ಪಕ್ಷದ ಕಾರ್ಯಕರ್ತರು ಮೊದಲು ಸೈದ್ಧಾಂತಿಕವಾಗಿ, ಬದ್ದತೆಯಿಂದ ಶೋಷಿತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು, ಶೋಷಿತರ ಸೇವೆ ಮಾಡಲು ತಯಾರಾಗಬೇಕು” ಎಂದು ದಾವಣಗೆರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.
ದಾವಣಗೆರೆ ಪಂಪಾಪತಿ ಭವನದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಖಮ್ಮಂ ನಲ್ಲಿ ನಡೆಯುತ್ತಿರುವ ಪಕ್ಷದ ನೂರು ವರ್ಷದ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶಾದ್ಯಂತ ಇರುವ ನಮ್ಮ ಕಾರ್ಯಕರ್ತರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಸಿಪಿಐ ಗೆ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ನಾವು ನೀವು ಪಕ್ಷದಲ್ಲಿರುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದರು.
ಸಿಪಿಐ ತಾಲೂಕು ಸಮ್ಮೇಳನದಲ್ಲಿ ಸುರೇಶ್ ಶೇಖರಪ್ಪ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ನ ಖಜಾಂಚಿ ಜಿ ಎಲ್ಲಪ್ಪ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಸಿ ಪಿ ಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್ ಆವರಗೆರೆ, ಸಿಪಿಐ ಜಿಲ್ಲಾ ಸದಸ್ಯರುಗಳಾದ ಕೆ ಜಿ ಶಿವಮೂರ್ತಿ, ಲಕ್ಷ್ಮಣ್, ಬಿ ಚಿನ್ನಪ್ಪ, ಪಿ ಷಣ್ಮುಖ ಸ್ವಾಮಿ, ಬೆಳಲಗೆರೆ ರುದ್ರಮ್ಮ, ಸಮ್ಮೇಳನಕ್ಕೆ ಶುಭ ಕೋರಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಪೊಲೀಸ್ ಠಾಣಾ ಭೇಟಿ
ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸಿಪಿಐ ತಾಲೂಕು ಮಂಡಳಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಕೆರನಳ್ಳಿ ರಾಜು, ಸಹ ಕಾರ್ಯದರ್ಶಿಗಳಾಗಿ ಜಯಣ್ಣ ತೋಳಹುಣಸೆ ಮತ್ತು ಎ ದಾದಾಪೀರ್, ಖಜಾಂಚಿಯಾಗಿ ಐರಣಿ ಚಂದ್ರು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು ಸೇರಿದಂತೆ ಒಟ್ಟು 15 ಜನರ ಸಮಿತಿ ರಚಿಸಲಾಯಿತು.





