ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೂ ಟಿಕೆಟ್ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ಸಿನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರು ಹಾಗೂ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಮುಖಂಡ ಸಾಧಿಕ್ ಪೈಲ್ವಾನ್ ಇಂದು ಮಧ್ಯಾಹ್ನ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಕಾಂಗ್ರೆಸ್ನಲ್ಲಿ ಟಿಕೆಟ್ ಪೈಪೋಟಿ ಜೋರಾಗಿ ನಡೆದಿದ್ದು, ಅಲ್ಪಸಂಖ್ಯಾತರು ತಮಗೇ ಈ ಬಾರಿ ಟಿಕೆಟ್ ಬೇಕೆಂದು ಪಟ್ಟುಹಿಡಿದು ಕುಳಿತಿರುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರೂ ಕೂಡ ತಮ್ಮ ಪುತ್ರ ಸಮರ್ಥ್ಗೆ ಟಿಕೆಟ್ ಬೇಕೆಂದು ಕಸರತ್ತು ನಡೆಸಿದ್ದಾರೆ. ಇದು ಕಾಂಗ್ರೆಸ್ ಪಾಳಯದಲ್ಲಿ ತಿಕ್ಕಾಟಕ್ಕೆ ಕಾರಣವಾಗಿದ್ದು, ಕೆಪಿಸಿಸಿ ಟಿಕೆಟ್ ಅಂತಿಮಗೊಳಿಸಲು ತಿಣುಕಾಟ ನಡೆಸುತ್ತಿದೆ.

ಈ ಮಧ್ಯೆ ಮುಂಜಾಗ್ರತೆಯಿಂದ ಸಚಿವ ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಮಧ್ಯಾಹ್ನ 12ಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಉಮೇದುಗಾರಿಕೆಯನ್ನು ಸಲ್ಲಿಸಿದರು. ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಜೊತೆಗೆ, ಬೆಂಬಲಿಗರೊಂದಿಗೆ ಆಗಮಿಸಿದ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಸಿದ್ದಾರೆ.

ಇತ್ತ ಅಲ್ಪಸಂಖ್ಯಾತ ವರ್ಗ ಸಾಮಾಜಿಕ ನ್ಯಾಯಾದಡಿ ಮುಸ್ಲಿಂ ವರ್ಗಕ್ಕೆ ಆದ್ಯತೆ ನೀಡಿ ಈ ಬಾರಿ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದು ಕುಳಿತಿರುವ ಮಧ್ಯೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸಾಧಿಕ್ ಪೈಲ್ವಾನ್ ಅವರು ಕೂಡ ಇಂದು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ: ವೀಕ್ಷಕರ ಕಾರ್ಯಕರ್ತರ ಸಭೆ
ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿ ಸ್ಪರ್ಧೆಗೆ ಮುಂದಾಗಿರುವ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತರ ಬಿಗಿ ಪಟ್ಟು ಹಾಗೂ ಶಾಮನೂರು ಮನೆತನದ ಕಸರತ್ತಿನ ನಡುವೆ ಟಿಕೆಟ್ ಘೋಷಣೆ ಮಾಡಲಾಗದೇ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 23ನೇ ತಾರೀಕು ಅಂತಿಮ ದಿನವಾಗಿದ್ದು, ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಯಾರಿಗೆ ಕಾಂಗ್ರೆಸ್ ಬಿ ಫಾರಂ ಸಿಗಲಿದೆ ಎಂಬುದೇ ಕೌತುಕದ ಪ್ರಶ್ನೆಯಾಗಿದೆ.





