“ನರೇಗಾ ಯೋಜನೆಯ ಹೆಸರಿನ ಜೊತೆಗೆ ಗಾಂಧಿ ಹೆಸರು ಬದಲಾವಣೆ ಮಾಡುತ್ತಿದ್ದಾರೆ. ಈ ರೀತಿ ಯೋಜನೆಗಳ ಹೆಸರು ಬದಲಾವಣೆಯೇ ದೇಶದ ಅಭಿವೃದ್ಧಿ ಎಂದು ಭಾವಿಸುವವರು ಇಂದು ಅಧಿಕಾರ ನಡೆಸುತ್ತಿರುವುದು ದುರ್ದೈವ” ಎಂದು ದಾವಣಗೆರೆಯಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎಬಿ ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ನೂರರ ಸಂಭ್ರಮದ ಜಾಥಾ ಅಂಗವಾಗಿ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎಬಿ ರಾಮಚಂದ್ರಪ್ಪ ಮಾತನಾಡಿ, “ಸರ್ವರೂ ಸಮಾನರು ಎಂದು ಹೇಳಿದ್ದು ಕಮ್ಯುನಿಸ್ಟ್ ಪಕ್ಷ. ಇಂದು ಕೋಮುವಾದಿ ರಾಜಕಾರಣದ ನಂಜು ಬಿತ್ತನೆಯಾಗುತ್ತಿದೆ. ಇಂದು ಕೋಮುವಾದ ವಿಜೃಂಭಿಸುತ್ತಿರುವ ಸಮಯದಲ್ಲಿ ಸಮಾನತೆಯ ಮಾತನಾಡುವುದು ದೇಶದ್ರೋಹದ ಮಾತಾಗುತ್ತಿದೆ. ಗ್ರಾಮ ಸ್ವರಾಜ್ಯ ಸಮಾನತೆಯ ಕನಸು ಕಂಡ ಮಹಾತ್ಮ ಗಾಂಧಿ ಕೂಡ ಇವರ ಕಣ್ಣಿಗೆ ದೇಶದ್ರೋಹಿ ರೀತಿ ಕಾಣುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಇಂದು ಕಮ್ಯುನಿಸ್ಟ್ ಪಕ್ಷಕ್ಕೆ ನೂರರ ಸಮಯ.1925ರಲ್ಲಿ ಪಕ್ಷ ಹುಟ್ಟಿದಾಗ ದೇಶ ಬ್ರಾಹ್ಮಣ್ಯ ಹಿಡಿತದ ಸಮಯದಲ್ಲಿತ್ತು. ಅಂದು ಸ್ವತಂತ್ರರಾದ ನಂತರ ಹಿಂದೂ ರಾಷ್ಟ್ರ ಪುನರ್ ಸ್ಥಾಪಿಸುವ ಕಲ್ಪನೆಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಂದಿನ ಪರಿಸ್ಥಿತಿಯಲ್ಲಿ ಅದನ್ನು ಸಾರಾಸಗಟಾಗಿ ವಿರೋಧಿಸಿ ಅಂಬೇಡ್ಕರ್ ಎಲ್ಲರಿಗೂ ಸಾಮಾಜಿಕ ಆರ್ಥಿಕ, ರಾಜಕೀಯ ಸಮಾನತೆಯ ಸ್ವಾತಂತ್ರ್ಯ ಬೇಕೆಂದು ಹೋರಾಟ ನಡೆಸಿದ್ದರು” ಎಂದು ಅಭಿಪ್ರಾಯಪಟ್ಟರು.
“ಅಂದು ಕಮ್ಯುನಿಸ್ಟ್ ಪಕ್ಷ ಎದುರಿಸಿದ ಸವಾಲು ಸಣ್ಣದಲ್ಲ. ಈ ನೆಲದ ಸಾಂಸ್ಕೃತಿಕತೆಯಲ್ಲಿ ಮಾರ್ಕ್ಸ್ ವಾದಿ ಚಿಂತನೆಗಳನ್ನು ಅಳವಡಿಕೆ ಮಾಡಿಕೊಂಡು ಸಾಗಿದ್ದೇ ದೊಡ್ಡ ಹೋರಾಟ. ದಾವಣಗೆರೆ ಒಂದು ಕಾಲಕ್ಕೆ ಕೆಂಪು ಕೋಟೆಯಾಗಿತ್ತು. ಆದರೆ ಇಂದು ಕಮ್ಯುನಿಸ್ಟ್ ಪಕ್ಷ ಸೇರಿ ಎಲ್ಲರಿಗೂ ಹಲವು ಸವಾಲುಗಳಿವೆ.
