ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಹೋರಾಟಗಾರರಿಗೆ ಪ್ರೇರಣೆಯಾಗಿದ್ದ ವಂದೇ ಮಾತರಂ ಗೀತೆ ರಚನೆಯಾಗಿ 150ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಸಂಘ ಪರಿವಾರ ಹಾಗೂ ಬಿಜೆಪಿಯವರು ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೂ ಆದ್ಯತೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
“ವಂದೇ ಮಾತರಂ ಗೀತೆಯ 150ನೇ ಸಂಭ್ರಮಾಚರಣೆಗಾಗಿ ದೇಶದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಆಂದೋಲನದ ರೀತಿಯಲ್ಲಿ ಶ್ರಮಿಸುತ್ತಿರುವುದು ಸಂತಸದ ವಿಷಯ. ಆದರೆ ಇಂದಿಗೂ ಹರಿಹರ ಸೇರಿದಂತೆ ದೇಶದ ಬಹುತೇಕ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಕ್ಷೌರ ಮಾಡಲು, ದೇವಸ್ಥಾನಗಳಲ್ಲಿ, ಹೋಟಲುಗಳಲ್ಲಿ ಪ್ರವೇಶಿಸಲು ಅವಕಾಶ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಜನತೆ ಕ್ಷೌರ ಮಾಡಿಸಲು ಅಕ್ಕಪಕ್ಕದ ದೊಡ್ಡ ಗ್ರಾಮ ಅಥವಾ ಪಟ್ಟಣ, ನಗರಗಳಿಗೆ ತೆರಳಬೇಕಿರುವುದು ಸಂಘ ಪರಿವಾರದವರಿಗೆ ಕಾಣುತ್ತಿಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

“ದಲಿತ ಯುವಕನ ಮದುವೆಯಾಗಿದ್ದ ಸವರ್ಣೀಯ ಜಾತಿಯ ಮಾನ್ಯ ಪಾಟೀಲ್ ಎಂಬ ಯುವತಿಯನ್ನು ಈಚೆಗೆ ಸ್ವತಃ ಅವರ ತಂದೆ ಹಾಗೂ ಬಂಧುಗಳು ಸೇರಿ ಕೊಂದ ಹುಬ್ಬಳ್ಳಿಯ ಪ್ರಕರಣವನ್ನು ಇದೇ ಸಂಘ ಪರಿವಾರ ಮತ್ತು ಬಿಜೆಪಿಯವರು ಈವರೆಗೆ ಏಕೆ ಖಂಡಿಸಿಲ್ಲ. ಧರ್ಮ, ಜಾತಿ, ವರ್ಣ, ಪ್ರಾಂತ್ಯ, ಲಿಂಗಾಧಾರಿತವಾಗಿ ದೇಶದಲ್ಲಿ ಈಗಲೂ ದಲಿತರು, ದುರ್ಬಲರ ಮೇಲೆ ಸವರ್ಣೀಯರು ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆ ಮಾಡುತ್ತಾ ಅಟ್ಟಾಹಾಸ ಮೆರೆಯುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕುಟುಂಬ ರಾಜಕಾರಣ ತಡೆಗೆ ಅಹಿಂದ ವರ್ಗಕ್ಕೆ ಅವಕಾಶ ನೀಡಬೇಕು: ಜಿಬಿ ವಿನಯ್ ಕುಮಾರ್
“ದೇಶದಲ್ಲಿನ ನಿರುದ್ಯೋಗ, ಭ್ರಷ್ಟಾಚಾರ ಸಮಸ್ಯೆ ಮುಚ್ಚಿ ಹಾಕಲು ತನ್ನ ಈ ಲೋಪವನ್ನು ಮರೆಮಾಚಲು ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ವಂದೇ ಮಾತರಂ ನಂತಹ ಭಾವನಾತ್ಮಕ ವಿಷಯಗಳನ್ನು ಸಂಘ ಪರಿವಾರ ಮತ್ತು ಬಿಜೆಪಿ ಆಗಾಗ್ಗೆ ಮುಂದಿಡುತ್ತಾ ಬರುವುದನ್ನು ದೇಶದ ಜನತೆ ಅರಿತಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬಿಜೆಪಿ ಮತ್ತು ಸಂಘ ಪರಿವಾರ ಏನು ಮಾಡಿದೆ ಎನ್ನುವುದು ಬಹಿರಂಗವಾಗಲಿ” ಎಂದು ಆಗ್ರಹಿಸಿದ್ದಾರೆ.





