ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಬಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ಅರವತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ.

ಇಂದು ಪವಿತ್ರ ರಂಜಾನ್ ಮಾಸದ (ಈದ್ ಉಲ್ ಫಿತುರ್) ವೇಳೆ ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವ ವೇಳೆ ಹೆಜ್ಜೇನು ದಾಳಿ ಮಾಡಿವೆ. ಹೆಜ್ಜೇನು ದಾಳಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದರಿಂದ ಗಾಬರಿಗೊಂಡ ಜನ ತಪ್ಪಿಸಿಕೊಳ್ಳಲು ಓಡಿದ್ದಾರೆ. ಆದರೂ ಸುಮಾರು ಅರವತ್ತಕ್ಕೂ ಹೆಚ್ಚು ಜನರಿಗೆ ಹೆಜ್ಜೇನು ಕಚ್ಚಿದ್ದು, ತೀವ್ರ ನೋವು ತಾಳಲಾರದ ದಾವಣಗೆರೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹಲವರನ್ನು ದಾಖಲಿಸಲಾಗಿದೆ.

ಶಫೀವುಲ್ಲಾ( 50), ಸನಾವುಲ್ಲಾ ಸಾಬ್(65), ಸಿರಾಜ್ (46), ಆಸೀಪ್ ಅಲಿ (28), ಗಂಗಜ್ಜಿ(65), ಇಸಾದ್ (42), ಹನೀಫ್ ಅಲಿ( 30), ಯೂಸೀಪ್ ಅಲಿ (30) ಸೇರಿದಂತೆ 60ಕ್ಕೂ ಹೆಚ್ಚಿನ ಜನ ಪ್ರಾರ್ಥನೆಗೆ ಕುಳಿತಿದ್ದ ಮುಸ್ಲಿಂ ಬಾಂಧವರು, ಪಾದಚಾರಿಗಳು, ಈದ್ಗಾ ಮೈದಾನದಲ್ಲಿ ಬಂದೋಬಸ್ತ್ ಗೆ ನಿಯೋಜಿಸಿದ್ದ ಎಎಸ್ಐ ನಾರಪ್ಪ ಮೂವರು ಸಿಬ್ಬಂದಿಗೂ ಹಾಗೂ ಸಾರ್ವಜನಿಕರು ಹೆಜ್ಜೇನು ದಾಳಿಗೆ ತುತ್ತಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ
ಇಬ್ವರು ಮಕ್ಕಳು ಸೇರಿದಂತೆ ಹಲವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ ಡಿಎಚ್ ಒ, ಟಿಎಚ್ ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆಸ್ಪತ್ರೆಗೆ ಸ್ಥಳೀಯ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಭೇಟಿ ಮಾಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.





