ಕಳೆದ ಬಾರಿ ಆಶಾ ಕಾರ್ಯಕರ್ತೆಯರ ಹೋರಾಟದ ಸಂದರ್ಭದಲ್ಲಿ ಮಾಸಿಕ 10 ಸಾವಿರ ರೂಪಾಯಿಗಳನ್ನು ಭರವಸೆ ನೀಡಿದ್ದು ಇಲ್ಲಿಯವರೆಗೆ ಆದೇಶ ಆಗಿಲ್ಲ, ಹಾಗೂ ಕಳೆದ ಬಜೆಟ್ಟಿಯಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ 1000 ರೂ. ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಆಶಾ ಕಾರ್ಯಕರ್ತೆಯರಿಗೆ ಇಲ್ಲಿವರೆಗೂ ವೇತನ ಹೆಚ್ಚಳ ಮಾಡಿಲ್ಲ. ಈ ಕೂಡಲೇ ಕೊಟ್ಟ ಭರವಸೆಯಂತೆ, ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಕೆಲಸದಿಂದ ಕೈ ಬಿಡುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ಎಐಯುಟಿಯುಸಿ -ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC) ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷ ಮಂಜುನಾಥ್ ಕುಕ್ಕುವಾಡ, “ಕಳೆದ ಬಾರಿಯ ಪ್ರತಿಭಟನೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಯಾವುದೇ ವೇತನ ಹೆಚ್ಚಳ ಆಗಿಲ್ಲ. ಅಲ್ಲದೆ ಹೊರಗುತ್ತಿಗೆ ಡಿ ಗ್ರೂಪ್ ಆಸೆ ತೋರಿಸಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಆದೇಶ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಹೋರಾಟಕ್ಕಿಳಿದಿದ್ದು ಮಾರ್ಚ್ 2026ರ ರಾಜ್ಯ ಬಜೆಟ್ ನಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಮಾಸಿಕ 15,000, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 8,000 ರೂ. ಬಜೆಟ್ ನಲ್ಲಿ ಘೋಷಣೆ, ಪಶ್ಚಿಮ ಬಂಗಾಳ ಮಾದರಿಯಲ್ಲಿ ನಿವೃತ್ತರಿಗೆ ಇಡುಗಂಟು ನೀಡಬೇಕು, ತೀವ್ರ ರೋಗಗಳ ಚಿಕಿತ್ಸಾ ವೆಚ್ಚಕ್ಕೆ ಕಾರ್ಪಸ್ ಫಂಡ್ ಸ್ಥಾಪನೆ, ಆರೋಗ್ಯ ಸಮಸ್ಯೆಯ ಸಮಯದಲ್ಲಿ ನಿಶ್ಚಿತ ಗೌರವದನ ಪಾವತಿಸಬೇಕು” ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶ್ರೀಮತಿ ಲಲಿತಮ್ಮ ಮಾತನಾಡಿ, “ಕೇಂದ್ರದ ಮಾರ್ಗಸೂಚಿ ಉಲ್ಲಂಘಿಸಿ ಆಶಾ ಕಾರ್ಯಕರ್ತೆಯನ್ನು ಕೈ ಬಿಡುವ ಪ್ರಕ್ರಿಯೆ ನಿಲ್ಲಿಸಬೇಕು, ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಒಂದು ವರ್ಷದ ಹಿಂಬಾಕಿ ನೀಡಬೇಕು. ಕೆಲವು ವರ್ಷಗಳಿಂದ ಬಾಕಿ ಇರುವ ಕಂಪೋನೆಂಟ್ ಗಳ ಹಣ ಬಿಡುಗಡೆ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಸರ್ವೇ ಮಾಡಿದ 1000 ರೂ. ಹಣ ಬಿಡುಗಡೆ ಮಾಡಬೇಕು. ಬೇಡಿಕೆಗಳನ್ನು ಕೂಡಲೇ ಬಜೆಟ್ ನಲ್ಲಿ ಘೋಷಿಸಿ ಅನುದಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟ ಅವಧಿಯ ತೀವ್ರ ಹೋರಾಟವನ್ನು ನಡೆಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ಕೇಂದ್ರ ಸಚಿವ ವಿ. ಸೋಮಣ್ಣರಿಂದ ತುಮಕೂರು ಹೊಸ ರೈಲ್ವೆ ಮಾರ್ಗ ಪರಿಶೀಲನೆ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ಮುಖಂಡರಾದ ಇಂದಿರಾ ಎಸ್ಆರ್ ಮಲ್ಲಾಪುರ, ಲೀಲಾವತಿ ಬಿದರಕೆರೆ, ರೂಪ ಕೊಂಡದಳ್ಳಿ, ಅಂಜಲಿ ಸೇವಾನಗರ, ಕವಿತಾ ಸಂತೆಬೆನ್ನೂರು, ಚೀಲೂರು ಮಂಜಮ್ಮ, ಕೊಕ್ಕನೂರು ರಾಧಾ, ಗುತ್ತೂರು ಗೀತಾ, ವೇದ ಹರಿಹರ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.





