ಅಡುಗೆ ಅನಿಲ ಬೆಲೆ ಏರಿಸಿ ಜನರಿಗೆ ಹೊರೆ ಹೆಚ್ಚಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕದಿಂದ ಜಯದೇವ ವೃತ್ತದಲ್ಲಿ ಬುಧವಾರ ಪ್ರತಿಭಟನೆಯಲ್ಲಿ ನಡೆಸಲಾಯಿತು. ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು “ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಂಗ್ರೆಸ್ ಹಿಂದಿನಿಂದಲೂ ಬಡವರು, ರೈತರು, ಜನಸಾಮಾನ್ಯರ ಪರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ಗೆ ದೇಶದ ಹಿತ ಮುಖ್ಯ. ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೆ ಬರುತ್ತಿದೆ. ಪ್ರತಿನಿತ್ಯವೂ ಅಡುಗೆ ಮನೆಯಲ್ಲಿ ಮಹಿಳೆಯರಿಗೆ ಬೇಕಾಗಿರುವ ಅಡುಗೆ ಅನಿಲ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಕೂಡಲೆ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“2014 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ ಡಿ ಎ ಅಚ್ಚೇದಿನ್ ತರುತ್ತೇವೆಂದು ಹೇಳಿಕೊಳ್ಳುತ್ತ ನಾಲ್ಕು ನೂರು ರೂ.ಗಳಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ವರ್ಷವೂ ಹೆಚ್ಚಿಸುತ್ತಲೆ ಬರುತ್ತಿರುವುದರಿಂದ ಈಗ ಒಂದು ಸಾವಿರ ರೂ.ಗೆ ಮುಟ್ಟಿದೆ. ರಂಜಾನ್ ಮಾಸದಲ್ಲಿ ಅಮೇರಿಕಾ ಇಸ್ರೇಲ್ ಕೂಡಿಕೊಂಡು ಇರಾನ್ ಮೇಲೆ ದಾಳಿ ನಡೆಸುತ್ತಿರುವುದರಿಂದ ಅಪಾರ ಪಮಾಣದ ಹಾನಿಯಾಗಿದು ಅಮಾಯಕರು ಸಾಯುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಸಿ ಶ್ರೀಮಂತರಿಗೆ ಅನುಕೂಲ ಮಾಡುತ್ತಿದ್ದಾರೆ. ತಕ್ಷಣವೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?ದಾವಣಗೆರೆ | ಅಮೇರಿಕಾ–ಇಸ್ರೇಲ್ ಯುದ್ಧ ನೀತಿಗೆ ಖಂಡನೆ: ಎಸ್ ಕೆ ಎಂನಿಂದ ಯುದ್ಧ ವಿರೋಧಿ ದಿನಾಚರಣೆ
“ಬಿಜೆಪಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಸುಳ್ಳು ಹೇಳಿರುವುದೇ ದೊಡ್ಡ ಸಾಧನೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಸಬ್ಸಿಡಿಯನ್ನೆಲ್ಲಾ ಬಿಜೆಪಿ ರದ್ದುಪಡಿಸಿ ಬಡವರ ತಲೆ ಮೇಲೆ ಚಪ್ಪಡಿ ಹಾಕುತ್ತಿದೆ. ಪೆಟ್ರೋಲ್, ಡೀಸೆಲೆ ಬೆಲೆ ಹೆಚ್ಚಿಸಿದ್ದು, ಸಾಕಾಗದೆ ಅಡುಗೆ ಅನಿಲ ಬೆಲೆಯನ್ನು ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.





