ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ಪ್ರಾರಂಭವಾಗಿದೆ. ದಕ್ಷಿಣಕ್ಕೆ ಆಯ್ಕೆ ಆಯ್ಕೆ ಸಂಬಂಧ ಇಂದು ದಾವಣಗೆರೆ ಪ್ರದೇಶ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಚುನಾವಣಾ ಆಯ್ಕೆ ಸಮಿತಿ ವೀಕ್ಷಕರಾದ ಹೆಚ್ಎಮ್ ರೇವಣ್ಣ, ಮಂಜುನಾಥ್ ಭಂಡಾರಿ ಹಾಗೂ ಮಾಜಿ ಸಚಿವ ಆಂಜನೇಯ ನೇತೃತ್ವದಲ್ಲಿ ಆಯ್ಕೆ ಸಂಬಂಧ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಪಡೆಯಲು ಸಭೆ ನಡೆಸಲಾಯಿತು.

ಚುನಾವಣಾ ವೀಕ್ಷಕರಾಗಿ ಆಗಮಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, “ಚುನಾವಣಾ ಆಯೋಗ ದಿಢೀರ್ ಆಗಿ ಚುನಾವಣಾ ದಿನಾಂಕ ಘೋಷಿಸಿದ್ದರಿಂದ ಅಭ್ಯರ್ಥಿ ಆಯ್ಕೆಗೆ ತುರ್ತು ಸಭೆ ಕರೆಯಲಾಗಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಈ ಗೆಲುವು ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು- ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ದಿಕ್ಸೂಚಿ ಆಗಲಿದ್ದು, ಈ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆಯ ಗೆಲುವು ಅಗತ್ಯವಿದೆ. ಇದು ರಾಷ್ಟ್ರ, ರಾಜ್ಯ ನಾಯಕರ ಆಶಯವಾಗಿದೆ” ಎಂದು ತಿಳಿಸಿದರು.
“ಕಾರ್ಯಕರ್ತರು ಚುನಾವಣೆ ಮಾಡಬೇಕು. ಇಲ್ಲಿ ಕಾರ್ಯಕರ್ತರೇ ಗೆಲ್ಲುವ ಕಾರ್ಯತಂತ್ರ ರೂಪಿಸುವರು. ಚುನಾವಣೆ ಸಂಬಂಧ ನಿಮ್ಮ ಯಾವುದೇ ಅಭಿಪ್ರಾಯ ಸಲಹೆ, ಸೂಚನೆಗಳನ್ನು ಕೊಡಿ. ವರಿಷ್ಠರಿಗೆ, ರಾಜ್ಯ ನಾಯಕರಿಗೆ ಯಾವುದೇ ಲೋಪವಿಲ್ಲದೇ ತಲುಪಿಸುವ ಜವಾಬ್ದಾರಿ ನಮ್ಮದು” ಎಂದು ಸ್ಪಷ್ಟಪಡಿಸಿದರು.

“ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಗ್ಯಾರೆಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ಸೂಚಿಸಿದ್ದರು. ಅದರಂತೆ ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಗ್ಯಾರೆಂಟಿಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ. ಅವುಗಳನ್ನು ಮತಗಳಾಗಿ ಪರಿವರ್ತನೆ ಮಾಡಬೇಕು. ಇದು ಕಾರ್ಯಕರ್ತರ ಕೈಯಲ್ಲಿದೆ. ಅಲ್ಲದೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಕರನ್ನು ಸಂಘಟಿಸಬೇಕು. ಕಾಂಗ್ರೆಸ್ಗೆ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ದೊಡ್ಡ ಶಕ್ತಿ. ಈ ಚುನಾವಣೆ ಗೆಲ್ಲುವ ಮೂಲಕ ಆ ಶಕ್ತಿಯನ್ನು ಕಾಂಗ್ರೆಸ್ನಲ್ಲಿಯೇ ಉಳಿಸೋಣ” ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾತನಾಡಿ “ಚುನಾವಣಾ ವೀಕ್ಷಕರು ಮತ್ತು ವರಿಷ್ಠರು ಎಲ್ಲರೂ ಸೇರಿ ಸೂಕ್ತ ಅಭ್ಯರ್ಥಿ ಆರಿಸಬೇಕು. ಯಾರನ್ನೇ ಆಯ್ಕೆ ಮಾಡಿದರೂ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗೋಣ. ಕಾಂಗ್ರೆಸ್ನಲ್ಲಿ ಆ ಜಾತಿ ಈ ಜಾತಿ ಎನ್ನುವುದಿಲ್ಲ. ಕಾಂಗ್ರೆಸ್ ಎನ್ನುವುದು ಒಂದೇ ಜಾತಿ. ಹಳೆಯ ರೀತಿಯಲ್ಲಿ ಗೊಂದಲ ಮಾಡಿಕೊಳ್ಳದೆ ಎಲ್ಲರೂ ಕುಳಿತು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಚುನಾವಣೆಗೆ ಹೋಗೋಣ. ಹೇಳುವುದು ಒಂದು, ಮಾಡುವುದು ಇನ್ನೊಂದು ರೀತಿಯಲ್ಲಿ ಬೇಡ.. ಕೆಲವರು ಕಾಂಗ್ರೆಸ್ನಲ್ಲಿ ಇಲ್ಲದೆ ಕೆಲಸ ಮಾಡದೆ ಟಿಕೆಟ್ ಕೊಡುತ್ತಿದ್ದಾರೆ. ಅವರು ಯಾವಾಗ ಕಾಂಗ್ರೆಸ್ ಕೆಲಸ ಮಾಡಿದ್ದಾರೆ. ಬಿಜೆಪಿ ಹಾವಳಿ ಜಾಸ್ತಿಯಾಗಿದೆ. ಇದರ ವಿರುದ್ಧ ಒಂದಾಗಿ ಕೆಲಸ ಮಾಡಬೇಕು. ಅಧಿಕಾರಕ್ಕಾಗಿ ಅವರು
ಹಿಂದೂ ಮುಸ್ಲಿಂ ಗಲಾಟೆ ಮಾಡಿಸುತ್ತಾರೆ. ಅದನ್ನು ಎದುರಿಸುವವರು ಬೇಕು. ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷ ವಿರೋಧಿಗಳಿಗೆ ಮಣೆ ಹಾಕಬಾರದು. ಜಮೀರ್ ಅಹ್ಮದ್ ನಾವು ಸ್ನೇಹಿತರು. ನಾನು ಅವರೊಂದಿಗೆ ಮಾತನಾಡುವುದೇ ಹೀಗೆ. ಅವನ ಹೇಳಿಕೆಯ ಬಗ್ಗೆ ತಪ್ಪು ಅರ್ಥ ಬೇಡ” ಎಂದು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಎಚ್ ಎಮ್ ರೇವಣ್ಣ ಮಾತನಾಡಿ, “ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕರ್ತರು ಎಲ್ಲರೂ ಸೇರಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಯಾವುದೇ ವಿವಾದಕ್ಕೆ ಆಸ್ಪದ ನೀಡಬಾರದು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರಿಗೆ, ತಮ್ಮ ಸಮುದಾಯಕ್ಕೆ ಟಿಕೆಟ್ ಬೇಕೆಂದು ಕೂಗಾಟ ಮತ್ತು ರೋಷಾವೇಷದೊಂದಿಗೆ ಅರಚಾಟ ನಡೆಸಿದ ಘಟನೆಯಿಂದ ಸಭೆ ಅಸ್ತವ್ಯಸ್ತಗೊಂಡಿತು. ಕಾಂಗ್ರೆಸ್ ನಾಯಕರು ಸೇರಿದಂತೆ ಪೊಲೀಸರು ಬೆಂಬಲಿಗರನ್ನು ಸಮಾಧಾನ ಪಡಿಸಲು ಯತ್ನಿಸಿದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ಸಾರ್ವಜನಿಕರ ಅಭಿಪ್ರಾಯಗಳನ್ನು ವೀಕ್ಷಿಸಲು ಬಂದಿದ್ದ ನಾಯಕರು ಸಭೆಯನ್ನು ಮೊಟಕುಗೊಳಿಸಿ ಅರ್ಜಿಗಳನ್ನಷ್ಟೇ ಪಡೆದು ಹಿಂದಿರುಗಿದರು.
“ಕ್ಷೇತ್ರದಲ್ಲಿ 85,000ಕ್ಕೂ ಅತಿ ಹೆಚ್ಚು ಮತ ಮತ್ತು ದೊಡ್ಡ ಸಮುದಾಯವಾಗಿರುವ ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ನೀಡಲೇಬೇಕು. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮುಸ್ಲಿಂ ಆಕಾಂಕ್ಷಿಗಳ ಬೆಂಬಲಿಗರು ಎಚ್ಚರಿಸಿ, ಘೋಷಣೆಗಳನ್ನು ಕೂಗಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ಟಿಕೆಟ್ ಗೆ ಬೆಂಬಲಿಗರ ಹೈಡ್ರಾಮ ಹಾಗೂ ಅಲ್ಪಸಂಖ್ಯಾತರ ಬಿಗಿಪಟ್ಟು
ಸಭೆಯಲ್ಲಿ ಮಾಜಿ ಸಚಿವ ಆಂಜನೇಯ, ಜಿಲ್ಲಾಧ್ಯಕ್ಷ ಮಂಜಪ್ಪ, ದಿನೇಶ್ ಶೆಟ್ಟಿ, ಸಾದಿಕ್ ಪೈಲ್ವಾನ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಮಹಿಳಾ ಘಟಕ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.





