ಹೊಸ ಕಾರ್ಮಿಕ ಸಂಹಿತೆಗಳನ್ನು ಹಿಂದಕ್ಕೆ ಪಡೆದು ಈ ಮುಂಚೆ ಇದ್ದ ಕಾರ್ಮಿಕ ಕಾನೂನುಗಳನ್ನು ಪುನಃ ಜಾರಿಗೊಳಿಸಬೇಕು ಹಾಗೂ ವಸತಿ, ಪರಿಹಾರ ಸೇರಿದಂತೆ ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ (ಎಐಟಿಯುಸಿ) ದಾವಣಗೆರೆಯ ಜಿಲ್ಲಾ ಘಟಕದ ವತಿಯಿಂದ ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ಲತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಮುಖಂಡ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಉಮೇಶ್ ಆವರಗೆರೆ “ಬಹುಕಾಲದ ಹೋರಾಟಗಳ ನಂತರ 1996ರಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಎರಡು ಕಾನೂನುಗಳನ್ನು ಜಾರಿಗೊಳಿಸಲಾಯಿತು. ಕಾನೂನುಗಳಿಂದ ಕಾರ್ಮಿಕರು ಲಾಭ ಪಡೆಯುವ ಮೊದಲೇ ಅವುಗಳನ್ನು ರದ್ದುಪಡಿಸಲಾಯಿತು. ಈ ಹಿಂದೆ ಇದ್ದ 44 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಇವು ಕಾರ್ಮಿಕರ ಶೋಷಣೆಗೆ ಕಾರಣವಾಗುತ್ತಿದ್ದು, ಇವುಗಳನ್ನು ಕೂಡಲೇ ಹಿಂಪಡೆಯಬೇಕು. ಜೊತೆಗೆ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಬೇಕು” ಎಂದು ಒತ್ತಾಯಿಸಿದರು.

“ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಬೇಡಿಕೆಗಳಾದ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996ನ್ನು ಮರುಸ್ಥಾಪಿಸಬೇಕು, ಪ್ರಾದೇಶಿಕ ಸ್ಥಿತಿಗಳಿಗೆ ಅನುಗುಣವಾಗಿ ಕಾರ್ಮಿಕ ಕಾನೂನುಗಳನ್ನು ರೂಪಿಸುವ ಹಕ್ಕನ್ನು ರಾಜ್ಯಗಳಿಗೆ ನೀಡಬೇಕು. ಎಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಇಎಸ್ಐ, ಪಿಎಫ್ ( ESI,PF) ಹಾಗೂ ಭದ್ರತಾ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಕಾರ್ಮಿಕರಿಗೆ ಕನಿಷ್ಠ 36,000 ಮಾಸಿಕ ವೇತನ ನಿಗದಿಪಡಿಸಿ, 60 ವರ್ಷದ ನಂತರ 6 ಸಾವಿರ ಪಿಂಚಣಿ ನೀಡಬೇಕು” ಎಂದು ಒತ್ತಾಯಿಸಿದರು.

“ನಿರ್ಮಾಣ ಕಾರ್ಮಿಕರಿಗೆ ಕನಿಷ್ಠ 250 ದಿನಗಳ ಉದ್ಯೋಗ ಖಾತರಿ ನೀಡಿ, ಕಲ್ಯಾಣ ಸೆಸ್ ಶೇ. 2ಕ್ಕೆ ಹೆಚ್ಚಿಸುವುದು ಮತ್ತು ನಿರ್ಮಾಣ ವಲಯದ ಮಹಿಳಾ ಕಾರ್ಮಿಕರಿಗೆ ಆರು ತಿಂಗಳ ವೇತನ ಸಹಿತ ಹೆರಿಗೆ ನೀಡುವುದು ಹಾಗೂ ನಿರ್ಮಾಣ ಕಾರ್ಮಿಕರಿಗೆ ವಸತಿಗಾಗಿ ಭೂಮಿ ಮತ್ತು ಸಹಾಯಧನ ಒದಗಿಸಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.

“ಕಟ್ಟಡ ಕಾಮಗಾರಿ ಸಮಯದಲ್ಲಿ, ಅಪಘಾತದ ಸಮಯದ ಪರಿಹಾರದಲ್ಲಿ ತಾರತಮ್ಯ ಸರಿಯಲ್ಲ. ಕಾರ್ಮಿಕ, ದುಡಿಯುವ ಯಜಮಾನನ್ನು ಕಳೆದುಕೊಂಡ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಸಂಬಂಧಿತ ಕುಟುಂಬ ಸದಸ್ಯರಿಗೆ 5000 ಮಾಸಿಕ ಪಿಂಚಣಿ ನೀಡಬೇಕು ಎಂದು (AITUC) ಅಖಿಲ ಭಾರತ ಸಾಮಾನ್ಯ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗಿದ್ದು, ಈ ಮೇಲಿನ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್ಸಿಪಿಎಸ್ಟಿ ದುರ್ಬಳಕೆ ತಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ದಸಂಸ ಮನವಿ
ಪ್ರತಿಭಟನೆಯಲ್ಲಿ ಎಐಟಿಯುಸಿ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ
ವಿ ಲಕ್ಷಣ್, ಎಸ್ ಮುರುಗೇಶ್, ಶಿವಕುಮಾರ ಡಿ ಶೆಟ್ರು,
ಎಸ್ ಎಂ ಸಿದ್ದಲಿಂಗಪ್ಪ , ಲಕ್ಷ್ಮಣ, ಶಾಗಲೆ ಹನುಮಂತಪ್ಪ,
ಸುರೇಶ್ ಯರಗುಂಟಿ, ಸುರೇಶ್ ಹೆಚ್ ಕೆ ಆರ್, ತಿಪ್ಪೇಸ್ವಾಮಿ, ಸುರೇಶ್ ಮುದಹದಡಿ, ನಾಗಮ್ಮ, ಶೇಖರ್ ಹಾಲವರ್ತಿ, ಮೋಹನ್ ಆಚಾರ್, ಗಂಗಾಧರಾಚಾರಿ, ಭೀಮಶಿ ಕೆ ಜಿ, ಚನ್ನಗಿರಿ ತಾಲೂಕಿನ ಅಧ್ಯಕ್ಷರ ಜಯಾನುಲ್ಲ, ಪ್ರಧಾನ ಕಾರ್ಯದರ್ಶಿ ಮಧು, ಶಿವಾಜಿ ರಾವ್, ಶಾಂತಣ್ಣ ಸೇರಿದಂತೆ ನೂರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಇತರ ಕಾರ್ಮಿಕರು ಭಾಗವಹಿಸಿದ್ದರು.





