ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಕೃಷಿ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ದಾವಣಗೆರೆ ಜಿಲ್ಲಾ ಸಮಿತಿ ಮುಖಂಡರು ಜಯದೇವ ಸರ್ಕಲ್ನಲ್ಲಿ ಒಪ್ಪಂದದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡ ಬಲ್ಲೂರ್ ರವಿಕುಮಾರ್ ಮಾತನಾಡಿ, “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದು ಆಘಾತಕಾರಿ ವಿಚಾರವಾಗಿದೆ. ಈ ಒಪ್ಪಂದ ರೈತವರ್ಗದ ಬೆನ್ನು ಮೂಳೆ ಮುರಿಯುವ ಶಾಸನವಾಗಿದ್ದು ದೇಶವಾಸಿಗಳನ್ನು ಅಪಾಯಕಾರಿ ಆಹಾರ ಸಂಸ್ಕೃತಿಗೆ ಒಗ್ಗಿಸಲು ಹೊರಟಿರುವ ರೈತರ ಪಾಲಿನ ಮರಣ ಶಾಸನವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಮೇರಿಕಾದಿಂದ ಆಮದಾಗುವ ಆಹಾರ ಉತ್ಪನ್ನಗಳು ಹಣ್ಣುಗಳು ಧಾನ್ಯಗಳ ಮೇಲಿನ ತೆರಿಗೆ ಸಂಪೂರ್ಣ ಭಾಗಶಃ ತೆಗೆದು ಹಾಕುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕಾದ ಉತ್ಪನ್ನಗಳು ಪ್ರವೇಶಿಸಿ ಸ್ಥಳೀಯ ರೈತರ ಬೆಲೆಗಳು ಕುಸಿಯುವ ಭಯ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಈ ಒಪ್ಪಂದವನ್ನು ನಾವು ಒಪ್ಪಿದ್ದೇ ಆದಲ್ಲಿ ಭಾರತ ದೇಶದ ಶೇ. 65 ರಷ್ಟಿರುವ ರೈತರು ಬೆಳೆಯುವ ಬೆಳೆಗಳಿಗೆ, ಹಾಲಿನ ಉತ್ಪನ್ನಗಳು, ತರಕಾರಿ ಹಣ್ಣುಗಳಿಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲ.ಇದನ್ನು ವಿರೋಧಿಸಿ ಬೇರು ಮಟ್ಟದಲ್ಲಿಯೇ ಹೊಸಕಿ ಹಾಕಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೋರ್ಟ್ ಗೆ ಬಾಂಬ್ ಬೆದರಿಕೆ ಸಂದೇಶ; ಪೊಲೀಸ್ ತನಿಖೆ ಬಳಿಕ ಕಲಾಪ ಆರಂಭ
ರಾಜ್ಯ ಕಾರ್ಯದರ್ಶಿ ಪೂಜಾರ್ ಅಂಜಿನಪ್ಪ, ಜಯನಾಯ್ಕ್, ಸೋಮಗೊಂಡು ಪ್ರತಾಪ್, ನಾಗರಕಟ್ಟೆ ಜೈನಾಯ್ಕ, ವಿ.ಎಚ್ ಸೋಮಗುಂದ ಇತರರು ಇದ್ದರು.





