ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ-SKM) ಕರೆಯ ಮೇರೆಗೆ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಹಾಗೂ ಕಾರ್ಯಕರ್ತರು ಮಾರ್ಚ್ 10ರಂದು ಯುದ್ಧ ವಿರೋಧಿ ದಿನಾಚರಣೆ ಆಚರಿಸಿ ಅಮೇರಿಕಾ–ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಯುದ್ಧ ಎಂಬ ಪರಿಕಲ್ಪನೆಯೇ ವಿನಾಶಕಾರಿ ಎಂದು ಖಂಡಿಸಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.
“ಇತಿಹಾಸದಲ್ಲಿನ ಕಳಿಂಗ ಯುದ್ಧದಿಂದ ಹಿಡಿದು ಇರಾಕ್ ಯುದ್ಧದವರೆಗೂ ಪ್ರತಿಯೊಂದು ಯುದ್ಧವೂ ಮಾನವಕುಲಕ್ಕೆ ಭಾರಿ ನಾಶ ತಂದೊಡ್ಡಿದೆ. ದೇಶಗಳ ನಡುವಿನ ಸಮಸ್ಯೆಗಳನ್ನು ಯುದ್ಧದ ಮೂಲಕವಲ್ಲ, ಮಾತುಕತೆ ಹಾಗೂ ಅಂತರಾಷ್ಟ್ರೀಯ ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಪರಿಹರಿಸಬೇಕು. ಇರಾನ್ನ ಹಲವು ಪಟ್ಟಣಗಳ ಮೇಲೆ ನಡೆದ ಬಾಂಬ್ ದಾಳಿಯಿಂದ ನಾಗರಿಕರು, ಮಕ್ಕಳು ಸೇರಿದಂತೆ ಹಲವರು ಸಾವನ್ನಪ್ಪಿರುವುದು ಮಾನವೀಯತೆಯ ವಿರುದ್ಧದ ಕೃತ್ಯವಾಗಿದೆ” ಎಂದು ಆರೋಪಿಸಿದರು.
“ಯುದ್ಧದ ಪ್ರತಿದಾಳಿಗಳಿಂದ ನಾಗರಿಕ ಪ್ರದೇಶಗಳಿಗೂ ಹಾನಿಯಾಗುತ್ತಿದ್ದು, ಈ ಸಂಘರ್ಷ ಇನ್ನಷ್ಟು ಜೀವಹಾನಿಗೆ ಕಾರಣವಾಗಲಿದೆ. ಈ ಯುದ್ಧ ಮುಂದುವರಿದರೆ ಮೂರನೇ ಪ್ರಪಂಚ ಯುದ್ಧದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಹಿಂದಿನ ಎರಡು ಪ್ರಪಂಚ ಯುದ್ಧಗಳು ಜಗತ್ತಿಗೆ ಅಪಾರ ಜೀವಹಾನಿ ಹಾಗೂ ಆರ್ಥಿಕ ಸಂಕಷ್ಟ ತಂದಿದ್ದವು. ಅಮೇರಿಕಾ ತನ್ನ ಶಕ್ತಿಯನ್ನು ತೋರಿಸಲು ಹಿರೋಷಿಮಾ–ನಾಗಸಾಕಿ ಮೇಲೆ ಅಣುಬಾಂಬ್ ಬಳಸಿದ ಇತಿಹಾಸವನ್ನು ಮರೆಯುವಂತಿಲ್ಲ. ಇರಾನ್ ಮೇಲೆ ನಡೆಯುತ್ತಿರುವ ದಾಳಿ ಪೆಟ್ರೋಲಿಯಂ ಮೇಲಿನ ಹಿಡಿತ ಹಾಗೂ ಡಾಲರ್ ಪ್ರಾಬಲ್ಯ ಉಳಿಸಿಕೊಳ್ಳುವ ಉದ್ದೇಶದಿಂದ ನಡೆಯುತ್ತಿದೆ” ಎಂದು ಆರೋಪಿಸಿದರು.
