ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಜಿಲ್ಲಾ ಕೋರ್ಟ್ ಗೆ ಬಾಂಬ್ ಬೆದರಿಕೆಯ ಸಂದೇಶದ ಹಿನ್ನೆಲೆಯಲ್ಲಿ ಇಂದು ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಿ, ಕೋರ್ಟ್ ಸಿಬ್ಬಂದಿ ಹೊರಗೆ ದೌಡಾಯಿಸಿದರು. ಮಾಹಿತಿ ದೊರೆತ ತಕ್ಷಣ ಪೊಲೀಸ್, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸಿ ತನಿಖೆ ನಡೆಸಿತು.
ಇಂದು ಬೆಳಿಗ್ಗೆ ಹೊರರಾಜ್ಯದ ಮೂಲದವನು ಎನ್ನಲಾದ ವ್ಯಕ್ತಿಯೊಬ್ಬನಿಂದ ನ್ಯಾಯಾಧೀಶರೊಬ್ಬರಿಗೆ ಇಮೈಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸಂದೇಶದಲ್ಲಿ ಮಧ್ಯಾಹ್ನ 12;30ಕ್ಕೆ ಬಾಂಬ್ ಸಿಡಿಯಲಿದೆ ಎಂದು ಸಂದೇಶ ಕಳುಹಿಸಿದ್ದ ಎಂದು ಮೂಲಗಳು ತಿಳಿಸಿವೆ.
ಕೂಡಲೇ ಎಚ್ಚೆತ್ತ ನ್ಯಾಯಮೂರ್ತಿಗಳು ಆಡಳಿತ ವ್ಯವಸ್ಥೆ ಮತ್ತು ಸಿಬ್ಬಂದಿಗಳಿಗೆ ವಿಷಯ ತಿಳಿಸಿ ಜಾಗ್ರತೆ ವಹಿಸಿದರು. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ಪತ್ತೆ ದಳ ಹಾಗೂ ನಿಷ್ಕ್ರಿಯ ದಳದೊಂದಿಗೆ ಕೋರ್ಟ್ ಬಳಿ ಆಗಮಿಸಿ ಬಾಂಬ್ ಪತ್ತೆಗೆ ಕ್ರಮ ಕೈಗೊಂಡರು.

ಮಧ್ಯಾಹ್ನ 1.30ರ ವೇಳೆಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದು ಒಂದು ಹುಸಿ ಬಾಂಬ್ ಬೆದರಿಕೆ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ತನಿಖೆ ನಂತರವಷ್ಟೇ ಪೊಲೀಸರಿಂದ ಸ್ಪಷ್ಟನೆ ಬರಬೇಕಿದೆ.
ಮಧ್ಯಾಹ್ನ 1.15ರ ತನಕ ತನಿಖೆ ನಡೆಸಿದ ಪೊಲೀಸರು ಯಾವುದೇ ಸಂದೇಹಾತ್ಮಕ ವಸ್ತುಗಳು ದೊರೆತಿಲ್ಲ ಎಂದು ಹಾಗಾಗಿ ಇದೊಂದು ಹುಸಿ ಬಾಂಬ್ ಕರೆ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ನಂತರ ಕೋರ್ಟ್ ಸಿಬ್ಬಂದಿಗಳು ಒಳಹೋದ ನಂತರ ಎಂದಿನಂತೆ ಕಲಾಪಗಳು ಪ್ರಾರಂಭವಾಗಿವೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದ ಜಿಲ್ಲಾ ಕೋರ್ಟ್ ಮುಖ್ಯ ಆಡಳಿತಾಧಿಕಾರಿ ಬಿ ಶ್ರೀನಿವಾಸ್, “ನ್ಯಾಯಾಧೀಶರಿಗೆ ಬಂದ ಬಾಂಬ್ ಬೆದರಿಕೆಯ ಸಂದೇಶದ ಹಿನ್ನೆಲೆಯಲ್ಲಿ ಕಲಾಪಗಳನ್ನು ಸ್ಥಗಿತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಿ ಪತ್ತೆಗೆ ಮನವಿ ಮಾಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳ ತನಿಖೆ ಕೈಗೊಂಡು ಯಾವುದೇ ಸಂಶಯಾತ್ಮಕ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಒಳಬಂದು ಮತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಮಧ್ಯಾಹ್ನ 1:30ರ ವೇಳೆಗೆ ಮತ್ತೆ ಕೋರ್ಟ್ ಕಲಾಪಗಳು ಪ್ರಾರಂಭವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೇವಾಲಾಲ್ ಜಯಂತಿಯಲ್ಲಿ ಡಿಕೆ ಶಿವಕುಮಾರ್ ಗೆ ಕಪ್ಪುಬಟ್ಟೆ ಗೋಬ್ಯಾಕ್ ಘೋಷಣೆ
“ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು ಹಾಗೂ ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳಿಗೆ ಹುಸಿ ಬಾಂಬ್ ಕರೆಗಳು ಹೆಚ್ಚಾಗಿ ಬರುತ್ತಿದ್ದು ಇದರ ಮೂಲಗಳನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕು, ಅನಾವಶ್ಯಕವಾಗಿ ಸಾರ್ವಜನಿಕರಿಗೆ ಸಿಬ್ಬಂದಿಗಳಿಗೆ ತೊಂದರೆ ನೀಡಿದ ಆರೋಪಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕೋರ್ಟ್ ಹಿರಿಯ ವಕೀಲರೊಬ್ಬರು ಒತ್ತಾಯಿಸಿದರು.





