ಎಪಿಎಂಸಿ ಮಾರುಕಟ್ಟೆ ಮತ್ತು ಮಾರುಕಟ್ಟೆ ಹೊರಗೆ ರೈತರಿಂದ ನೇರವಾಗಿ ಭತ್ತ ಮತ್ತು ಮೆಕ್ಕೆಜೋಳವನ್ನು ಖಾಸಗಿ ಖರೀದಿದಾರರು ಖರೀದಿ ಮಾಡುತ್ತಿದ್ದು ರೈತರಿಗೆ ಸೂಕ್ತವಾದ ಬೆಲೆ ಸಿಗದ ಕಾರಣ ಸರ್ಕಾರದ ವತಿಯಿಂದ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಒತ್ತಾಯಿಸಿ ದಾವಣಗೆರೆ ನಗರದ ಜಯದೇವ ವೃತ್ತದಿಂದ ಜಿಲ್ಲಾಡಳಿತದ ಕಛೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ದಾವಣಗೆರೆ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ “ಈಗಾಗಲೇ ಜಿಲ್ಲೆಯಾದ್ಯಂತ ರೈತರು ಬೆಳೆದಿರುವ ಭತ್ತ ಮತ್ತು ಮೆಕ್ಕೆಜೋಳ ಕಟಾವಿಗೆ ಬಂದಿರುತ್ತದೆ. ಅಲ್ಲಲ್ಲಿ ರೈತರು ಕಟಾವನ್ನು ಕೂಡ ಮಾಡಿರುತ್ತಾರೆ. ಈಗಾಗಲೇ ರೈತರಿಗೆ ಸೂಕ್ತವಾದ ಬೆಲೆ ಇರುವುದಿಲ್ಲ. ಮೆಕ್ಕೆಜೋಳಕ್ಕೆ 1500 ರಿಂದ 1800 ರೂ.ಗೆ ಭತ್ತವನ್ನು 1700 ರಿಂದ 1900 ಕ್ಕೆ ಖರೀದಿ ಮಾಡುತ್ತಿದ್ದಾರೆ. ಇದು ರೈತರಿಗೆ ಸೂಕ್ತ ಬೆಲೆ ಅಲ್ಲದೇ, ಆರ್ಥಿಕ ನಷ್ಟದಿಂದ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ರೈತರ ಬೇಡಿಕೆಯಂತೆ ಮೆಕ್ಕೆಜೋಳಕ್ಕೆ 2500ರಿಂದ 3000 ದವರೆಗೆ ಮತ್ತು ಭತ್ತಕ್ಕೆ 3000 ದಿಂದ 3500 ವರೆಗೆ ಬೆಂಬಲ ಬೆಲೆ ನೀಡಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿಸಬೇಕು” ಎಂದು ಒತ್ತಾಯಿಸಿದರು.

“ಈ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದರೆ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತವು 2024ರಲ್ಲಿ ಸುಳ್ಳು ಭರವಸೆ ನೀಡಿ ಖರೀದಿ ಕೇಂದ್ರ ಆರಂಭ ಮಾಡುತ್ತೇವೆ ಎಂದು ಹೇಳಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿತ್ತು. ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆದಿದ್ದು ಮರುಪಾವತಿ ಮಾಡದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಸ್ಪಂದಿಸಿ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೃಷಿಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಕಚೇರಿಗಳ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶಾದ್ಯಂತ ಮದ್ಯ ನಿಷೇಧಕ್ಕೆ, ಮಹಿಳಾ ಗ್ರಾಮ ಸಭೆಗೆ ಪರಮಾಧಿಕಾರಕ್ಕೆ ಒತ್ತಾಯ
ಪ್ರತಿಭಟನಾ ರ್ಯಾಲಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಕೆಂಚಮ್ಮನಹಳ್ಳಿ ಹನುಮಂತಪ್ಪ, ಭರಮಸಮುದ್ರ ಕುಮಾರ್, ಸುನಿಲ್ ವಟಗನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಭಗತ್ ಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಣ್ಣೆಹಳ್ಳಿ ಲೋಕಣ್ಣ, ಸಿದ್ದಪ್ಪನಾಯಕ, ಮುಖಂಡರಾದ ಮಲ್ಲಿಕಪ್ಪ ಚಿಕ್ಕತೊಗಲೇರಿ, ಉಚ್ಚಂಗಪ್ಪ, ಬಸಣ್ಣ, ನೀರ್ತಡಿ ಭೀಮಣ್ಣ, ಅತ್ತಿಗೆರೆ ಮೂರ್ತಪ್ಪ, ಕೃಷ್ಣಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು





