ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ವೇತನ ಕಡಿತ, ಇಎಸ್ಐ ಹಾಗೂ ಇನ್ನಿತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಅಣಬೇರು ತಿಪ್ಪೇಸ್ವಾಮಿ “ಕಳೆದ ಎರಡು ಮೂರು ತಿಂಗಳಿನಿಂದ ಹೊಸ ಏಜೆನ್ಸಿ ಹೊರಗುತ್ತಿಗೆ ನೌಕರರಿಗೆ ವೇತನ ನೀಡುತ್ತಿದ್ದು, ಡಿಸೆಂಬರ್ ಜನವರಿ ತಿಂಗಳಲ್ಲಿ ವೇತನ ಕಡಿತಗೊಳಿಸಿ ಪಾವತಿಸಿದೆ. ಹಾಗೂ ಯೂನಿಫಾರಂ, ಉದ್ಯೋಗ ಪ್ರಮಾಣ ಪತ್ರ ನೀಡಲು 5,000 ಹಣ ಕೇಳುತ್ತಿದೆ. ಅದು ಕಾರ್ಮಿಕರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳುತ್ತಿದ್ದು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಹೆದರಿಕೆ ಹುಟ್ಟಿಸುತ್ತಿದೆ. ಸುಮಾರು ವರ್ಷಗಳಿಂದ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು ಅವರ ಮೇಲಿನ ದೌರ್ಜನ್ಯವನ್ನು ಮತ್ತು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಏಜೆನ್ಸಿ, ಅಧಿಕಾರಿಗಳು ಮತ್ತು ಹೊರಗುತ್ತಿಗೆ ಕಾರ್ಮಿಕರ ಸಂಘಟನೆಯ ಸಭೆ ಕರೆಯಬೇಕು. ಸಭೆಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು” ಎಂದು ಒತ್ತಾಯಿಸಿದರು.

ಹೊರಗುತ್ತಿಗೆಯ ಹಾಸ್ಟೆಲ್ ನೌಕರೆ ರತ್ನಮ್ಮ ಮಾತನಾಡಿ “15 -20 ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ವೇತನ ಚೀಟಿ, ಸಂಬಳ ಕಡಿಮೆ ಬಂದ ಬಗ್ಗೆ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಹೊಸ ಏಜೆನ್ಸಿಯವರು ಎರಡು ತಿಂಗಳಿನಿಂದ ವೇತನ ಕಡಿಮೆ ನೀಡುತ್ತಿದ್ದಾರೆ. ಇದನ್ನು ಅಧಿಕಾರಿಗಳು ಗಮನಿಸಿ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡ ಹಾಸ್ಟೆಲ್ ನೌಕರ ರವಿನಾಯ್ಕ ಮಾತನಾಡಿ “ಇಎಸ್ಐ ಪಿಎಫ್ ಸರಿಯಾಗಿ ಪಾವತಿಯಾಗುತ್ತಿಲ್ಲ. ಕಡಿಮೆ ಸಂಬಳ ನೌಕರರಿಗೆ ಪಾವತಿಯಾಗುತ್ತದೆ. ಉತ್ತಮ ಸೌಲಭ್ಯ ಸಿಗುತ್ತಿಲ್ಲ, ಏಜೆನ್ಸಿಯವರು ಹೊರಗುತ್ತಿಗೆ ನೌಕರರನ್ನು ದೌರ್ಜನ್ಯದಿಂದ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಸಭೆ ನಡೆಸಿ ಏಜೆನ್ಸಿ ಅವರೊಂದಿಗೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೇ ಮಾಧವ ವಿಠಲರಾವ್ ಕೂಡಲೇ ಏಜೆನ್ಸಿಯವರೊಂದಿಗೆ ಮಾತನಾಡಿ ಸದ್ಯದಲ್ಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಿದ್ಗಮನಹಳ್ಳಿ ನಿಂಗರಾಜ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ, ಮನೋಹರ್, ಜಿಲ್ಲಾ ಮುಖಂಡರಾದ ಸ್ವಾಮಿ ನಿಂಗಪ್ಪ, ಮುಖಂಡರಾದ ರಂಗನಾಥ್, ಹಾಲೇಶ್, ರಂಗಮ್ಮ, ಸುಮಾ, ಹನುಮಂತಪ್ಪ, ಶಾಂತಕುಮಾರ್, ರತ್ನಮ್ಮ ನವೀನ್ ಜ್ಯೋತಿ ಗಿರಿಜಮ್ಮ ಮಂಜುನಾಥ್ ಹರೀಶ್, ಯೋಗೇಶ್, ಗಿರಿಜಮ್ಮ, ದೇವಿ ರೂಪ, ಗಂಗಮ್ಮ, ಜ್ಯೋತಿ, ಪರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು





