“ಯಥೇಚ್ಚವಾಗಿ ಮೆಕ್ಕೆಜೋಳ ಬೆಳೆಯುವ ತಾಲೂಕಾದ ಜಗಳೂರಿನಲ್ಲಿ ಖಾಸಗಿ ಖರೀದಿದಾರರು ರೈತರು ಒಕ್ಕಲು ಮಾಡಿದ ಮೆಕ್ಕೆಜೋಳಗಳನ್ನು ಮನೆ ಬಾಗಿಲಿಗೆ ಹೋಗಿ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತೂಕ ಮತ್ತು ದರದಲ್ಲಿ ಮೋಸವಾಗಿ ಸಮಂಜಸವಾದ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಮತ್ತು ಕೇಂದ್ರ ಸರ್ಕಾರವು ಶೀಘ್ರವಾಗಿ ಮೆಕ್ಕೆಜೋಳದ ಕಟಾವಿನ ತಕ್ಷಣವೇ ತಾಲೂಕಿನ ಎಪಿಎಂಸಿಯಲ್ಲಿ ಖರೀದಿ ಕೇಂದ್ರವನ್ನು ತೆರೆದರೆ ಇಲ್ಲಿನ ರೈತರಿಗೆ ನ್ಯಾಯಯುತವಾದ ಬೆಂಬಲ ಬೆಲೆ ಸಿಗಲಿದೆ. ಈ ಕೂಡಲೇ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆ ಜಗಳೂರು ಎಪಿಎಂಸಿ ಮಾರ್ಕೆಟ್ ಸಹಾಯಕ ನಿರ್ದೇಶಕರು, ಅಧ್ಯಕ್ಷರಿಗೆ ರಾಜ್ಯ ರೈತ ಸಂಘ (ವಾಸುದೇವ ಮೇಟಿ ಬಣ) ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ “ಜಗಳೂರು ಬರದ ತಾಲೂಕು ಎಂದು ಪ್ರಖ್ಯಾತಿ ಹೊಂದಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ಬರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ತಾಲ್ಲೂಕಿನ ರೈತರು ಇತ್ತೀಚೆಗಷ್ಟೇ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದಾಗಿನಿಂದ ಆರ್ಥಿಕ ಪರಿಸ್ಥಿತಿಯಿಂದ ಸುಧಾರಣೆ ಹೊಂದುತ್ತಿದ್ದಾರೆ. ಸೊಕ್ಕೆ, ಬಿಳಿಚೋಡು, ಕಸಬಾ ಹೋಬಳಿಗಳ ಪೈಕಿ ಸೊಕ್ಕೆ ಮತ್ತು ಬಿಳಿಚೋಡು ಹೋಬಳಿಯಲ್ಲಿ ರೈತರು ಸಂಪೂರ್ಣ ಮೆಕ್ಕೆಜೋಳವನ್ನು ಅವಲಂಬಿಸಿದ್ದಾರೆ” ಎಂದು ತಿಳಿಸಿದರು.
“ರೈತರು ಮಾಹಿತಿಯೊಂದಿಗೆ ಮೆಕ್ಕೆಜೋಳ ಬೆಳೆಯುವುದರಲ್ಲಿ ನಿರತರಾಗಿದ್ದಾರೆ. ಮೆಕ್ಕೆಜೋಳದ ಬೆಳೆಗಾರರು ತಾಲೂಕಿನಲ್ಲಿ ನೇರವಾಗಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಸೂಕ್ತ ತೂಕ, ಮಾರುಕಟ್ಟೆ ದರ ದೊರೆಯದೇ ವಂಚಿತರಾಗಿದ್ದಾರೆ” ಎಂದು ಆರೋಪಿಸಿದರು.
“ಆದ್ದರಿಂದ, ಮೆಕ್ಕೆಜೋಳ ಬೆಳೆಯ ಕಟಾವಿನ ತಕ್ಷಣವೇ ರೈತರಿಗೆ ತಾಲ್ಲೂಕಿನಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಿ ಮತ್ತು ರೈತರಿಗೆ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ಗೆ 2,500 ರೂ.ನಿಂದ ರಿಂದ 3000 ರೂ.ಗಳ ಬೆಂಬಲ ಬೆಲೆಯೊಂದಿಗೆ ರೈತರಿಂದ ಖರೀದಿ ಮಾಡಬೇಕು. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಇದರಿಂದ ಆರ್ಥಿಕ ಸಂಕಷ್ಟಗಳು ಪರಿಣಾಮಕಾರಿಯಾಗಿ ದೂರವಾಗಲಿವೆ. ಈ ಕುರಿತು ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಮಾಹಿತಿ ಮುಟ್ಟುವಂತೆ ಜಾಹೀರಾತುವನ್ನು ಹೊರಡಿಸಿ, ರೈತರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡಬೇಕೆಂದು ಸಂಘಟನೆ ಮನವಿಯನ್ನು ಸಲ್ಲಿಸಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕ್ರಿಶ್ಚಿಯನ್ ಪರಿಶಿಷ್ಟ ಜಾತಿ ಕೈಬಿಡಿ; ಸಮೀಕ್ಷೆಗೆ ಕಾಲಮಿತಿ ಬೇಡ: ಭೋವಿಪೀಠದ ಸಿದ್ದರಾಮೇಶ್ವರ ಶ್ರೀ
ಮನವಿ ಸಲ್ಲಿಸಿದ ರೈತರ ನಿಯೋಗದಲ್ಲಿ ಸೂರಪ್ಪ, ಗುಂಡಪ್ಪ, ಮಧು, ಏಕಾಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.





