ದಲಿತ ಸಂಘಟನೆಗಳ ಒಕ್ಕೂಟ ಮತ್ತು ಮಾದಿಗ ಸಮುದಾಯದಿಂದ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ, ಒಳಮೀಸಲಾತಿ ಜಾರಿಯಲ್ಲಿ ತಾರತಮ್ಯ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಶುಕ್ರವಾರ ನಡೆಸಿದ ದಾವಣಗೆರೆ ಬಂದ್ ಹಾಗೂ ಪ್ರತಿಭಟನೆಯ ಹೋರಾಟಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಂಧನಕ್ಕೆ ಒಳಗಾದರು.

ದಲಿತ ಸಂಘರ್ಷ ಸಮಿತಿ, ಮಾದಿಗ ಸಂಘಟನೆಗಳ ದಾವಣಗೆರೆ ಬಂದ್ ಗೆ ಬೆಂಬಲಿಸಿ ಸಿಪಿಐ ಮತ್ತು ಎಐಟಿಯುಸಿ ಕಾರ್ಮಿಕ ಸಂಘಟನೆ ಮುಖಂಡರು, ಕಾರ್ಯಕರ್ತರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕಛೇರಿಯಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಿ ಒಳಮೀಸಲಾತಿ ಪರ ಘೋಷಣೆ ಕೂಗಿ ಬಂದ್ ಹಾಗೂ ಸಂಘಟನೆಗಳಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಉಮೇಶ್ ಆವರಗೆರೆ, “ಶೋಷಣೆಗೊಳಗಾಗಿರುವ ದಲಿತರಿಗೆ ಒಳಮೀಸಲಾತಿಯಲ್ಲಿ ಮಾಡುತ್ತಿರುವ ಅನ್ಯಾಯವನ್ನು ಸರ್ಕಾರ ಈ ಕೂಡಲೇ ಸರಿಪಡಿಸಬೇಕು. ದಲಿತರ ಹಕ್ಕುಗಳನ್ನು ಅವರಿಗೆ ನೀಡಬೇಕು, ಸರ್ಕಾರದ ನಿರ್ಧಾರ ದಲಿತರಲ್ಲಿ ಗೊಂದಲ, ಒಳಜಗಳ ಉಂಟು ಮಾಡುತ್ತಿದ್ದು, ಈ ಕೂಡಲೇ ಒಳಮೀಸಲಾತಿ ಗೊಂದಲ ಪರಿಹಾರ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.

ಈ ವೇಳೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, “ಸಾಮಾಜಿಕ ನ್ಯಾಯದಂತೆ ಶೋಷಿತರಿಗೆ ಮೀಸಲಾತಿ ಕೊಡಬೇಕು. ಜನಸಂಖ್ಯೆಯ ಆಧಾರದಲ್ಲಿ ಒಳಮೀಸಲಾತಿಯ ಆಸೆ ತೋರಿಸಿ ಸಾಮಾಜಿಕ ನ್ಯಾಯದಡಿ ನಿರ್ದಿಷ್ಟ ಜನಾಂಗಕ್ಕೆ ಸರ್ಕಾರ ವಂಚನೆ ಮಾಡಿದೆ. ದಾವಣಗೆರೆಯಲ್ಲಿ ಹೋರಾಟ ಆರಂಭವಾದರೆ ಇದರ ಬಿಸಿ ರಾಜ್ಯಕ್ಕೆ ಮುಟ್ಟಲಿದೆ. ಇದರ ಹಿನ್ನೆಲೆಯಲ್ಲಿ ನೆನ್ನೆ ತುರ್ತಾಗಿ ಸಚಿವ ಸಂಪುಟ ಕೂಡಲೇ ಸಭೆ ನಡೆಸಿದೆ. ಆದರೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಒಳಮೀಸಲಾತಿ ಅನುಗುಣವಾಗಿ ಅನ್ಯಾಯ ಸರಿಪಡಿಸದೇ ಹೋದರೇ ಹೋರಾಟ ರಾಜ್ಯವ್ಯಾಪಿ ಪ್ರಾರಂಭವಾಗುತ್ತದೆ. ದಲಿತರು, ಬಡವರು, ಶೋಷಿತರು ಕೇವಲ ಹೋರಾಟಕ್ಕೆ ಹುಟ್ಟಿಲ್ಲ. ಅವರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ನಿರ್ದಿಷ್ಟ ಜನಾಂಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಬಂದ್ | ಒಳಮೀಸಲಾತಿಯಿಲ್ಲದೆ ನೇಮಕಾತಿ ಬೇಡ: ಗೊಂದಲ ಪರಿಹಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ
ಭಾರತೀಯ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಲಕ್ಷ್ಮಣ್ ಐರಣಿ ಚಂದ್ರು, ಜಿ ಯಲ್ಲಪ್ಪ, ಬಿ ಚಿನ್ನಪ್ಪ, ಕೆರನಹಳ್ಳಿ ರಾಜು, ಎ ತಿಪ್ಪೇಶ್, ಯರಗುಂಟೆ ಸುರೇಶ ,ಸರೋಜಾ, ಬೆಳಲಗೆರೆ ರುದ್ರಮ್ಮ, ಮೌನೇಶ್, ದೇವೇಂದ್ರಪ್ಪ, ಹೆಚ್ ಪಿ ಉಮಾಪತಿ, ರಘು,ಚಂದ್ರಪ್ಪ, ಆಟೋ ಹನುಮಂತಪ್ಪ, ಕಾರ್ ಮಂಜಣ್ಣ, ಚಮನ್ ಸಾಬ್, ನಾಗಮ್ಮ ಸೇರಿದಂತೆ ಮತ್ತಿತರರು ಇದ್ದರು.





