ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ವ್ಯಾಪ್ತಿಯ ರವೀಂದ್ರನಾಥ್ ನಗರದ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ ಎನ್ನಲಾದ 38 ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನಗರಪಾಲಿಕೆ, ಜಿಲ್ಲಾಡಳಿತ, ಸ್ಥಳೀಯ ಆಡಳಿತದ ಪರವಾಗಿ ತಹಶೀಲ್ದಾರರು ನೂರಾರು ಪೊಲೀಸರು ಮತ್ತು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಟುಂಬಗಳಿಗೆ ಸೂಕ್ತ ವಸತಿ, ಸೌಕರ್ಯ ವ್ಯವಸ್ಥೆ ಕಲ್ಪಿಸದೇ ಅಕ್ಷರಶಃ ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಜೆಸಿಬಿಗಳು, ಟ್ರಾಕ್ಟರ್, ನೂರಾರು ಪೊಲೀಸರೊಂದಿಗೆ ಬೆಳ್ಳಂಬೆಳಗ್ಗೆ ಆರು ಗಂಟೆಗೆ ಆಗಮಿಸಿದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನು ಸರಂಜಾಮುಗಳನ್ನು ಹೊರಗೆ ಹಾಕಿ, ಹೆಂಚು ಚಾವಣಿ ಶೀಟುಗಳನ್ನು ಗೋಡೆಗಳನ್ನು ಕೆಡವಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಸ್ಥಳೀಯವಾಗಿ ತೆರವುಗೊಂಡ ನಿವಾಸಿಗಳು ಮಾತನಾಡಿ “ಕೋರ್ಟ್ ಅಕ್ಟೋಬರ್ 15ರ ಒಳಗೆ ಬೇರೆ ಸೂಕ್ತ ವಸತಿ ಸೌಕರ್ಯ ಕಲ್ಪಿಸಿ ತೆರವು ಗೊಳಿಸಲು ಸಮಯ ನೀಡಿದ್ದರೂ, ಅಲ್ಲಿಯವರೆಗೂ ಸಮಯ ನೀಡದೇ ಇಂದು ಬೆಳಗ್ಗೆ 6ಕ್ಕೆ ಬಂದು ಮನೆಯಲ್ಲಿದ್ದ ಮಕ್ಕಳು, ಮಹಿಳೆಯರು, ವಯೋವೃದ್ಧರನ್ನು ಹೊರಗೆ ಹಾಕಿ ದೌರ್ಜನ್ಯವೆಸಗಿದ್ದಾರೆ. ಸಮಯಾವಕಾಶಕ್ಕಾಗಿ ಬೇಡಿಕೊಂಡರೂ, ಮಹಿಳೆ, ವೃದ್ದರೆನ್ನದೇ ಎಳೆದಾಡಿ ತಳ್ಳಾಡಿ ಎಳೆದು ಹಾಕಲಾಗಿದೆ” ಎಂದು ಅಳಲು ತೋಡಿಕೊಂಡರು.

“ಮನೆಯ ಚಾವಣಿ ಶೀಟುಗಳನ್ನು, ಹೆಂಚು, ಇತರೆ ಮರಮುಟ್ಟು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಬಿಟ್ಟಿಲ್ಲ. ಸಂಪೂರ್ಣವಾಗಿ ಎಲ್ಲವನ್ನೂ ನಾಶಗೊಳಿಸಿ ಅಕ್ಷರಶಃ ಬೀದಿಗೆ ತಳ್ಳಿದ್ದಾರೆ. ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಮಯ ಕೇಳಿದ್ದು, ಅವರು ತೆರವು ಗೊಳಿಸಲು ಸಮಯ ನೀಡುತ್ತೇವೆ ಎಂದು ಹೇಳಿದ್ದು, ಅದನ್ನು ಪಾಲಿಸದೇ ಅಮಾನವೀಯವಾಗಿ ತೆರವು ಗೊಳಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಹೋರಾಟಗಾರರಾದ ಸಿಪಿಐನ ಮುಖಂಡ ಚಂದ್ರು ಆವರಗೆರೆ, ನೆರಳು ಸಂಘಟನೆಯ ಜಬೀನಾ ಖಾನಂ, ವಕೀಲ ರಾಘವೇಂದ್ರ, ಮಾಜಿ ಕಾರ್ಪೊರೇಟರ್ ಪಾಮೇನಳ್ಳಿ ನಾಗರಾಜ್ ಸೇರಿದಂತೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೇರೆ ಕಡೆ ಜಾಗ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಆಗ ಜಾಗದಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು. ಖಾಲಿ ಜಾಗವಿದೆ. ಅಲ್ಲಿ ಮನೆ ಕಟ್ಟಲು ಯಾರು ನೆರವು ಒದಗಿಸಿಲ್ಲ. ಹೀಗೆ ಒಂದೇ ಕ್ಷಣದಲ್ಲಿ ಬೀದಿಗೆ ತಳ್ಳಿದರೆ, ಅಲ್ಲಿ ಏಕಾಏಕಿ ಮನೆ, ಸೂರು ಕಟ್ಟಿಕೊಳ್ಳಲು ಸಾಧ್ಯವೇ” ಎಂದು ಸ್ಥಳೀಯರು ಪ್ರಶ್ನಿಸಿದರು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾರೊಬ್ಬರೂ ನೊಂದವರ ಪರವಾಗಿ ಬಂದಿಲ್ಲ. ಚುನಾವಣೆ ಬಂದಾಗ ಮಾತ್ರ ನಾವು ಇವರಿಗೆ ನೆನಪಾಗುತ್ತೇವೆ. ನಗರಸಭೆ, ತಾಲೂಕು ಕಛೇರಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಕೂಲಿ ಕಾರ್ಮಿಕರು, ಬಡ, ಸಾಮಾನ್ಯ ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹಿಡಿಶಾಪ ಹಾಕುತ್ತಾ ಇದ್ದುದು ಕಂಡು ಬಂದಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬ್ಯಾಂಕ್ ಖಾತೆಯಿಂದ ಹಣ ವಂಚನೆ: ಸೈಬರ್ ಪೊಲೀಸರಿಂದ ಅಂತಾರಾಜ್ಯ ಆರೋಪಿ ಬಂಧನ
ಜಯ್ಯಣ್ಣ, ಜಯಮ್ಮ, ನೇತ್ರಾವತಿ, ಹೊನ್ನಮ್ಮ, ರುದ್ರಪ್ಪ, ಜ್ಯೋತಿ, ಪಾಪಮ್ಮ, ಶಕುಂತಲಾ, ಅನಿತಾ, ರಾಜಪ್ಪ, ಮುರಿಗೆಮ್ಮ, ಬಸಮ್ಮ, ಸಾಕಮ್ಮ, ಗಿರಿಜಮ್ಮ, ರಂಜಿತಾ, ಲಕ್ಷ್ಮಿ, ಗಂಗಮ್ಮ, ಲಲಿತಮ್ಮ, ಬಸವರಾಜ, ವೀಣಾ, ನೀಲಮ್ಮ,, ಪ್ರೇಮ, ಚೈತನ್ಯ, ಹುಲಗಮ್ಮ, ಲಕ್ಷ್ಮಿ, ಗಿರೀಶ, ಖಾಸಿಂಸಾಬ್, ಮಂಜಮ್ಮ ಸೇರಿದಂತೆ ಇತರ ಮನೆ ಕಳೆದುಕೊಂಡ ಸದಸ್ಯರು ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





