ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಕಾಂಕ್ರೀಟ್ ಚರಂಡಿ ಕಾಮಗಾರಿಯು ಅವೈಜ್ಞಾನಿಕ ಹಾಗೂ ಒತ್ತುವರಿದಾರರಿಗೆ ಅನುಕೂಲವಾಗಲಿದೆ ಎನ್ನುವ ಆರೋಪ ಹೊತ್ತ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲೆ ಹರಿಹರ ರಾಜಕಾಲುವೆ ರಕ್ಷಣಾ ಸಮಿತಿಯಿಂದ ಹರಿಹರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹಾಂತೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, “ಜನ ಸಾಮಾನ್ಯರು ಗಮನಿಸಿದರೂ ಕೂಡ ಈ ಕಾಮಗಾರಿ ವೈಜ್ಞಾನಿಕವಾಗಿಲ್ಲ, ಭೂಗಳ್ಳರು ಬೆಲೆ ಬಾಳುವ ಕಾಲುವೆಯ ಹಲವು ಕೋಟಿ ರೂ. ಮೌಲ್ಯದ ಹಲವು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಿಕೊಡುವಂತಿದೆ ಎಂಬ ಅಭಿಪ್ರಾಯಕ್ಕೆ ಸಹಜವಾಗಿ ಬರುತ್ತಾರೆ” ಎಂದು ಆರೋಪಿಸಿದರು.
“120ಅಡಿ ವಿಸ್ತಾರವಾಗಿರುವ ಕಾಲುವೆಯಲ್ಲಿ 15 ರಿಂದ 18 ಅಡಿ ಅಗಲದವರೆಗೆ ಮಾತ್ರ ಚರಂಡಿ ಹಾಗೂ ತಡೆಗೋಡೆ ನಿರ್ಮಿಸುವ ಬದಲು ಕಾಲುವೆಯ ಇಡೀ ಭಾಗದಲ್ಲಿ ಕಾಂಕ್ರೀಟ್ ಚರಂಡಿ ಹಾಗೂ ತಡೆಗೋಡೆ ನಿರ್ಮಿಸಬೇಕಿತ್ತು. ಹಲವು ಶತಮಾನಗಳಿಂದ ಮಳೆ ನೀರನ್ನು ನದಿಗೆ ಸೇರಿಸುವ ನಗರದ ಪೂರ್ವ ಭಾಗದಿಂದ ನೂರಾರು ಎಕರೆ ಜಮೀನುಗಳ ಬಸಿ ನೀರು, ಮಳೆ ನೀರು, ದೇವರಬೆಳೆಕೆರೆ ಕಾಲುವೆಯ ಹೆಚ್ಚುವರಿ ನೀರು ಈ ರಾಜಕಾಲುವೆಗೆ ಸೇರಿ ಮುಂದೆ ನದಿಗೆ ಸೇರುತ್ತದೆ.
ಹಳೆ ಪಿ.ಬಿ. ರಸ್ತೆ ಪಕ್ಕದಿಂದ ಹರಿದು ಬರುವ ಈ ಹಳ್ಳವನ್ನು ಮುಚ್ಚಿದ ಪರಿಣಾಮ ಈಗಾಗಲೆ ಹಲವು ಎಕರೆ ಜಮೀನು ಭೂಗಳ್ಳರ ಪಾಲಾಗಿದೆ, ಇದರ ಪರಿಣಾಮವಾಗಿಯೇ ಕೆಲವು ವರ್ಷಗಳಿಂದ ನಗರದ ಕಾಳಿದಾಸ ನಗರ, ನೀಲಕಂಠನಗರ, ಬೆಂಕಿನಗರ ಹಾಗೂ ಇತರೆ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಪ್ರವಾಹದ ಸ್ಥಿತಿಯನ್ನು ನಿರ್ಮಿಸುತ್ತಿದೆ” ಎಂದು ವಿವರಿಸಿದರು.
“ಒತ್ತುವರಿದಾರರಿಗೆ ಸಹಾಯವಾಗುವ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಈ ಅನುದಾನವನ್ನು ಜೆ.ಸಿ. ಬಡಾವಣೆಯ 4ನೇ ಕ್ರಾಸ್ ಪ್ರದೇಶದ ಇದೇ ಕಾಲುವೆ ಭಾಗದಲ್ಲಿ ಎತ್ತರದ ಸೇತುವೆ, ಉತ್ತಮ ರಸ್ತೆ ನಿರ್ಮಿಸಬೇಕು. ಜೆ.ಸಿ.ಬಡಾವಣೆಯ 10 ಅಥವಾ 11ನೇ ಕ್ರಾಸಿನ ಮೂಲಕ ಈ ಕಾಲುವೆಗೆ ಸುಸಜ್ಜಿತ ಸೇತುವೆ ಹಾಗೂ ಮುಂದೆ ಕಾಲುವೆ ಮೇಲೆ ಹಳೆ ಪಿ.ಬಿ.ರಸ್ತೆಗೆ (ಭಾಗೀರಥಿ ಕಲ್ಯಾಣ ಮಂಟಪದ ಎದುರಿಗೆ) ಜೋಡಿಸುವಂತೆ ರಸ್ತೆ ನಿರ್ಮಿಸಿದರೆ ಮಿನಿ ರಿಂಗ್ ರೋಡ್ ಆಗಲಿದೆ. ಮೇಲ್ಭಾಗದಲ್ಲಿ ಈ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ ಪ್ರತಿ ಮಳೆಗಾಲದಲ್ಲಿ ಪ್ರವಾಹ ಎದುರಿಸುತ್ತಿರುವ ಕಾಳಿದಾಸ ನಗರ, ನೀಲಕಂಠನಗರ, ಬೆಂಕಿನಗರದ ಜನತೆಗೆ ಮುಕ್ತಿ ದೊರಕಿಸಬೇಕು” ಎಂದು ಒತ್ತಾಯಿಸಿದರು.
“ನಗರದ ಜನತೆಯ ಈ ಆಶೋತ್ತರಕ್ಕೆ ವಿರುದ್ಧವಾಗಿ ಕಾಮಗಾರಿ ಮುಂದುವರೆಸಿದಲ್ಲಿ ವಿವಿಧ ಸಂಘಟನೆ, ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು
ಹರಿಹರ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ನಗರಸಭೆ ಪೌರಾಯುಕ್ತೆ ಈರಮ್ಮ ಅವರಿಗೂ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಪಿ.ಜೆ.ಮಹಾಂತೇಶ್, ಎಂ.ಎಸ್.ಬಾಬುಲಾಲ್, ಬಿ.ಮಗ್ದುಮ್, ಜಫ್ರುಲ್ಲಾ, ಕಡ್ಲೆಗೊಂದಿ ತಿಮ್ಮಣ್ಣ, ಇಮ್ತಿಯಾಜ್ ಜಲಾಲ್, ಮೊಹಮ್ಮದ್ ಗೌಸ್ ಸೇರಿದಂತೆ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.