“ಭಾರತವು ಪೆಟ್ರೋಲಿಯಂ ಅಗತ್ಯಗಳಿಗಾಗಿ ಬಹುಪಾಲು ಗಲ್ಫ್ ಪ್ರದೇಶದ ಮೇಲೆ ಅವಲಂಬಿತವಾಗಿರುವುದರಿಂದ ಈ ಯುದ್ಧದ ಪರಿಣಾಮವಾಗಿ ಇಂಧನ ಬೆಲೆ ಏರಿಕೆ ಹಾಗೂ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇರಾನ್ಗೆ ಭಾರತದಿಂದ ಆಗುತ್ತಿದ್ದ ಬಾಸುಮತಿ ಅಕ್ಕಿ, ಮಸಾಲೆ ಮತ್ತು ಇತರ ವಸ್ತುಗಳ ರಫ್ತು ಸ್ಥಗಿತವಾಗುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ನಷ್ಟ ಉಂಟಾಗಲಿದೆ. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರ ಬದುಕಿಗೂ ಅಪಾಯ ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಸ್ರೇಲ್ ಮತ್ತು ಅಮೇರಿಕಾದ ಒತ್ತಡದ ನಡುವೆಯೂ ಭಾರತ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಇರಾನ್ ಭಾರತದ ದೀರ್ಘಕಾಲದ ಮಿತ್ರ ರಾಷ್ಟ್ರವಾಗಿದ್ದು, ಕಡಿಮೆ ದರದಲ್ಲಿ ಪೆಟ್ರೋಲ್ ನೀಡುತ್ತಿರುವ ದೇಶದ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸಬೇಕು ಹಿಂದೂ ಮಹಾಸಾಗರದಲ್ಲಿ ಇರಾನ್ನ ಹಡಗಿಗೆ ನಡೆದ ದಾಳಿಯ ವಿಚಾರದಲ್ಲೂ ಭಾರತ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ” ಎಂದು ಆರೋಪಿಸಿದರು.
“ಅಮೇರಿಕಾ ಜಗತ್ತಿನ ಹಲವು ದೇಶಗಳ ಮೇಲೆ ರಾಜಕೀಯ ಹಾಗೂ ಆರ್ಥಿಕ ಒತ್ತಡ ಹೇರುತ್ತಿದೆ. ಭಾರತದ ಮೇಲೂ ವಿವಿಧ ರೀತಿಯ ಒತ್ತಡ ತರುತ್ತಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ ಆಗ್ರಹಿಸುತ್ತಿರುವಾಗ ಭಾರತವೂ ಸ್ಪಷ್ಟವಾದ ಯುದ್ಧವಿರೋಧಿ ನಿಲುವು ತಾಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪಕ್ಷಪಾತಿ ಸಮಾಜ ಕಲ್ಯಾಣ ಸಚಿವರನ್ನು ಬದಲಿಸಿ ಒಳಮೀಸಲಾತಿ ಹೋರಾಟ ಸಮಿತಿ ರಸ್ತೆ ತಡೆ
ಯುದ್ಧದಲ್ಲಿ ಮೃತಪಟ್ಟವರಿಗೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿ, ಯುದ್ಧ ತಕ್ಷಣ ನಿಲ್ಲಿಸಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಚಾಲಕರಾದ ಆವರಗೆರೆ ಉಮೇಶ್, ಹೊನ್ನೂರು ಮುನಿಯಪ್ಪ, ಮಧು ತೊಗಲೇರಿ, ಮಂಜುನಾಥ್ ಕೈದಾಳೆ, ಅವರಗೆರೆ ಚಂದ್ರು, ಐರಣಿ ಚಂದ್ರು, ಬಳ್ಳಾಪುರ ಹನುಮಂತಪ್ಪ, ಮಂಜುನಾಥ್ ಕುಕ್ಕುವಾಡ ಹಾಗೂ ಪರಶುರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.





