ರಾಜ್ಯ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಕ್ರಮಗಳನ್ನು ನಡೆಸುತ್ತಿದೆ ಅಕ್ರಮಗಳನ್ನು ಪ್ರಶ್ನೆ ಮಾಡುವ ಶಾಸಕರು, ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಜಿಲ್ಲಾಡಳಿತ ಹರಿಹರ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು, ಮರಳು ಹಾಗೂ ಇತರ ದಂದೆಗಳನ್ನು ಕೂಡಲೇ ನಿಲ್ಲಿಸಬೇಕು” ಎಂದು ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ್ ಆಗ್ರಹಿಸಿದರು.
ಹರಿಹರ ತಾಲೂಕು ಸೇರಿ ದಾವಣಗೆರೆ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟ, ಮರಳುಗಾರಿಕೆ ಸೇರಿದಂತೆ ಹಲವಾರು ಅಕ್ರಮಗಳನ್ನು ಸಚಿವರು ಮತ್ತು ಅವರ ಬೆಂಬಲಿಗರು ನಡೆಸುತ್ತಿದ್ದು ಈ ಕೂಡಲೇ ಜಿಲ್ಲಾಡಳಿತ ಕಡಿವಾಣ ಹಾಕಿ ಆರೋಪಿಗಳನ್ನು ಬಂಧಿಸಬೇಕು ಹಾಗೂ ಅಕ್ರಮ ಮಣ್ಣು ಸಾಗಾಟ ತಡೆಯಲು ಹೋದ ಹರಿಹರ ಶಾಸಕ ಬಿಪಿ ಹರೀಶ್ ಮೇಲೆಯೇ ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಅಡಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರು ದಾವಣಗೆರೆ ಅಂಬೇಡ್ಕರ್ ಪ್ರತಿಮೆ ಮುಂದೆ ಸಾಂಘಿಕ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ “ಅಧಿಕಾರ ಶಾಶ್ವತವಲ್ಲ, ನೀವು ಕೇವಲ ಇನ್ನು ಎರಡು ವರ್ಷಗಳಲ್ಲಿ ಕೆಳಗೆ ಇಳಿಯಲಿದ್ದೀರಿ. ಆನಂತರ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ. ಆದರೆ ನಿಮ್ಮ ರೀತಿ ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ಕೇಸು ದಾಖಲಿಸುವ ಹಾಗೂ ಅಕ್ರಮ ದಂದೆಗಳನ್ನು ನಡೆಸುವ ಕಾರ್ಯವನ್ನು ಬಿಜೆಪಿ ಮುಖಂಡರು ಮಾಡುವುದಿಲ್ಲ. ದಾವಣಗೆರೆ ನಿಮ್ಮ ಅಧಿಕಾರದ ಅವಧಿಯಲ್ಲಿ ಅಕ್ರಮಗಳ ನಗರವಾಗಿದೆ. ಅಕ್ರಮ ಮರಳು, ಮಣ್ಣು, ಮಟ್ಕಾ ಸೇರಿದಂತೆ ಅಕ್ರಮಗಳು ನಡೆಯುತ್ತಿದ್ದು ಸಚಿವರ ಬೆಂಬಲಿಗರೇ ಇದರ ಹಿಂದೆ ಇದ್ದಾರೆ” ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ “ಜಿಲ್ಲಾ ಉಸ್ತುವಾರಿ ಸಚಿವರು ಮಾತೆತ್ತಿದರೆ ನಗರವನ್ನು ಜರ್ಮನ್ ಟೆಕ್ನಾಲಜಿಯಲ್ಲಿ ಅಭಿವೃದ್ಧಿಗೊಳಿಸುತ್ತೇವೆ ಅನ್ನುತ್ತಾರೆ. ಹತ್ತಾರು ಎಕರೆ ಕೃಷಿ ಜಮೀನನ್ನು ಬಗೆದು ಮಣ್ಣು ಸಾಗಿಸುವುದು, ಕಲ್ಲೇಶ್ವರ ಮಿಲ್ ಗೆ ಸಾಗಾಟ ಯಾವ ದೇಶದ ಟೆಕ್ನಾಲಜಿ ಎಂದು ಹೇಳಬೇಕು. ಈಗಾಗಲೇ ಬಾತಿ ಗುಡ್ಡವನ್ನು ಬಗೆದು ಕೆಲವೇ ದಿನಗಳಲ್ಲಿ ಕಣ್ಮರೆಯಾಗುವಂತೆ ಅಕ್ರಮ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಶಾಸಕ ಹರೀಶ್ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ. ನಿಮ್ಮ ಬೆಂಬಲಿಗರು ಮಾಡುತ್ತಿರುವ ಅಕ್ರಮ ದಂದೆಗಳಿಗೆ ಮುಂದಿನ ದಿನಗಳಲ್ಲಿ ದಾವಣಗೆರೆ ಜನ ತಕ್ಕ ಉತ್ತರ ನೀಡುತ್ತಾರೆ” ಎಂದು ಎಚ್ಚರಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಜಯ್ ಕುಮಾರ್ ಮಾತನಾಡಿ “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದೌರ್ಜನ್ಯ ಮಿತಿಮೀರಿದೆ. ಅಕ್ರಮ ತಡೆಯಲು ಹೋದ ಜನಪ್ರತಿನಿಧಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದೀರಿ. ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಯ ಮೇಲೆ ನಿಮ್ಮ ಸಾಮಾನ್ಯ ಕಾರ್ಯಕರ್ತರೇ ದರ್ಪ ತೋರಿದ್ದಾರೆ. ಬಳ್ಳಾರಿಯಲ್ಲಿ ವಿರೋಧ ಪಕ್ಷದ ನಾಯಕರ ಮನೆ ಮುಂದೆ ಮಧ್ಯ ಸೇವನೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಅಸಭ್ಯ ವರ್ತನೆ ತೋರಿದ್ದಾರೆ. ಇಂತಹ ವರ್ತನೆಗಳನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಮಾತನಾಡಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಅವರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಭೆಯಲ್ಲಿಯೇ ಸಿದ್ದರಾಮಯ್ಯನವರು ಅಧಿಕಾರಿಗಳ ಮೇಲೆ ಕಪಾಳ ಮೋಕ್ಷ ಮಾಡಲು ಮುಂದಾಗಿದ್ದರು. ಈ ರೀತಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಹರಿಹರದಲ್ಲೂ ಕೂಡ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಪ್ರಶ್ನೆ ಮಾಡಿದ ಶಾಸಕರಾದ ಹರೀಶ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇಂದು ದಾವಣಗೆರೆಯಲ್ಲಿ ಗಾಂಜಾ, ಮಟ್ಕಾ, ಅಕ್ರಮ ಡ್ರಗ್ಸ್ ಗಂಧೆ ನಡೆಯುತ್ತಿದ್ದು, ಕಾಂಗ್ರೆಸ್ ಮುಖಂಡರು ಸಚಿವರ ಬೆಂಬಲಿಗರು ಭಾಗಿಯಾಗಿದ್ದಾರೆ. ವಾಣಿಜ್ಯ ನಗರಿ ಆಗಿದ್ದ ದಾವಣಗೆರೆಯನ್ನು ಸಚಿವರು ಮತ್ತು ಅವರ ಬೆಂಬಲಿಗರು ಡ್ರಗ್ಸ್ ನಗರಿಯನ್ನಾಗಿ, ಅಕ್ರಮಗಳ ನಗರವನ್ನಾಗಿ ಪರಿವರ್ತಿಸಿದ್ದಾರೆ” ಎಂದು ಆರೋಪಿಸಿದರು.
ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಸಾಗಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಕ್ರಮ ಮಣ್ಣು ಮತ್ತು ಮರಳು ಸಾಗಾಟಗಾರರ ವಿರುದ್ಧ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂದು ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದು ಕುಳಿತರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ಸಂಹಿತೆಗಳು ಹಕ್ಕುಗಳ ಮೇಲಿನ ದಾಳಿ: ಎಐಯುಟಿಯುಸಿ ಎನ್.ಎಸ್. ವೀರೇಶ್
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಮಾಜಿ ಸಚೇತಕ ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್, ರೈತ ಮೋರ್ಚಾದ ಕೊಳೇನಳ್ಳಿ ಸತೀಶ್,
ಆಲೂರು ನಾಗರಾಜ್, ಜೆಡಿಎಸ್ ಮುಖಂಡರಾದ
ಚಿದಾನಂದಪ್ಪ, ಅಮಾನುಲ್ಲಾ ಖಾನ್, ಅಸ್ಗರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.





