ನರೇಗಾ ಕಾರ್ಮಿಕರ ಆರೋಗ್ಯದ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗಾಗಿ
ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿವಿಧ ತಾಲೂಕುಗಳಲ್ಲಿನ ಕಾಮಗಾರಿಯ ಸ್ಥಳಗಳಲ್ಲಿಯೇ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನವಂಬರ್ 15 ರಂದು ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ “ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿದು ಜೀವನ ಸಾಗಿಸುತ್ತಿರುವ ಕೂಲಿಕಾರರ ಆರೋಗ್ಯ ನಮ್ಮ ಪ್ರಮುಖ ಆದ್ಯತೆ. ಶ್ರಮದ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಈ ಶ್ರಮಜೀವಿಗಳ ದೈಹಿಕ ಕ್ಷೇಮತೆ ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ನರೇಗಾ ಕಾರ್ಮಿಕರ ಆರೋಗ್ಯದ ಮೇಲಿನ ಕಾಳಜಿಯ ಪ್ರತೀಕವಾಗಿದೆ. ಈ ಶಿಬಿರಗಳ ಮೂಲಕ ಪ್ರತಿ ಕೆಲಸಗಾರರು ತಮ್ಮ ಆರೋಗ್ಯದ ಬಗ್ಗೆ ಅರಿವು ಪಡೆಯಬೇಕು, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು. ಎಲ್ಲ ಇಲಾಖಾ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಪಂಚಾಯತ್ ನೌಕರರು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಬೇಕು” ಎಂದು ತಿಳಿಸಿದ್ದಾರೆ.

ಶಿಬಿರಗಳು ಚನ್ನಗಿರಿ ತಾಲ್ಲೂಕು – ದಾಗಿನಕಟ್ಟೆ ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು – ಕಾಡಜ್ಜಿ ಗ್ರಾಮ ಪಂಚಾಯಿತಿ, ಹರಿಹರ ತಾಲ್ಲೂಕು – ಕಡರನಾಯಕನಹಳ್ಳಿ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು – ತಿಮ್ಲಾಪುರ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು – ತೋರಣಗಟ್ಟೆ ಗ್ರಾಮ ಪಂಚಾಯಿತಿ, ನ್ಯಾಮತಿ ತಾಲ್ಲೂಕು – ಕುಂಕುವಾ ಗ್ರಾಮ ಪಂಚಾಯಿತಿಯಲ್ಲಿ ನಡೆಯಲಿವೆ.
ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು
ರಕ್ತದ ಒತ್ತಡ, ರಕ್ತದಲ್ಲಿನ ಸಕ್ಕರೆ, ಕ್ಷಯರೋಗ, ಪರೀಕ್ಷೆ, ಕುಷ್ಟರೋಗ ಪರೀಕ್ಷೆ, ಜ್ವರದ ಪ್ರಕರಣಗಳಲ್ಲಿ ರಕ್ತದ ಮಾದರಿ ಸಂಗ್ರಹ ಹಾಗೂ ಅಗತ್ಯವಿದ್ದರೆ ಇತರೆ ತಪಾಸಣೆಗಳನ್ನೂ ನಡೆಸಲಾಗುತ್ತದೆ. ಈ ಶಿಬಿರಗಳ ಮೂಲಕ ನರೇಗಾ ಕಾರ್ಮಿಕರ ಆರೋಗ್ಯದ ಮೇಲಿನ ಕಾಳಜಿಯನ್ನು ಬಲಪಡಿಸುವ ಜೊತೆಗೆ, ಸಮಯೋಚಿತ ವೈದ್ಯಕೀಯ ನೆರವು ಮತ್ತು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಗಿದೆ.





