ಎಸ್ಐಆರ್ ಕುರಿತು ಪ್ರತಿಭಟನೆ ನಡೆಸದೆ, ಅಪಾಯ ಬದಿಗಿಟ್ಟು ಕಾಂಗ್ರೆಸ್ ಮೌನಕ್ಕೆ ಶರಣಾಗಿರುವುದು ಅಪಾಯಕಾರಿ ಬೆಳವಣಿಗೆ. ಮತದಾರರ, ನಾಗರೀಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ನಿಯಮಾವಳಿಯೇ ಎಸ್ಐಆರ್ (SIR-ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ಆಗಿದೆ” ಎಂದು ದಾವಣಗೆರೆಯಲ್ಲಿ ಎಸ್ಐಆರ್ ಕುರಿತ ಜಾಗೃತಿ ಸಮಾಲೋಚನಾ ಸಭೆಯಲ್ಲಿ ಎಸ್ಡಿಪಿಐನ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಫೆಬ್ರವರಿ 07 ರಂದು ಎಸ್ಐಆರ್ ಪ್ರಕ್ರಿಯೆ ಪ್ರಾಥಮಿಕ ಹಂತದ ಮ್ಯಾಪಿಂಗ್ ಪ್ರಕ್ರಿಯೆ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎದುರಾಗುವ ರಾಜಕೀಯ ಸವಾಲುಗಳು ಮತ್ತು ಪಕ್ಷದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲು ಎಸ್ಡಿಪಿಐನ (SDPI) ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
“ದೇಶಾದ್ಯಂತ ಮತದಾರರ ಹಕ್ಕುಗಳಿಗೆ ಗಂಭೀರ ಅಪಾಯ ಉಂಟುಮಾಡುತ್ತಿರುವ ಎಸ್ಐಆರ್ ಪ್ರಕ್ರಿಯೆ ಕುರಿತು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದರೂ ಸಹ, ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸದೇ, ಪ್ರಬಲ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಲುವು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದು ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದರು.

“ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಸ್ಐಆರ್ ಪ್ರಕ್ರಿಯೆಯ ಅಪಾಯಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ, ಮತದಾರರ ಹಕ್ಕುಗಳ ರಕ್ಷಣೆಗೆ ಧೈರ್ಯಶಾಲಿ ನಿಲುವು ತಳೆದಿರುವುದು ದೇಶದ ಗಮನ ಸೆಳೆದಿದೆ. ಈ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮಮತಾ ಬ್ಯಾನರ್ಜಿಯ ಈ ಸಾಮಾಜಿಕ ಬದ್ಧತೆಯಿಂದ ಪಾಠ ಕಲಿಯುವರೇ..? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ” ಎಂದು ಟೀಕಿಸಿದರು.
“ಶೀಘ್ರದಲ್ಲೇ ಕರ್ನಾಟಕದಲ್ಲಿಯೂ ಸಹ ಎಸ್ಐಆರ್ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಬಡವರು, ಅಲ್ಪಸಂಖ್ಯಾತರು, ವಲಸಿಗ ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ, ದಲಿತರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯ ಈ ಪ್ರಕ್ರಿಯೆಯಲ್ಲಿ ಅಡಗಿದ್ದು, ಇದು ಎನ್ಆರ್ಸಿ(NRC) ಎಂಬ ಕರಾಳ ನಿಯಮದ ಹಿಂಬಾಗಿಲು ಎಂದು ಅನೇಕ ಸಾಮಾಜಿಕ ಚಿಂತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಈ ಕರಾಳ ನಿಯಮವನ್ನು ಪ್ರಬಲವಾಗಿ ವಿರೋಧಿಸದಿರುವುದು ಅತ್ಯಂತ ಖೇದಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ

“ಜನರ ಮತದಾನದ ಹಕ್ಕು ಸಂವಿಧಾನಾತ್ಮಕ ಹಕ್ಕು, ಅದನ್ನು ರಕ್ಷಿಸುವ ಜವಾಬ್ದಾರಿ ಆಡಳಿತದಲ್ಲಿರುವ ಸರ್ಕಾರದ ಮೇಲಿದೆ. ಈ ಹಕ್ಕಿನ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗದೇ, ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಈ ಎಸ್ಐಆರ್ ಪ್ರಕ್ರಿಯೆಯಿಂದ ಉಂಟಾಗುವ ಕಾನೂನಾತ್ಮಕ, ರಾಜಕೀಯ ಮತ್ತು ಸಾಮಾಜಿಕ ದುಷ್ಪರಿಣಾಮಗಳು ಮತದಾರರನ್ನು ದಿಕ್ಕು ತಪ್ಪಿಸಿ ಕುತಂತ್ರದ ಮೂಲಕ ಅಧಿಕಾರ ಪಡೆಯಲು ಬಿಜೆಪಿ ಹವಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ” ಎಂದು ಆರೋಪಿಸಿದರು.

ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ, ಎಸ್ಡಿಪಿಐ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಇಂದಿನ ವಿಶೇಷ ಸಭೆಯ ಪ್ರಮುಖ ವಿಷಯವಾಗಿತ್ತು. ಉಪಚುನಾವಣೆಯಲ್ಲಿ ಎಸ್ಡಿಪಿಐ (SDPI) ಪಕ್ಷದ ಪಾತ್ರ ಪ್ರಮುಖವಾಗಿದ್ದು, ಚುನಾವಣಾ ಸಿದ್ಧತೆ, ಸಂಘಟನಾ ಬಲವರ್ಧನೆ ಹಾಗೂ ಪರ್ಯಾಯ ರಾಜಕೀಯದ ಅಗತ್ಯತೆಯ ಕುರಿತು ಮುಖಂಡರು ಸುದೀರ್ಘ ಚರ್ಚೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಸ್ಲಿಂ ಸಮಾಜದ ವಿರುದ್ಧ ಕೋಮುವಾದಿ ಹೇಳಿಕೆ: ಕ್ರಮಕ್ಕೆ ಮುಖಂಡರ ಆಗ್ರಹ
ಸಮಾಲೋಚನಾ ಸಭೆಯಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಮೌಲನ ಸೈಯದ್ ಅಕ್ರಮ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅಹಮದ್ ದಾವಣಗೆರೆ, ಜಿಲ್ಲಾಧ್ಯಕ್ಷರಾದ ಎ ಆರ್ ತಾಹೀರ್, ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯೀಲ್ ಝಬಿವುಲ್ಲಾ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಮೊಹಮ್ಮದ್ ಕುಬೈಬ್ ಹಾಗೂ ತಾಲ್ಲೂಕು ಮುಖಂಡರು ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.





