ್ಚಿದ್ದು, ಇದು ಪ್ರಯಾಣ ಅಷ್ಟೇ ಅಲ್ಲ ಉದ್ಯೋಗಕ್ಕೆ ದಾರಿ ಮಾಡಿ ಕೊಟ್ಟಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಶಕ್ತಿ ಯೋಜನೆಯ ಸಹಾಯದಿಂದ ಮಹಿಳೆಯರು ಯಾರನ್ನೂ ಅವಲಂಬಿಸದೆ ಮುಕ್ತವಾಗಿ ಪ್ರಯಾಣಿಸಿ, ಈ ಯೋಜನೆಯು ಕರ್ನಾಟಕ ರಾಜ್ಯದ ಎಲ್ಲಾ ಆರ್ಥಿಕವಾಗಿ ಹಿಂದುಳಿದ ಮಹಿಳಾ ನಾಗರಿಕರ ಸಾಮಾಜಿಕ ಸ್ಥಾನಮಾನ ಮತ್ತು ಜೀವನ ಮಟ್ಟವನ್ನು ಸುಧಾರಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ಮಹಿಳಾ ನಾಗರಿಕರು ಯಾವುದೇ ವಯಸ್ಸು ಅಥವಾ ಆದಾಯದ ನಿರ್ಭಂಧವಿಲ್ಲದೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಬಹುದು” ಎಂದರು.

ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್ ಮಾತನಾಡಿ, “ಶಕ್ತಿಯೋಜನೆಯು ಅತ್ಯಂತ ಯಶಸ್ವಿಯಾಗಿದ್ದು, 2025 ರ ಜುಲೈ 11 ರವರೆಗೆ ವಯಸ್ಕರು, ಮಕ್ಕಳು ಸೇರಿದಂತೆ 9,55,31,863 ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದು ಇದರ ವೆಚ್ಚ ರೂ. 2,77,21,78,538 ಕೋಟಿ ಮೊತ್ತವಾಗಿದೆ” ಎಂದು ಮಾಹಿತಿ ನೀಡಿದರು.

ಕೆಎಸ್ಆರ್ಟಿಸಿ ಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಬೀರ್, ಇಂದಿರಾ, ಲಕ್ಷ್ಮೀಬಾಯಿ, ಮುನೀರ್ ಇನ್ನಿತರಿಗೆ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬುದ್ಧ ಬಸವ ಅಂಬೇಡ್ಕರರಂತೆ ಪ್ರಜ್ಞೆ, ಕರುಣೆ ಬೆಳೆಸಿಕೊಳ್ಳಬೇಕು; ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು
ಜಗಳೂರಿನಲ್ಲಿ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ರವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿರುವ ಸಂಭ್ರಮವನ್ನು ಸಿಹಿಹಂಚುವ ಮುಖಾಂತರ ಸಂಭ್ರಮಿಸಿದ್ದು ಈ ವೇಳೆ ಮಾತನಾಡಿದ ಶಾಸಕರು “ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದ್ದು ವಿಶೇಷವಾಗಿ ಉದ್ಯೋಗಸ್ಥ, ವ್ಯಾಪಾರದ, ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉತ್ತಮ ಸೇವೆ ಒದಗಿಸಿಕೊಡುವ ಯೋಜನೆಯಾಗಿದೆ. ಇಂದು 500 ಕೋಟಿ ಮಹಿಳೆಯರನ್ನು ಯೋಜನೆ ತಲುಪಿರುವುದು ದಾಖಲೆ. 31 ಲಕ್ಷಕ್ಕೂ ಅಧಿಕ ಮಂದಿ ತಾಲೂಕಿನ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ” ಎಂದು ತಿಳಿಸಿದರು.

ಸಂಭ್ರಮಾಚರಣೆಯಲ್ಲಿ ಧೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ಮುಖಂಡ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,ಪಟ್ಟಣ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಮಹಿಳಾ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೆಎಸ್ಆರ್ಟಿಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.