ಕೇಂದ್ರಸರ್ಕಾರ ವೋಟ್ ಚೋರಿ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಾಯ ತರುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗ, ನ್ಯಾಯಾಂಗ, ಕಾರ್ಯಾಂಗಗಳನ್ನು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಸರ್ಕಾರಗಳು ನಮ್ಮ ಬಡವರ, ಹಿಂದುಳಿದ, ತಳವರ್ಗಗಳ ಮಕ್ಕಳ ಅನ್ನ, ನೌಕರಿ, ಶಿಕ್ಷಣ ಕಸಿಯುತ್ತಿವೆ. ಬ್ರಿಟಿಷರು ಜಾರಿಗೆ ತಂದ ಮೆಕಾಲೆಯ ಶಿಕ್ಷಣ ಸಾರ್ವತ್ರಿಕರಣದಿಂದ ಅಂಬೇಡ್ಕರ್ ಸೇರಿದಂತೆ ನಾವೆಲ್ಲ ಶಿಕ್ಷಣ ಪಡೆಯುತ್ತಿದ್ದೇವೆ. ಇದನ್ನು ಬದಲಿಸಿ ಗುರುಕುಲ ಶಿಕ್ಷಣ ತರಬೇಕಿದೆ ಎಂದು ಈ ದೇಶದ ಪ್ರಧಾನಿ ಮಾತನಾಡುತ್ತಾರೆ. ನಮಗೆಲ್ಲಾ ಈ ಹಿಂದೆ ಗುರುಕುಲ ಶಿಕ್ಷಣದಲ್ಲಿ ಯಾರು ಮಾತ್ರ ಅಕ್ಷರ ಪಡೆಯುತ್ತಿದ್ದರು ಯಾರ್ಯಾರಿಗೆ ಅಕ್ಷರ ಜ್ಞಾನವನ್ನು ನಿರಾಕರಿಸಲಾಗಿತ್ತು ಎಂಬುದು ತಿಳಿದಿದೆ. ಇಂಥವರ ಆಡಳಿತದಲ್ಲಿ ದೇಶ ಮೌಢ್ಯದ ಕಡೆಗೆ ಸಾಗುತ್ತಿದೆ. ಇಂದಿನ ಶಿಕ್ಷಣದಲ್ಲಿ ಐದು ಶತಮಾನದ ಮುಸ್ಲಿಂ ಚರಿತ್ರೆಯನ್ನು ಪಠ್ಯದಲ್ಲಿ ತೆಗೆದು ಹಾಕಿದೆ. ವಿದ್ಯುತ್, ನೀರು, ರಸ್ತೆ ಸೇರಿದಂತೆ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿದ್ದು, ಇಂಥಹ ಹೊತ್ತಿನಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸವಾಲು ಎದುರಾಗಿದೆ. ಈ ನೆಲದ ಸಂಪತ್ತು ಸೌಹಾರ್ದತೆ ಉಳಿಸುವ ಸವಾಲು ಎದುರಾಗಿದ್ದು, ಜನಸಾಮಾನ್ಯರನ್ನು ಸೇರಿಸಿ ದೊಡ್ಡ ಹೋರಾಟ ರೂಪಿಸುವ ಮೂಲಕ ಸಮರ್ಥವಾಗಿ ಎದುರಿಸಬೇಕಿದೆ” ಎಂದು ತಿಳಿಸಿದರು.
ಹರಿಹರ ಕಾರ್ಮಿಕ ಮುಖಂಡ ಕೊಟ್ರಪ್ಪ ಮಾತನಾಡಿ “ಇಂದು ಕಮ್ಯುನಿಸ್ಟ್ ಪಕ್ಷ ನೂರು ವರ್ಷದ ಸಂಭ್ರಮದಲ್ಲಿದೆ. ಇದು ಪ್ರಾಮಾಣಿಕ ಪಕ್ಷ. ಸಮಸಮಾಜ ನಿರ್ಮಾಣ ಗುರಿ ಕಮ್ಯುನಿಸ್ಟ್ ಪಕ್ಷದ್ಧು. ನಾವೆಲ್ಲರೂ ಸೇರಿ ಇದನ್ನು ಸಾಕಾರಗೊಳಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾದಲ್ಲಿ ಗಾಂಧಿ ಹೆಸರು ಕೈಬಿಡಲು ನಿಮಗೆ ಯೋಗ್ಯತೆ ಇದೆಯೇ? ಸಾತಿ ಸುಂದರೇಶ್
ಜಯದೇವ ವೃತ್ತದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ಬಹಿರಂಗ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಸಹಕಾರ್ಯದರ್ಶಿ ಸಂತೋಷ್, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್ ಡಿ ಉಮೇಶ್ ಆವರಗೆರೆ ಮುಖಂಡರಾದ ಬಿಸಿ ಹನುಮನ ಗೌಡ ಇಪ್ಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಸ್ವಾಮಿ, ಜಗಳೂರು ಸಿಪಿಐ ಮುಖಂಡ ಮಾದಿಹಳ್ಳಿ ಮಂಜು ಜಿ ಯಲ್ಲಪ್ಪ ಕಲಿಗಾರ ರಫೀವುಲ್ಲಾ ಕೆಜಿ ಶಿವಮೂರ್ತಿ, ಐರಣಿ ಚಂದ್ರು, ಶಿವಕುಮಾರ್, ಸುರೇಶ್ ಯರಗುಂಟೆ, ಜೈನಲ್ಲಾಖಾನ್, ಸರೋಜಾ, ವಿ ಲಕ್ಷ್ಮಣ್, ನರೇಗಾ ರಂಗನಾಥ್, ಕೆರನಹಳ್ಳಿ ರಾಜು, ಎ ತಿಪ್ಪೇಶ್, ಕೆ ಬಾಲಪ್ಪ, ಎ ದಾದಾಪೀರ್ ಸೇರಿದಂತೆ ಜಿಲ್ಲಾ ಮಂಡಳಿಯ ಹಾಗೂ ಚನ್ನಗಿರಿ , ಹೊನ್ನಾಳಿ, ಜಗಳೂರು, ಹರಿಹರ ತಾಲೂಕಿನ ಸಿಪಿಐ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.





