ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಎಂದು ಹೇಳಿದ ಕಸ ಸಂಗ್ರಹಿಸುವ ವಾಹನದ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಘಟನೆ ದಾವಣಗೆರೆ ನಗರದ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹಬೂಬ್ ನಗರದ ನಾಲ್ಕನೇ ವಾರ್ಡಿನಲ್ಲಿ ನಡೆದಿದ್ದು ಪೌರ ಕಾರ್ಮಿಕರು ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.
ಇಂದು ಬೆಳಿಗ್ಗೆ ದಾವಣಗೆರೆಯ ಮೆಹಬೂಬ ನಗರದಲ್ಲಿ ಕಸ ಸಂಗ್ರಹಿಸುವ ವಾಹನದ ಚಾಲಕ ಕರಿಬಸಪ್ಪ ಎನ್ನುವವರೇ ಹಲ್ಲೆಗೊಳಗಾದ ಪೌರಕಾರ್ಮಿಕರಾಗಿದ್ದಾರೆ. ಹಸಿಒಣ ಕಸವನ್ನು ವಿಂಗಡಿಸಿ ಕೊಡಿ ಎಂದು ಹೇಳಿದ್ದಕ್ಕೆ ಹಸಿ ಒಣ ಕಸವನ್ನು ಒಟ್ಟಿಗೆ ಸುರಿದದ್ದ ಮೆಹಬೂಬ್ ನಗರದ ನೂರುಲ್ಲಾ ಮತ್ತು ಅಜ್ಜು ಎನ್ನುವವರು ಸೇರಿ ಇತರರು ಮರದ ತುಂಡುಗಳೊಂದಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಆಕ್ರೋಶಗೊಂಡ ಪೌರಕಾರ್ಮಿಕರು ಆಜಾದ್ ನಗರ ಪೊಲೀಸ್ ಠಾಣೆ ಮುಂಬಾಗ ಜಮಾಯಿಸಿ ಆರೋಪಿಗಳನ್ನು ಬಂಧಿಸಲು ಪ್ರತಿಭಟಿಸಿದರು.

ಆರೋಪಿಗಳನ್ನು ಬಂಧಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ. ಇಲ್ಲವಾದಲ್ಲಿ ನಾಳೆಯಿಂದ ಕಸ ಸಂಗ್ರಹಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ಡ್ರೈವರ್ ಕರಿಬಸಪ್ಪ ಹಾಗೂ ಸಹಾಯಕಿ, “ನಾವು ಎಂದಿನಂತೆ ಮೆಹಬೂಬ್ ನಗರದ ನಾಲ್ಕನೇ ವಾರ್ಡಿನಲ್ಲಿ ಕಸ ಸಂಗ್ರಹಿಸುತ್ತಿರುವಾಗ ಮಹಿಳೆಯೊಬ್ಬರು ಹಸಿ, ಒಣ ಕಸ ಮತ್ತು ಡೈಪರ್ ಸೇರಿದಂತೆ ಒಟ್ಟಿಗೆ ಸುರಿದಿದ್ದು ಅದನ್ನು ಬೇರ್ಪಡಿಸಲು ತಿಳಿಸಿದೆವು. ಅದರಿಂದ ಮಹಿಳೆ ಸಿಟ್ಟಿಗೆದ್ದು ಮಾತನಾಡಿದರು. ನಾವು ಕಸ ಬೇರ್ಪಡಿಸದೇ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಮುಂದಿನ ಕೆಲಸಕ್ಕೆ ತೆರಳಿದ್ದು ಪಕ್ಕದ ರಸ್ತೆಯಲ್ಲಿ ಕಸ ಸಂಗ್ರಹಿಸುತ್ತಿರುವಾಗ ಮಹಿಳೆಯ ಕುಟುಂಬದ ಮೂವರು ಗಂಡಸರು ಸೇರಿದಂತೆ ಒಟ್ಟು ಐವರು ಹಲ್ಲೆ ನಡೆಸಿದರು. ಮಹಾನಗರ ಪಾಲಿಕೆಯ ಕಸದ ಗಾಡಿ ಕೂಡ ಜಖಂ ಮಾಡಿದ್ದಾರೆ. ಈ ಹಿಂದೆ ಮೂರ್ನಾಲ್ಕು ಬಾರಿ ಹಿಂದಿನ ಕಸ ಸಂಗ್ರಹ ಮಾಡುತ್ತಿದ್ದ ಕಲೀಲ್ ಅವರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಇದರಿಂದ ನಮಗೆ ಭದ್ರತೆ ಇಲ್ಲದೆ ಜೀವಾಪಾಯ ಉಂಟಾಗಿದೆ. ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ನಾಳೆಯಿಂದ ಕಸ ಸಂಗ್ರಹಣೆಗೆ ತೆರಳಲು ಕಷ್ಟವಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ರೈತವಿರೋಧಿ ಕಾಯ್ದೆಗಳ ವಿರುದ್ಧ ಜೆಸಿಟಿಯು ಎಸ್ ಕೆಎಂ ಅಖಿಲ ಭಾರತ ಮುಷ್ಕರ
ಈ ಸುದ್ದಿ ತಿಳಿದ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪದಾಧಿಕಾರಿಗಳು ಮತ್ತು ಇತರೆ ಪೌರಕಾರ್ಮಿಕರು ಅದಾದ ನಂತರ ಠಾಣೆ ಮುಂದೆ ಜಮಾಯಿಸಿ ಪ್ರತಿಕ್ರಿಯಿಸಿ “ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಸರಿಯಾದ ತನಿಖೆ ನಡೆಸಬೇಕು. ಅಲ್ಲದೆ ಇದೇ ಪ್ರದೇಶದಲ್ಲಿ ಈ ಹಿಂದೆ ನಾಲ್ಕು ಜನ ಡ್ರೈವರ್ ಗಳ ಮೇಲೆ ಹಲ್ಲೆಯಾಗಿದೆ. ಬಂಧಿಸದೆ ಹೋದಲ್ಲಿ ನಾಳೆಯಿಂದ ಪೌರಕಾರ್ಮಿಕರು ಯಾರೂ ಕೂಡ ಕಸ ಸಂಗ್ರಹಕ್ಕೆ ಕರ್ತವ್ಯ ನಿರ್ವಹಣೆಗೆ ಹಾಜರಾಗುವುದಿಲ್ಲ” ಎಂದು ಎಚ್ಚರಿಸಿದ್ದಾರೆ.





