ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಬೇಕು ಮತ್ತು ಪ್ರಸ್ತುತ 3500 ರೂ ದರದಲ್ಲಿ ಭತ್ತ ಖರೀದಿ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ನೂರಾರು ಕಾರ್ಯಕರ್ತರು ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ದಾವಣಗೆರೆ ಹೊರವಲಯದಲ್ಲಿ ಹೆದ್ದಾರಿ ತಡೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಹಲವು ಬಾರಿ ವಿವಿಧ ಹಂತದ ಹೋರಾಟಕ್ಕೂ ಸ್ಪಂದಿಸದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಾವಣಗೆರೆ ನಗರದ ಹೊರವಲಯದಲ್ಲಿರುವ ಆರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ಕುಳಿತ ಪರಿಣಾಮ ಪೂನಾ-ಬೆಂಗಳೂರು ನಡುವೆ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ರಸ್ತೆತಡೆಯಿಂದಾಗಿ ಎರಡೂ ಬದಿಯಲ್ಲಿ ಎರಡು ಮೂರು ಕಿಲೋಮೀಟರ್ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮನವಿಗೂ ರೈತರು ಜಗ್ಗದ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಎಲ್ಲರನ್ನು ಬಂಧಿಸಿ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದರು.
ಈ ಮಧ್ಯೆ ಮುಖ್ಯಮಂತ್ರಿಗಳೊಂದಿಗೆ ಇದೇ ಮೇ.23 ರಂದು ಮಾತುಕತೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, “ರೈತ ಸಂಘದಿಂದ ಭತ್ತದ ಬೆಂಬಲ ಬೆಲೆಗೆ ಸೂಕ್ತ ಕಾನೂನು ಜಾರಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ರೈತರ ಹೋರಾಟಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಇದರ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂದು ಹೆದ್ದಾರಿ ತಡೆ ಮಾಡಿದ ನೂರಾರು ರೈತರನ್ನು ಬಂಧಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಭತ್ತಕ್ಕೆ ಬೆಂಬಲ ಬೆಲೆ ಕಾನೂನು ಜಾರಿ ಕುರಿತು ಮುಖ್ಯಮಂತ್ರಿ ಅಥವಾ ಕೃಷಿ ಸಚಿವರು ಕಾಲಮಿತಿನಿಗದಿಮಾಡಬೇಕು. ಮತ್ತು ಪ್ರಸ್ತುತ 3500 ರೂ. ದರದಲ್ಲಿ ಪ್ರತಿ ಕ್ವಿಂಟಲ್ ಭತ್ತವನ್ನು ಖರೀದಿಸುವಂತೆ ತುರ್ತು ಆದೇಶ ನೀಡದ ಹೊರತು ಯಾವುದೇ ಕಾರಣಕ್ಕೂ ಬಂಧನದಲ್ಲಿರುವ ಯಾವ ರೈತರು ಕೂಡ ಬಂಧನದಿಂದ ಮುಕ್ತಗೊಳ್ಳದೇ ಇರಲು ನಿರ್ಧರಿಸಿದ್ದೇವೆ. ನಮ್ಮ ಬಂಧನವನ್ನು ದಾಖಲೆಗಳಲ್ಲಿ ನಮೂದಿಸಿ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಪೊಲೀಸರು ವರದಿ ನೀಡಬೇಕು. ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಯಾಗದೇ ಇದ್ದರೆ ಎಲ್ಲರೂ ಜೈಲಿಗೆ ಹೋಗಲು ಸಿದ್ಧರಿದ್ದೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
ಸಂಜೆ 7ಗಂಟೆಯ ವೇಳೆಗೆ ಶಾಸಕ ಕೆ.ಎಸ್.ಬಸವಂತಪ್ಪ ಅವರು ಡಿ.ಆರ್. ಪೊಲೀಸ್ ಮೈದಾನದಲ್ಲಿದ್ದ ರೈತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಮೇ.22 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಮೇ.23 ರಂದು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಲು ಸಮಯ ನಿಗದಿಮಾಡಿರುವ ಕುರಿತು ಸಿಎಂ ಆಪ್ತ ಕಾರ್ಯದರ್ಶಿ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಮಂಜುನಾಥ್ ತಿಳಿಸಿದರು. ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಮತ್ತು ಸಚಿವರ ಆಪ್ತ ಸಹಾಯಕ ನಾಗರಾಜ್ ಕೂಡ ಮಾತುಕತೆ ನಡೆಸಿ ರೈತರ ಮನವೊಲಿಸಿದರು.
ಪ್ರತಿಭಟನೆಯಲ್ಲಿ ಚಿನ್ನಸಮುದ್ರ ಭೀಮಾನಾಯ್ಕ, ಎಲೋದಹಳ್ಳಿ ರವಿಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿರಾಜು, ಹೂವಿನಮಡು ನಾಗರಾಜ್, ಚಿಕ್ಕತೊಗಲೇರಿ ನಟರಾಜ್, ಕೆಂಚಪ್ಪ, ನಿಂಗಪ್ಪ, ಹುಚ್ಚವ್ವನಹಳ್ಳಿ ಪ್ರಕಾಶ್, ಗುಮ್ಮನೂರು ರುದ್ರೇಶ್, ಚಿಕ್ಕಕೋಗಲೂರು ಕುಮಾರ್, ಉಪ್ಪನಾಯಕನಹಳ್ಳಿ ಉಮೇಶ್, ಗಿರಿಯಾಪುರ ಗಂಗಾಧರ ಸ್ವಾಮಿ, ಹೊನ್ನಮರಡಿ ಶಿವಕುಮಾರ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು





