ಕನಿಷ್ಠ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಿ, ದಾವಣಗೆರೆ ತಾಲೂಕಿನ ಮಾಯಕೊಂಡ
ಉಪ ತಹಶೀಲ್ದಾರ್ ಹಾಲೇಶಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
“ದಾವಣಗೆರೆ ಎಪಿಎಂಸಿ ಒಳಗೆ ಮತ್ತು ಹೊರಗೆ ಖಾಸಗಿ ದಲ್ಲಾಳಿಗಳ ಲಾಬಿಯ ಕಾರಣದಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರಾಜ್ಯದಲ್ಲಿ ಪ್ರತೀ ವರ್ಷ ಮೆಕ್ಕೆಜೋಳ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದರೂ ದರ ಮಾತ್ರ ಏರಿಕೆಯಾಗದೇ ಕುಸಿಯುತ್ತಿದೆ” ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳದ ಕನಿಷ್ಟ ಬೆಂಬಲ ಬೆಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಬೆಂಬಲ ಬೆಲೆ ₹ 2,400 ನಿಗದಿ ಮಾಡಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ₹ 1,300 ರಿಂದ ₹ 1,800ಕ್ಕೆ ಖರೀದಿ ಮಾಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಪ್ರತಿ ಕ್ವಿಂಟಲ್ಗೆ ₹ 1,950, ಕೂಡ್ಲಿಗಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 2,280ಕ್ಕೆ ಖರೀದಿ ಮಾಡುತ್ತಿದ್ದಾರೆ. ಆದರೆ ದಾವಣಗೆರೆಯಲ್ಲಿ ಮಾತ್ರ ಮೋಸ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
“ಕೂಲಿ, ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಖರ್ಚು ಹೆಚ್ಚುತ್ತಿದ್ದರೂ ಬೆಳೆಗಳ ದರ ಪಾತಾಳ ಸೇರಿದೆ. ಹಾಗಾಗಿ ದರ ತಗ್ಗಿಸುವ ಖರೀದಿದಾರರಿಗೆ ಜೈಲು ಶಿಕ್ಷೆ ಜೊತೆ ದಂಡ ವಿಧಿಸಿ ಅವರ ಪರವಾನಿಗೆ ರದ್ದು ಮಾಡುವ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ನಾಳೆಯಿಂದ ಬಸವಾಪಟ್ಟಣ, ಅಣಜಿ, ಜಗಳೂರು ಹಾಗು ದಾವಣಗೆರೆಯಲ್ಲಿ ನ. 5 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದರು.
ʼಜಿಲ್ಲೆಯಲ್ಲಿನ ಕಾರ್ಗಿಲ್, ಎಸ್ಕೆಎಂ, ವಿಎಚ್ಎಲ್ ಸೇರಿದಂತೆ ವಿವಿಧ ಕಂಪನಿಗಳು ಉತ್ತಮ ಬೆಲೆಗೆ ಖರೀದಿ ಮಾಡುವಂತೆ ಸೂಚಿಸಬೇಕುʼ ಎಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಪ್ರಕಾಶ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿಜ್ಞಾನ ಕ್ಷೇತ್ರದಲ್ಲಿ ಏರ್ ಮಾರ್ಷಲ್ ಫಿಲಿಪ್ಸ್ ರಾಜಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಪ್ರತಿಭಟನೆಯಲ್ಲಿ ಹೂವಿನಮಡು ನಾಗರಾಜ್, ಮುಂಡರಗಿ ರಾಮಣ್ಣ, ಗುಡ್ಡಪ್ಪ, ಭರತ್, ಗುಮ್ಮನೂರು ಭೀಮಣ್ಣ, ಬುಳ್ಳಾಪುರ ರಾಜು, ಲೋಕೇಶ್, ಓಬಳೇಶ್, ಸಂತೋಷ್, ಉಮೇಶ್, ಕಬ್ಬೂರು ತಿಪ್ಪಣ್ಣ, ಆನಗೋಡು ರಾಜಣ್ಣ, ದೊರೆ ರಾಮಣ್ಣ, ಮಧು, ನಾಗಪ್ಪ, ಹೊನ್ನಮರಡಿ ಅಶೋಕ್, ಯರಕನಹಳ್ಳಿ ರುದ್ರಣ್ಣ, ಕುರ್ಕಿ ಹನುಮಂತಪ್ಪ, ಹುಚ್ಚವ್ವನಹಳ್ಳಿ ಸೋಮಶೇಖರ್, ಲಿಂಗರಾಜ್ ಸೇರಿದಂತೆ ರೈತರು ಹಾಜರಿದ್ದರು.





