ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮ ಹಕ್ಕು ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಸಂಘಟನಾ ಸಭೆಯಲ್ಲಿ ಸಹಾಯಕಿಯರ ಫೆಡರೇಷನ್ ನ(ಎಐಟಿಯುಸಿ ಸಂಯೋಜಿತ) ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಜಯಮ್ಮ ಕರೆ ನೀಡಿದರು.
ಹೊನ್ನಾಳಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆದ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನಾ ಸಭೆಯನ್ನುದ್ದೇಶಿಸಿ ಮಾತನಾಡಿ “ಎಐಟಿಯುಸಿ ಒಂದು ಆಲದ ಮರ ಇದ್ದಂತೆ ಇದರ ಅಡಿಯಲ್ಲಿ ಅನೇಕ ದುಡಿಯುವ ವರ್ಗದ ಜನರು ಸಂಘಟಿತರಾಗಿ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ” ಎಂದು ತಿಳಿಸಿದರು.
“106 ವರ್ಷಗಳ ಇತಿಹಾಸ ಇರುವ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹೋರಾಟ ನಡೆಸಿ ನಾವು ಕೂಡ ಹಲವಾರು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಇದುವರೆಗೂ ಅಂಗನವಾಡಿ ಕಾರ್ಯಕರ್ತೆಯರು ಏನೆಲ್ಲಾ ಪಡೆದುಕೊಂಡಿದ್ದೇವೆ ಅದನ್ನು ಹೋರಾಟ ಮಾತ್ರದಿಂದಲೇ ಪಡೆದಿರುವುದು ಎಂಬುದನ್ನು ಮರೆಯಬಾರದು” ಎಂದು ಎಚ್ಚರಿಸಿದರು.

“ಆಳುವ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿದ್ದು ಐಸಿಡಿಎಸ್ ಯೋಜನೆ, ದೇಶದಲ್ಲಿ 50 ವರ್ಷ ಪೂರೈಸಿದ್ದು ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಖಾಯಂ ಗೊಳಿಸದೆ ವಂಚನೆ ಮಾಡಿದೆ, ಗ್ರಾಚುಯಿಟಿ ಜಾರಿ ಬಂದಿದ್ದು ಕೂಡ ನಮ್ಮ ಹೋರಾಟದಿಂದ ಎಫ್ ಆರ್ ಎಸ್ ನಲ್ಲಿ ಓಟಿಪಿ ಬರದಿದ್ದರೆ ಫಲಾನುಭವಿಗಳಿಗೆ ಆಹಾರ ಕೊಡಲಾಗುತ್ತಿಲ್ಲ ಇದರಿಂದ ಫಲಾನುಭವಿಗಳಿಗೂ ಅನ್ಯಾಯವಾಗುತ್ತಿದೆ ಆದ್ದರಿಂದ ಸರ್ಕಾರ ಎಫ್ ಆರ್ ಎಸ್ ಅನ್ನು ಹಿಂಪಡೆಯಬೇಕು ಮತ್ತು ಫಲಾನುಭವಿಗಳಿಗೆ ಉತ್ತಮವಾದ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಡಲು ಒತ್ತಾಯಿಸಬೇಕು” ಎಂದು ಒತ್ತಾಯಿಸಿದರು.
“ಐಸಿಡಿಎಸ್ ಯೋಜನೆಗೆ ದೇಶದಲ್ಲಿ 50 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸರ್ಕಾರವು ಖಾಯಂ ಗೊಳಿಸುವುದರ ಜೊತೆಗೆ ಪೆನ್ಷನ್ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಿ ದಿಟ್ಟವಾದ ಹೋರಾಟ ಮಾಡಬೇಕು. ಸಂಘಟನೆ ಹೋರಾಟಕ್ಕೆ ಕರೆ ಕೊಟ್ಟಾಗ ಸಾಗರದಂತೆ ನುಗ್ಗಿ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ, ಭಾಷೆ, ಧರ್ಮದ ಸಂಕೋಲೆಯಿಂದ ಹೊರಬಂದು ನಾಗರೀಕರಾಗಿದ್ದೇವೆಯೇ: ಚಿಂತಕ ಹರಿರಾಮ್
ಸಭೆಯಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹೊನ್ನಾಳಿ ತಾಲೂಕು ಸಮಿತಿ ಅಧ್ಯಕ್ಷರಾದ ಚನ್ನಮ್ಮ, ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ಎಐಟಿಯುಸಿಯ ಸುರೇಶ್ , ಶೇಖರಪ್ಪ, ಪಂಪಾಪತಿ, ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಹೆಚ್ ಜಿ ಉಮೇಶ್ ಮತ್ತು ಅಂಗನವಾಡಿ ಸಂಘಟನೆಯ ಜಿಲ್ಲಾಧ್ಯಕ್ಷೆ ಎಸ್ ಎಸ್ ಮಲ್ಲಮ್ಮ, ಪ್ರಧಾನ ಕಾರ್ಯದರ್ಶಿ ಹೊಸಳ್ಳಿ ಮಂಜುಳಾ, ಜಿಲ್ಲಾ ಮುಖಂಡರುಗಳಾದ ಮಮತ, ಸುಶೀಲ, ವಸಂತ, ಕೆ ಜಿ ಗೀತ, ರೇಣುಕಾ ಸೇರಿದಂತೆ ಇತರೆ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು.





