ತಂದೆ ಬೈದಿದ್ದರಿಂದ ಬೇಜಾರಾಗಿ ಮನೆಬಿಟ್ಟು ಬಂದಿದ್ದ, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹರಿಹರ ನಗರದ ಬಾಲಕನನ್ನು ದಾವಣಗೆರೆ ಸಂಚಾರ ಪೊಲೀಸರು ಪತ್ತೆ ಹಚ್ಚಿ ವಿಚಾರಿಸಿ ಪೋಷಕರ ವಶಕ್ಕೆ ಸುರಕ್ಷಿತವಾಗಿ ಮರಳಿಸಿದ ಘಟನೆ ದಾವಣಗೆರೆ ಹೊರವಲಯದ ಜಿಎಂಐಟಿ ಕಾಲೇಜು ಬಳಿ ನಡೆದಿದೆ.
ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಹೊನ್ನೂರು ಸಾಬ್ ಹಾಗೂ ಸಿಬ್ಬಂದಿ ಗಣೇಶ ನಾಯ್ಕ್ ನವೆಂಬರ್ 9 ರಂದು ಹಳೆ ಪಿಬಿ ರಸ್ತೆಯ ಜಿಎಂಐಟಿ ಕಾಲೇಜು ಬಳಿ ಕರ್ತವ್ಯದಲ್ಲಿದ್ದಾಗ 12 ವರ್ಷದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಕಂಡುಬಂದಿದ್ದಾನೆ. ಬಾಲಕನನ್ನು ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಕರೆದು ವಿಚಾರಿಸಿದಾಗ ತನ್ನ ಬಗ್ಗೆ ಮಾಹಿತಿ ತಿಳಿಸಿದ್ದು, ತಾನು ಹರಿಹರ ನಗರದವನು ಮನೆಯಲ್ಲಿ ನಮ್ಮ ತಂದೆ ಬೈದಿದ್ದರಿಂದ ಬೇಜಾರಾಗಿ ಮನೆಬಿಟ್ಟು ಬಂದಿದ್ದು ಬೇರೆ ಬೇರೆ ಕಡೆ ಸುತ್ತಾಡಿ ದಾವಣಗೆರೆ ಗೆ ಯಾವುದೋ ವಾಹನದಲ್ಲಿ ಬಂದು ಇಲ್ಲಿ ಇಳಿದುಕೊಂಡಿದ್ದರ ಬಗ್ಗೆ ತಿಳಿಸಿದ್ದಾನೆ.
ನಂತರ ಪೊಲೀಸರು ಬಾಲಕನು ನೀಡಿದ ಮಾಹಿತಿ ಮೇರೆಗೆ ಹರಿಹರದ ಬಾಲಕನ ಪೋಷಕರ ಬಗ್ಗೆ ವಿವರ ಕಲೆ ಹಾಕಿದ್ದು, ಘಟನೆ ಬಗ್ಗೆ ತಿಳಿಸಿರುತ್ತಾರೆ ಹಾಗೂ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ. ನಂತರ ಸದರಿ ಬಾಲಕನು ದಾವಣಗೆರೆಯ ವಿನೋಬಾ ನಗರದಲ್ಲಿ ತನ್ನ ದೊಡ್ಡಮ್ಮನ ಮನೆ ಇರುವುದಾಗಿ ತಿಳಿಸಿದ್ದು, ಅವರ ಮನೆ ಪತ್ತೆ ಹಚ್ಚಿ ಕರೆದುಕೊಂಡು ಹೋಗಿ ಬಾಲಕನ ದೊಡ್ಡಮ್ಮನಿಗೆ ಘಟನೆ ಬಗ್ಗೆ ಮಾಹಿತಿ ನೀಡಿ ಅವರ ವಶಕ್ಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು
ನಂತರ ಅವರಿಗೆ ಬಾಲಕನ ಪೋಷಕರನ್ನು ದಾವಣಗೆರೆಗೆ ಕರೆಯಿಸಿ ಸೂಕ್ತ ಬುದ್ಧಿವಾದ ಹೇಳಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ತಿಳಿಹೇಳಬೇಕು ಎಂದು ಎಚ್ಚರಿಕೆ ನೀಡಿ ಪೋಷಕರ ವಶಕ್ಕೆ ಸದರಿ ಬಾಲಕನನ್ನು ಒಪ್ಪಿಸುತ್ತಾರೆ. ಸದರಿ ಬಾಲಕನ ಪೋಷಕರು ತಮ್ಮ ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿರುವುದು ತಿಳಿದು ಬಂದಿರುತ್ತದೆ.





