“ಕಳೆದ ೨೬ ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿ ಮತ್ತು ಕನ್ನಡಿಗರ ಬದುಕಿನ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೋರಾಟದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕನ್ನಡಪರ ಹೋರಾಟಗಾರರ ಮೇಲೆ, ವೇದಿಕೆಯ ಮೇಲೆ ಸಾವಿರಾರು ಕೇಸುಗಳು ದಾಖಲಾಗಿವೆ. ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು” ಎಂದು ದಾವಣಗೆರೆ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ತೀವ್ರವಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು “ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯುತ್ತೇನೆ ಎಂದು ಘೋಷಿಸಿದ್ದರು. ಆದರೆ, ಇದು ಕೇವಲ ಹೇಳಿಕೆಯಾಗಿ ಉಳಿದಿದ್ದು, ಯಾವುದೇ ಕೇಸುಗಳನ್ನೂ ವಾಪಸ್ಸು ಪಡೆಯಲಾಗಿಲ್ಲ. ಹೋರಾಟಗಾರರ ಮೇಲೆ ಮೇಲ್ನೋಟಕ್ಕೆ ಪ್ರೀತಿ ತೋರಿಸುವ ಅಗತ್ಯವಿಲ್ಲ. ತೆಗೆಯುವುದಾದರೆ ಎಲ್ಲಾ ಕೇಸುಗಳನ್ನೂ ತಕ್ಷಣ ಹಿಂಪಡೆಯಬೇಕು ಎಂದು ವೇದಿಕೆ ಆಗ್ರಹಿಸಿತ್ತದೆ” ಎಂದು ಒತ್ತಾಯಿಸಿದರು.

“ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಈ ಕುರಿತು ಮನವರಿಕೆ ಮಾಡಲಾಗಿದೆ. ಸರ್ಕಾರ ಇನ್ನೂ ಮೀನಾ-ಮೇಷ ಎಣಿಸುತ್ತಿದೆ. ಹೋರಾಟಗಾರರು ನಾಡು-ನುಡಿ-ಭಾಷೆಗಾಗಿ ಹೋರಾಡಿ, ಕೇಸು ಹಾಕಿಸಿಕೊಂಡು ಜೈಲುವಾಸಕ್ಕೆ ಒಳಗಾಗಿ, ಅಲೆದಾಡುತ್ತಿದ್ದಾರೆ. ವೈಯಕ್ತಿಕವಾಗಿ ಯಾವುದೇ ಕೊಲೆ-ಸುಲಿಗೆಗೆ ಸಂಬಂಧಿಸಿದ ಕೇಸಿಲ್ಲ. ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು. ಸುಳ್ಳು ಕೇಸುಗಳು ಹೋರಾಟಗಾರರನ್ನು ಕುಗ್ಗಿಸುವ ಕೆಲಸ ಮಾಡುತ್ತವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣ ಸಂಬಂಧಿಸಿದ ಇಲಾಖೆಗಳು ಮತ್ತು ಗೃಹ ಇಲಾಖೆಗೆ ಸೂಚನೆ ನೀಡಿ, ಎಲ್ಲಾ ಕನ್ನಡಪರ ಹೋರಾಟಗಾರರ ಮೇಲಿರುವ ಕೇಸುಗಳನ್ನು ವಾಪಸ್ಸು ಪಡೆದಿದ್ದೇನೆ ಎಂದು ಆದೇಶಿಸಿ ಘೋಷಿಸಬೇಕು ಎಂದು ಕರವೇ ಒತ್ತಾಯಿಸುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖರೀದಿ ಕೇಂದ್ರ ತೆರೆದು ಬೆಳೆ ಪರಿಹಾರ ಬಿಡುಗಡೆಗೆ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ
“ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರವರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದ್ದಾರೆ.





