ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿ 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಶಾಶ್ವತವಾಗಿ ಮುಚ್ಚಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ದಾವಣಗೆರೆ- ಅಖಿಲ ಭಾರತ ವಿದ್ಯಾರ್ಥಿ ಯುವಜನ (AISF) ಮತ್ತು ಅಖಿಲ ಭಾರತ ಯುವಜನ ಫೆಡರೇಷನ್ (AIYF) ದಾವಣಗೆರೆ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಆವರಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, “ಸರ್ಕಾರಿ ಶಾಲೆಗಳ ವಿಲೀನ ಮತ್ತು ಮುಚ್ಚುವ ಮೂಲಕ ಗ್ರಾಮೀಣ ಪ್ರದೇಶದ ಕೃಷಿ, ಕೂಲಿ ಕಾರ್ಮಿಕರ, ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಈ ಕ್ರಮದಿಂದ ಅವರನ್ನು ಇನ್ನಷ್ಟು ಬಡತನ, ಮೌಢ್ಯಕ್ಕೆ ತಳ್ಳಲಾಗುತ್ತಿದೆ. ಆದ್ದರಿಂದ ವಿಲೀನ ಕ್ರಮವನ್ನು ಕೈಬಿಟ್ಟು ಶಾಲೆಗಳಿಗೆ ಮೂಲಭೂತ ಸೌಕರ್ಯ, ಉತ್ತಮ ಶಿಕ್ಷಣ ಒದಗಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ಅಖಿಲ ಭಾರತ ಯುವಜನ ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ತಿಪ್ಪೇಶ್ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯಾರ್ಥಿಗಳಿಗೆ “ಪರೀಕ್ಷೆ ಮತ್ತು ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಯುವಜನ ಮುಖಂಡರಾದ ಅನಿಲ್ ಕುಮಾರ್, ನಾಗರಾಜ, ಅಣ್ಣೇಶ್, ಪ್ರಭು, ಮಂಜುನಾಥ್, ಪ್ರವೀಣ ಕೆಸಿ, ಮದನ್, ರಘುವೀರ, ಶಂಭುಲಿಂಗಪ್ಪ, ಸಂತೋಷ ಹೆಚ್ ,ಭೀಮೇಶ್, ಮುದಹದಡಿ ಸುರೇಶ್, ನಾಗರಾಜ ಎ ಸಿ, ನವೀನ್ ಸಿದ್ದಪ್ಪ ಮುಂತಾದವರು ಹಾಜರಿದ್ದರು.





