“ಇಂದಿನ ಸಮಾಜದಲ್ಲಿ ಜನರ ಆರೋಗ್ಯ ಮತ್ತು ಆರ್ಥಿಕ ಸದೃಢತೆಯನ್ನು ಮದ್ಯ ಹಾಗೂ ಮಾದಕ ವಸ್ತುಗಳು ಕುಂಠಿತಗೊಳಿಸುತ್ತಿವೆ. ಇದರ ವಿರುದ್ಧ ಸರಿಯಾದ ಜಾಗೃತಿ ಮತ್ತು ಸ್ಪಷ್ಟ ಮಾಹಿತಿ ಎಲ್ಲರಿಗೂ ತಲುಪಿಸಬೇಕು” ಎಂದು ನ್ಯಾಯಾಧೀಶರು ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಕರೆ ನೀಡಿದರು.
ಅ.15 ರಂದು ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ “ಮಾದಕ ವ್ಯಸನಮುಕ್ತ ಕರ್ನಾಟಕದ ನಿರ್ಮಾಣ ಮಾಡೋಣ ಹಾಗೂ ದೇಶವನ್ನು ಸದೃಢಗೊಳಿಸಲು ಸಹಕರಿಸೋಣ” ಎನ್ನುವ ಘೋಷವಾಕ್ಯ, ಧ್ಯೇಯಗಳೊಂದಿಗೆ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಸೂಕ್ತ ಜಾಗೃತಿ, ಸಲಹೆ ಸೂಚನೆ, ಪುನರ್ವಸತಿ ಹಾಗೂ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಸೂಚಿಸಿದರು.
“ವಿದ್ಯಾಭ್ಯಾಸಕ್ಕೆ ಮಾರಕವಾಗುವ ಮಾದಕ ವ್ಯಸನಕ್ಕೆ ಬಲಿಯಾಗದಂತೆ ವಿದ್ಯಾರ್ಥಿಗಳನ್ನು ಮನವೊಲಿಸೋಣ, ಜನರಿಗೆ ಅನಾರೋಗ್ಯ ಉಂಟುಮಾಡುವ ಮಾದಕ ವಸ್ತುಗಳಿಂದ ದೂರ ಇರೋಣ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ವ್ಯಸನದಿಂದ ದೂರ ಸರಿಸೋಣ, ಮತ್ತು ವೈಯಕ್ತಿಕ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ತಡೆಯಾಗಿರುವ ಮಾದಕ ವ್ಯಸನದಿಂದ ಮುಕ್ತರಾಗೋಣ” ಎಂದು ಎಲ್ಲಾ ಯುವಜನತೆಗೆ ಸಂದೇಶವನ್ನು ನೀಡಿದರು.
ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಅಧಿಕಾರಿ ಡಾ.ಕೆ. ಕೆ.ಪ್ರಕಾಶ್ ಮಾತನಾಡಿ “ಮಾದಕ ವಸ್ತು ಸೇವಿಸುವವರು ಕಂಡುಬಂದಲ್ಲಿ ಸಮೀಪದ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳನ್ನು ಸಂಪರ್ಕಿಸಲು ಸೂಚಿಸಿದರು. ಅದೇ ರೀತಿ ಪೊಲೀಸ್ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡುವಂತೆ ಮತ್ತು ಡ್ರಗ್ ಫ್ರೀ ಕರ್ನಾಟಕ ಆಪ್ ಮೂಲಕ ಮಾಹಿತಿ ಪಡೆಯಲು ಅವಕಾಶವಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ
ಈ ವೇಳೆ ಹಲವು ಇಲಾಖೆಗಳ ಸಹಯೋಗದೊಂದಿಗೆ ತಯಾರಿಸಲಾದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರಾದ ದುರ್ಗಪ್ಪ, ನಾಗರಾಜು ನಾಯಕ ಮತ್ತು ಇತರೆ ವಕೀಲರು ಉಪಸ್ಥಿತರಿದ್ದರು.





