ಹೊನ್ನಾಳಿ ತಾಲೂಕಿನ ಕುಂದೂರು, ಹಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಮತ್ತು ಅಕ್ರಮವಾಗಿ ಮಣ್ಣು, ಕಲ್ಲು ಸಾಗಾಟ ಮಾಡುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಸರಟೂರು ಹಾಗೂ ಇತರರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪ್ರತಿಭಟನೆ ನಡೆಸಿದರು.
“ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು, ಹೊಳೆ ಹರಳಹಳ್ಳಿ, ಹೊಸೂರು ಗ್ರಾಮಗಳ ಗುಡ್ಡಗಳಲ್ಲಿ ಮಣ್ಣು ಮತ್ತು ಕಲ್ಲು ಅಕ್ರಮವಾಗಿ ಹಗಲು ರಾತ್ರಿ ಸಾಗಾಟ ನಡೆಯುತ್ತಿದೆ. ಕುಂದೂರು ಗುಡ್ಡದಲ್ಲಿ ಪ್ರಸಿದ್ಧ ಆಂಜನೇಯ ಕ್ಷೇತ್ರವಿದ್ದು, ಇತರ ಗುಡ್ಡಗಳಲ್ಲೂ ಕೂಡ ಯಾವುದೇ ಬೆಳೆಯನ್ನು ಬೆಳೆಯಲು ಸೂಕ್ತ ಭೂಮಿ ಇಲ್ಲದಿದ್ದರೂ ಅಕ್ರಮವಾಗಿ ಅಧಿಕಾರಿಗಳು ಸಾಗುವಳಿ ಪತ್ರ ನೀಡಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ರೈತರು ಗುಡ್ಡಗಳ ಮಣ್ಣು ಮತ್ತು ಕಲ್ಲುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸಿ ಅಕ್ರಮಕ್ಕೆ ಒಪ್ಪಿಗೆ ನೀಡಿದಂತಿದೆ” ಎಂದು ಆರೋಪಿಸಿದ್ದಾರೆ.
“ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತಿಗಳಿಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವೆ ನಂಬರ್ 32, 33, 24, 76 ರಲ್ಲಿ ಲಕ್ಷಾಂತರ ಟನ್ ಮಣ್ಣು ಅಕ್ರಮವಾಗಿ ಸಾಗಾಟ ಮಾಡಲಾಗಿದೆ. ಇದರಿಂದಾಗಿ ಬೆಟ್ಟ ಗುಡ್ಡಗಳ ಪರಿಸರನಾಶ, ಪ್ರಾಣಿ-ಪಕ್ಷಿಗಳು, ಗಿಡಮರಗಳು ದಿನದಿಂದ ದಿನಕ್ಕೆ ನಶಿಸುತ್ತಿವೆ” ಎಂದು ಅಸಮಾಧಾನ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಸ್ಪತ್ರೆ ಸ್ನಾನದ ಕೋಣೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ರಕ್ಷಿಸಿ ಆರೈಕೆ ನೀಡಿದ ಸಿಬ್ಬಂದಿ
“ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು, ಅಕ್ರಮ ಸಾಗಾಟ ನಡೆಸುತ್ತಿರುವ ಮಣ್ಣು ಸಾಗಾಣಿಕೆದಾರರು, ಸಂಬಂಧಪಟ್ಟ ಅಧಿಕಾರಿಗಳು, ರೈತರು ಹಾಗು ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಸುತ್ತಮುತ್ತ ಪರಿಸರ, ಗಿಡಮರಗಳನ್ನು ಜೀವಸಂಕುಲವನ್ನು ಕಾಪಾಡಬೇಕು” ಎಂದು ಒತ್ತಾಯಿಸಿದರು.





