“2026ರ ಮಾರ್ಚ್ 2 ರಂದು ಸರ್ಕಾರಿ ಶಾಲೆಗಳಲ್ಲಿ ಅತ್ಯಲ್ಪ ಸಹಾಯಧನಕ್ಕೆ ದುಡಿಯುತ್ತಿರುವ ಬಿಸಿಊಟ ತಯಾರಿಕರಿಗೆ ವೇತನ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ” ಎಂದು ಎಐಟಿಯುಸಿ ಸಂಯೋಜಿತ ಬಿಸಿಊಟ ತಯಾರಕರ ಫೆಡರೇಶನ್ ನ ರಾಜ್ಯ ಅಧ್ಯಕ್ಷ ಆವರಗೆರೆ ಚಂದ್ರು ದಾವಣಗೆರೆಯಲ್ಲಿ ತಿಳಿಸಿದ್ದಾರೆ.

ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಈ ಬೆಂಗಳೂರು ಚಲೋ ಧರಣಿ ಹಮ್ಮಿಕೊಳ್ಳಲಾಗಿದೆ. ಬಿಸಿ ಊಟ ತಯಾರಕರನ್ನು ಸ್ಕೀಂ ವರ್ಕರ್ಸ್ ಎನ್ನುವುದನ್ನು ಬದಲಾಯಿಸಿ ಅವರನ್ನು ಕಾರ್ಮಿಕರೆಂದು ಘೋಷಿಸಿ ಅವರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ನಿವೃತ್ತ ಬಿಸಿಊಟ ತಯಾರಕರಿಗೆ 2 ಲಕ್ಷ ರೂಪಾಯಿ ಇಡುಗಂಟು ಹಣ ಜಾರಿಗೊಳಿಸಬೇಕು, ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ 1 ರೂಪಾಯಿಗೆ ಏರಿಸಬೇಕು, ಬಿಸಿಊಟ ತಯಾರಕರಿಗೆ ಅಪಘಾತ ಪರಿಹಾರವಾಗಿ 10 ಲಕ್ಷ ರೂಪಾಯಿ ಜಾರಿಗೊಳಿಸಬೇಕು, ಕೆಪಿಎಸ್ ಶಾಲೆ ತೆರೆಯುವುದನ್ನು ಕೈ ಬಿಡಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು 2026-27 ನೇ ಸಾಲಿನ ಬಜೆಟ್ಟಿನಲ್ಲಿ ಈಡೇರಿಸಬೇಕೆಂದು ರಾಜ್ಯ
ಸರ್ಕಾರಕ್ಕೆ ಒತ್ತಾಯಿಸಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೊಸ ಕಾನೂನು ರದ್ದು ಹಾಗೂ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಎಐಟಿಯುಸಿ ಪ್ರತಿಭಟನೆ
“ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಂದ ಫೆಡರೇಷನ್ನಿನ ಬಿಸಿಊಟ ತಯಾರಕರು ಇದೇ ಭಾನುವಾರ ಮಧ್ಯಾಹ್ನ ಅಥವಾ ಸಂಜೆ ಹೊರಟು ತಮಗೆ ಹತ್ತಿರ ಇರುವ ಬಸ್ ಸ್ಟ್ಯಾಂಡ್ ಗಳಿಂದ ಬಸ್ ಮೂಲಕ ಬೆಂಗಳೂರಿಗೆ ಆಗಮಿಸಿ ನೇರವಾಗಿ ಧರಣಿ ನಡೆಯುವ ಸ್ಥಳ ಫ್ರೀಡಂ ಪಾರ್ಕ್ ಗೆ ಆಗಮಿಸಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಜಿ ಅಕ್ಕಮ್ಮ, ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಪುಷ್ಪಾ, ರಾಜ್ಯ ಖಜಾಂಚಿ ಬೆಳಲಗೆರೆ ರುದ್ರಮ್ಮ ಹಾಗೂ ಇತರ ರಾಜ್ಯ ಪದಾಧಿಕಾರಿಗಳು ಕರೆ ನೀಡಿದ್ದಾರೆ” ಎಂದು ಹೇಳಿದರು.





