ಕಾರ್ಗಿಲ್ ಕಂಪನಿಯ ಕಾರ್ಮಿಕರ ಅನಿರ್ದಿಷ್ಟ ಅಹೋರಾತ್ರಿ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ, ರೈತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಮುಷ್ಕರದ ಸ್ಥಳಕ್ಕೆ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ ಭೇಟಿ ನೀಡಿ, ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು. ಪ್ರತಿಭಟನೆ ನಡೆಯುತ್ತಿರುವ ದಾವಣಗೆರೆ ಜಿಲ್ಲೆ ಹರಿಹರ ಸಮೀಪದಲ್ಲಿರುವ ಕಾರ್ಗಿಲ್ ಕಂಪನಿಯ ಬಳಿಯ ಮುಷ್ಕರ ಸ್ಥಳದ ಪರಿಶೀಲನೆ ನಡೆಸಿದರು.

“ಕಂಪನಿ ಕಾರ್ಮಿಕರ ಕುಂದು ಕೊರತೆಗಳು ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ದಿನ ನಡೆಯಲಿರುವ ಕಾರ್ಮಿಕ ಸಂಧಾನ ಸಭೆ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.

ದಾವಣಗೆರೆ ಜಿಲ್ಲೆ ಹರಿಹರ ಸಮೀಪದಲ್ಲಿರುವ ಎಐಯುಟಿಯುಸಿ ಸಂಯೋಜಿತ ಕಾರ್ಗಿಲ್ ವರ್ಕರ್ಸ್ ಯೂನಿಯನ್ನಿನ ಕಾರ್ಗಿಲ್ (Cargill) ಕಂಪನಿಯ ಕಾರ್ಮಿಕರು ವಿವಾದದ ಹಂತದಲ್ಲಿರುವಾಗಲೇ ಕಂಪನಿ ಮಾರಾಟ ಮತ್ತು ಹಸ್ತಾಂತರ ವಿರೋಧಿಸುತ್ತಿದ್ದಾರೆ. ಅಲ್ಲದೆ ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರವು ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಧಾನ ಸಭೆ ಕೂಡ ನಡೆಯಲಿದೆ ಎನ್ನುವ ಮಾಹಿತಿ ಇದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆದ್ದಾರಿ ವಿವಾದದಲ್ಲಿ ಸರ್ಕಾರ ಮೌನ: ಬಲಿಯಾಗುತ್ತಿರುವುದು ವಾಹನ ಸವಾರರ ಜೀವನ
ಈ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತರಾದ ಅರವಿಂದ ಎಸ್ ಆರ್ ಹಾಗೂ ಕಾರ್ಮಿಕ ನಿರೀಕ್ಷಕರಾದ ಕವಿತಾ ಉಪಸ್ಥಿತರಿದ್ದರು. ಮುಷ್ಕರದಲ್ಲಿ ಎಐಯುಟಿಯುಸಿ ಮುಖಂಡ ಮಂಜುನಾಥ್ ಕುಕ್ಕುವಾಡ, ಕಾರ್ಮಿಕರಾದ ಮಂಜುನಾಥ್, ಸಂಜಯ್, ಸೇರಿದಂತೆ ಇತರ ಕಾರ್ಮಿಕರು ಪಾಲ್ಗೊಂಡಿದ್ದರು.





