“ದಾವಣಗೆರೆ ಕೌಶಲ್ಯ ಆಧಾರಿತ ಯೋಜನೆಯಡಿ ಇಲಾಖೆಯ ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಣೆ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಟೂಲ್ಕಿಟ್ ವಿತರಣೆಗಾಗಿ ಸಾರ್ವಜನಿಕರಿಂದ ಈ ಹಿಂದೆ ಅಂತರ್ಜಾಲದಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿರುತ್ತು. ಇದನ್ನೇ ಅವಕಾಶ ಮಾಡಿಕೊಂಡು ವಂಚಕರು ಆಯ್ಕೆ ಮಾಡಿಸುವುದಾಗಿ ಹಣ ವಸೂಲಿಯಲ್ಲಿ ತೊಡಗಿದ್ದು, ಸಾರ್ವಜನಿಕರು ಇದರ ಬಗ್ಗೆ ಎಚ್ಚರಿಕೆ ವಹಿಸಿ ಇಂತಹ ಮೋಸಕ್ಕೆ ಬಲಿಯಾಗಬಾರದು” ಎಂದು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕ ವೀರೇಶ್ ನಾಯ್ಕ್ ತಿಳಿಸಿದ್ದಾರೆ.
ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಣೆ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಆಸಕ್ತರಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಹೊಲಿಗೆ ಯಂತ್ರ ವಿತರಣೆ ಮತ್ತು ತರಬೇತಿಗೆ ಆಯ್ಕೆ ಮಾಡಿಸಿಕೊಡುತ್ತೇವೆ ಎಂದು ಯಾರೋ ಅಪರಿಚಿತ ವ್ಯಕ್ತಿಗಳು ಇಲಾಖೆಯ ಹೆಸರು ತಿಳಿಸಿ ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಪಾವತಿ ಮಾಡಿರುವ ಅರ್ಜಿದಾರರೊಬ್ಬರು ಇಲಾಖೆ ಗಮನಕ್ಕೆ ತಂದಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳ ಪಾಲನೆ ವಿಚಾರಕ್ಕೆ ಬಾಲ ನ್ಯಾಯಮಂಡಳಿ ಆವರಣದಲ್ಲಿ ಚಾಕು ಇರಿದು ಪತ್ನಿ ಹತ್ಯೆ
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಉಪನಿರ್ದೇಶಕರು “ಇಲಾಖೆಯಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಯಾವುದೇ ಕರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಅನಾಮಧೇಯ ವ್ಯಕ್ತಿಗಳು ಅರ್ಜಿದಾರರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು” ಎಂದು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕ ವೀರೇಶ್ ನಾಯ್ಕ್ ತಿಳಿಸಿದ್ದಾರೆ.





