ದಾವಣಗೆರೆ ಜಿಲ್ಲೆಯ ತಾಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ತೋಟಗಾರಿಕೆ ಬೆಳೆ, ಫಸಲುಗಳ ಬೆಳವಣಿಗೆಗೆ ಪೂರಕವಾಗಿ ಕೆರೆಗಳಿಂದ ಹೂಳು ಮಣ್ಣನ್ನು ಸಾಗಿಸಲು ಬಿಡದೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ರೈತ ಸಂಘದ ಕಾರ್ಯಕರ್ತರು ದಾವಣಗೆರೆ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಮುಖಂಡರು “ರೈತರು ಬೆಳೆಯುವ ದೀರ್ಘಾವಧಿ ಬೆಳೆಗಳಿಗೆ ಹಾಗೂ ಅಲ್ಪಾವಧಿಯ ಬೆಳೆಗಳಿಗೆ ಈ ಹಿಂದಿನಿಂದಲೂ ಕೆರೆಗಳಿಂದ ಹೂಳಿನ ರೂಪದಲ್ಲಿದ್ದ ಪೋಷಕಾಂಶವುಳ್ಳ ಮಣ್ಣುಸಾಗಿಸುತ್ತಿದ್ದರು. ಇದರಿಂದಾಗಿ ಕೆರೆಯ ಹೂಳನ್ನು ಕೂಡ ಅಗೆದು ಅಂತರ್ಜಲ ಮತ್ತು ನೀರಿನ ಸಾಮರ್ಥ್ಯವನ್ನು ಹೆಚ್ಚುಮಾಡಲು ಸಾಧ್ಯವಾಗುತ್ತಿತ್ತು. ಇದು ರೈತರಿಗೆ ಬೇಸಿಗೆಯಲ್ಲಿ ಬೋರ್ವೆಲ್ ಮತ್ತು ಇತರ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲತೆ ಸೃಷ್ಟಿಸುತ್ತಿತ್ತು. ಅಲ್ಲದೆ ಅಂತರ್ಜಲ ಹೆಚ್ಚಿಸಲು ಸಹಾಯಕವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ರೈತರಿಗೆ ಕೃಷಿ ಹೊಂಡ, ಹೊಲಗಳ ಸಮತಟ್ಟು ಹಾಗೂ ಕೆರೆಯ ಮಣ್ಣನ್ನು ತುಂಬಿ ತೋಟಗಳಿಗೆ ಸಾಗಿಸಲು ಅಡ್ಡಿಪಡಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಮುಂದಿನ ದಿನಗಳಲ್ಲಿ ರೈತರ ಕೃಷಿ ಭೂಮಿಗೆ ಬೇಕಾಗುವ ವಸ್ತುಗಳಿಗೆ ಅಡ್ಡಿಪಡಿಸದೇ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಮದ್ಯ ಜೂಜು ಮಟ್ಕಾ ನಿಯಂತ್ರಣಕ್ಕೆ ಎಸ್ಸಿಎಸ್ಟಿಕುಂದುಕೊರತೆ ಸಭೆಯಲ್ಲಿ ಆಗ್ರಹ
ಪ್ರತಿಕ್ರಿಯೆ ನೀಡಿರುವ ಉಪವಿಭಾಗಾಧಿಕಾರಿಗಳು “ಕೃಷಿ ಹೊಂಡ, ಕೆರೆ ಮಣ್ಣು ಸಾಗಾಟಕ್ಕೆ ಟ್ರಾಕ್ಟರ್ ಗಳಿಗೆ ಅನುಮತಿ ನೀಡಲಾಗುವುದು. ಕೃಷಿ ಇಲಾಖೆ ಮಾನದಂಡಗಳ ಪ್ರಕಾರ ಸಾಗಿಸಲು ಅನುಮತಿಸಲಾಗುವುದು” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ, ಎಲೋಧಹಳ್ಳಿ ರವಿಕುಮಾರ್, ಹುಚ್ಚವ್ವನಹಳ್ಳಿ ಪ್ರಕಾಶ್, ಹೂವಿನಮಡು ನಾಗರಾಜ್ ಕಲ್ಲೇಶ್, ಬೋರಗೊಂಡನಳ್ಳಿ ಕಲ್ಲೇಶ್, ಚಿನ್ನ ಸಮುದ್ರ ಸುರೇಶ್, ಕುರ್ಕಿ ಹನುಮಂತ, ಗಂಗನಕಟ್ಟೆ ಷಣ್ಮುಖ, ರಾಕೇಶ್ ಮರುಳಸಿದ್ದಪ್ಪ, ಈಚಘಟ್ಟ ನಾಗೇಶ್, ಮಂಜುನಾಥ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.





