“ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ಮೂಲಕ ತೋರಿಸುತ್ತಿರುವ ಗಾಳಿಗೋಪುರವು ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಡಿದಂತಹ ಅವಮಾನವಾಗಿದೆ. ಆದರೆ ಇಂತಹ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬಾರದು” ಎಂದು ದಾವಣಗೆರೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ- ಎಐಡಿಎಸ್ಓ ಸಮಾವೇಶದಲ್ಲಿ ಪ್ರೊ ಕೆ.ಎಸ್. ಈಶ್ವರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಆಂದೋಲನ ಭಾಗವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯು ಎಐಡಿಎಸ್ಓ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿ, ಸರ್ಕಾರಿ ಶಾಲೆಗಳನ್ನು ಮುಚ್ಚಲು ನಡೆಸಿರುವ ನೆಪ ಎಂದು ವಿರೋಧಿಸಿ ದಾವಣಗೆರೆ ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಾವೇಶ ಆಯೋಜಿಸಲಾಗಿತ್ತು.


ಅತಿಥಿಗಳಾಗಿ ಆಗಮಿಸಿದ್ದ ಮತ್ತೋರ್ವ AIUTUC, ಕಾರ್ಮಿಕ ಮುಖಂಡರಾದ, ಮಂಜುನಾಥ್ ಕೈದಾಳೆ ಮಾತನಾಡಿ “ನಮ್ಮ ಮುಂದೆ ಇರುವ ಈ ಹೋರಾಟವು ಕೇವಲ ವಿದ್ಯಾರ್ಥಿಗಳದ್ದಲ್ಲ. ಈ ಹೋರಾಟವು ನಿಜವಾಗಿಯೂ ಕಾರ್ಮಿಕರ, ರೈತರ ಹಾಗೂ ಶ್ರಮಿಕರ ಹೋರಾಟವಾಗಿದೆ. ಇಂತಹ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಲು ನಾವು AIUTUC ಸಂಘಟನೆಯು ನಿಮ್ಮೊಂದಿಗೆ ಸದಾ ಹೋರಾಟಕ್ಕೆ ಸಿದ್ಧವಾಗಿರುತ್ತದೆ” ಎಂದು ಭರವಸೆ ನೀಡಿದರು.

ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾದ ಅಜಯ್ ಕಾಮತ್ ಮಾತನಾಡಿ “ಸರ್ಕಾರಿ ಶಾಲೆಗಳ ವಿಲೀನ ಮತ್ತು ಮ್ಯಾಗ್ನೆಟ್ ಶಾಲೆಗಳ ಜಾರಿ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದೆ ಏಶಿಯಾ ಅಭಿವೃದ್ಧಿ ಬ್ಯಾಂಕ್ (ADB) ಸಾಲದ ಷರತ್ತುಗಳ ಭಾಗವಾಗಿ ನಡೆಯುತ್ತಿರುವ ಜಾಗತಿಕ ನೀತಿಯಾಗಿದೆ. ಇಂತಹ ಕ್ರಮಗಳಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದುರ್ಬಲಗೊಳ್ಳುತ್ತದೆ, ಕ್ರಾಂತಿಕಾರಿಗಳಾದ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಕನಸು ಕಂಡ ಸಮಾಜವಾದಿ ಭಾರತವೇ ನಿಜವಾದ ಪರಿಹಾರ” ಎಂದು ಅಭಿಪ್ರಾಯಪಟ್ಟರು.

ರವಿಕಿರಣ್ ಮಾತನಾಡಿ, “ಜನವಿರೋಧಿ ಯೋಜನೆಗಳ ವಿರುದ್ಧ ದೇಶದ ಜನರು ಯಶಸ್ವಿ ಹೋರಾಟಗಳನ್ನು ನಡೆಸಿದ ಇತಿಹಾಸವಿದೆ. ಕೋವಿಡ್ ಸಂದರ್ಭದಲ್ಲಿ ಕೃಷಿ ನೀತಿಗಳ ವಿರುದ್ಧ ರೈತರು ನಡೆಸಿದ ಹೋರಾಟ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ 4 ವರ್ಷದ ಪದವಿ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಹೋರಾಟಗಳನ್ನು ಉದಾಹರಣೆ. ಇದೇ ಸ್ಪೂರ್ತಿಯಿಂದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, 50,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ” ಎಂದು ತಿಳಿಸಿದರು.

ಸಮಾವೇಶದಲ್ಲಿ, ಕೆಪಿಎಸ್ ಮ್ಯಾಗ್ನೆಟ್ ವಿರುದ್ಧದ ಹೋರಾಟವನ್ನು ಬಲಿಷ್ಠವಾಗಿ ಮುನ್ನಡೆಸಲು ಜಿಲ್ಲಾ ಮಟ್ಟದ ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಯ ಸಲಹೆಗಾರರಾಗಿ ಸಾಮಾಜಿಕ ಚಿಂತಕರಾದ ಎ.ಬಿ.ರಾಮಚಂದ್ರಪ್ಪ,ನಿವೃತ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿನಾರಾಯಣ, ಲಿಂಗದಳ್ಳಿ ಗುರುಶಾಂತಪ್ಪ, ನಿವೃತ್ತ ವಕೀಲರಾದ ಹನುಮಂತಪ್ಪ, ಕೆನರಾ ಬ್ಯಾಂಕ್ ಸ್ಟಫ್ ಫೆಡರೇಷನ್ ಮಾಜಿ ಅಧ್ಯಕ್ಷ ಎಂ.ಆರ್. ಹಿರೇಮಠ,ಕರ್ನಾಟಕ ರಾಜ್ಯ ರೈತ ಸಂಘಟನೆ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಅಧ್ಯಕ್ಷರಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್.ಈಶ್ವರಪ್ಪ ಹಾಗೂ ಸಮಿತಿಯ ಕಾರ್ಯದರ್ಶಿಯಾಗಿ ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಅವರು ಸೇರಿದಂತೆ ವಿವಿಧ ದಲಿತ, ರೈತ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ 21 ಉಪಾಧ್ಯಕ್ಷರು ಹಾಗೂ 20 ಹಳ್ಳಿಗಳ 107 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನಮಗೆ ಕಾರು,ಬಂಗಲೇ, ಬಸ್ಸು ಐಶಾರಾಮಿ ಬೇಡ! ನಮ್ಮ ಹಳ್ಳಿಗಳಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಿ ಎನ್ನುವ ಕೂಗು ಕೇಳಿ ಬಂದಿತು. ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಾವೇಶಕ್ಕೆ ಪೂರಕವಾಗಿ ಈ ಸಮಾವೇಶವು ಯಶಸ್ವಿಯಾಗಿ ನೆರವೇರಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗ್ಯಾರಂಟಿಗಳು ಮಹಿಳೆಯರ ಆರ್ಥಿಕ ಶಕ್ತಿ ಹಾಗೂ ಬಸವಣ್ಣನ ದಾಸೋಹ ತತ್ವ: ಮುಖಂಡರ ಅಭಿಮತ
ಸಮಾವೇಶದಲ್ಲಿ ರಾಜ್ಯ ಉಪಾಧ್ಯಕ್ಷೆ ಅಪೂರ್ವ, ಎಐಯುಟಿಯುಸಿ ಮುಖಂಡ ಮಂಜುನಾಥ್ ಕುಕ್ಕುವಾಡ, ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ ಹಾಗೂ ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.





