“56 ಸಾವಿರ ಹುದ್ದೆಗಳ ಭರ್ತಿಗೆ ಒಳಮೀಸಲಾತಿ ಇಲ್ಲದೆ ನೇಮಕಾತಿ ನಡೆದರೆ ಬಹುಪಾಲು ಹುದ್ದೆಗಳನ್ನು ಕಬಳಿಕೆ ಮಾಡಬಹುದು ಎನ್ನುವ ಆಸೆ ಕೆಲವರಲ್ಲಿದೆ. ಈ ರೀತಿ ಮಾತನಾಡುವವರು ತಲೆ ಇಲ್ಲದವರು ಹಾಗೂ ಈವರೆಗೆ ಮೀಸಲಾತಿಯ ಬಹುದೊಡ್ಡ ಲಾಭ ಕಬಳಿಸಿದವರು. ಈಗಾಗಲೇ ಕಾನೂನಾತ್ಮಕವಾಗಿ ಪಡೆದಿರುವ ಪರಿಶಿಷ್ಟ ಜಾತಿ 17%, ಪಂಗಡದ 7% ಒಳಮೀಸಲಾತಿ ಪ್ರಕಾರವೇ ನೇಮಕಾತಿ ನಡೆಯಬೇಕು. ಎಸ್ಸಿಎಸ್ಟಿ ಸಮುದಾಯದ ಎಲ್ಲರೂ ಒಂದಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು” ಎಂದು ದಾವಣಗೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್ ಆಂಜನೇಯ ಆಕ್ರೋಶ ಹೊರಹಾಕಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಸಾಮಾಜಿಕವಾಗಿ ಮತ್ತು ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಬೀದಿಗಿಳಿದು ನಲವತ್ತು ವರ್ಷಗಳ ಹೋರಾಟ ಮಾಡಿ ಒಳಮೀಸಲಾತಿಯ ಹಕ್ಕು ಪಡೆಯಲಾಗಿದೆ. ಸರ್ಕಾರದ ಎರಡೂ ಸದನಗಳಲ್ಲಿ ಅವಿರೋಧವಾಗಿ ಮಂಡನೆಯಾಗಿದೆ, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈಗ ಶಾಸನವಾಗಿದೆ. ಕಾನೂನಾತ್ಮಕ ಬೆಲೆ ಬಂದಿದೆ. ಮೀಸಲಾತಿಯನ್ನು 6-6-5ರಡಿ ಶಾಸನಬದ್ಧ ಹಂಚಿಕೆ ಮಾಡಲಾಗಿದೆ. ಆದರೂ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಆಗಿದೆ. ಅವರಿಗೆ ಪ್ರತ್ಯೇಕ ಶೇ. 1 ಕೊಡಬೇಕು. ಇದನ್ನು ಸದಾಶಿವ ಆಯೋಗ, ನಾಗಮೋಹನ್ ದಾಸ್ ವರದಿ ತಿಳಿಸಿದೆ. ಆದರೆ ರಾಜಕೀಯವಾಗಿ ತೀರ್ಮಾನ ಮಾಡಿಕೊಂಡರು. ಆದರೂ ನಮ್ಮ ಆಗ್ರಹ ಅಲೆಮಾರಿಗಳಿಗೆ ಶೇಕಡಾ ಒಂದರಷ್ಟು ಒಳಮೀಸಲಾತಿ ನೀಡಬೇಕು” ಎಂದು ಒತ್ತಾಯಿಸಿದರು.
“ಗೊಂದಲ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ನಿಯೋಗ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಶೆಡ್ಯೂಲ್ 9ರಲ್ಲಿ ಸೇರಿಸಿ ಒಳಮೀಸಲಾತಿ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ನೇಮಕಾತಿಯ ವಿಳಂಬದಿಂದ ಬೇರೆ ಸಮುದಾಯದ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದ್ದು, ಅದನ್ನು ತುಂಬಲು ನಮ್ಮತಕರಾರಿಲ್ಲ. ಆದರೆ ಶೇಕಡ 24 ರಷ್ಟು ನಮ್ಮ ಪಾಲಿನ ಹುದ್ದೆಗಳನ್ನು ತುಂಬಬೇಕು. ನ್ಯಾಯಾಲಯದ ಆದೇಶದ ಷರತ್ತಿಗೆ ಒಳಪಟ್ಟು ಶೇ 24 ನೇಮಕಾತಿ ನಡೆಸಬೇಕು. ಈಗಲೇ ನ್ಯಾಯಾಲಯದ ಗುಮ್ಮ ತೋರಿಸಿ ಹೆದರಿಸಬಾರದು. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಹೆಸರಾದ ಸಿದ್ದರಾಮಯ್ಯ ಸರ್ಕಾರ ಈ ನಿಟ್ಟಿನಲ್ಲಿ ದಲಿತರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಮಾಯಕೊಂಡ ಕ್ಷೇತ್ರದ ಶಾಸಕ ಕೆ ಎಸ್ ಬಸವಂತಪ್ಪ ಸೇರಿದಂತೆ ಇತರರು ಹಾಜರಿದ್ದರು.





